ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ಸಿಗರ ಅವಹೇಳನ ಆರೋಪ: ಬಿಜೆಪಿ ವಕ್ತಾರ ಮಾಳವೀಯ ವಿರುದ್ಧ ಎಫ್ಐಆರ್
ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸವನ್ನು ಉಲ್ಲೇಖಿಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಅಮಿತ್ ಮಾಳವೀಯ ವಿಡಿಯೋ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಕಾಂಗ್ರೆಸ್ ನಾಯಕರ ಅಗೌರವ ತಂದಿದೆ ಎಂದು ಆರೋಪಿಸಿ ಹೈಗ್ರೌಂಡ್ಸ್ ಠಾಣೆಗೆ ತೆರಳಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ನೇತೃತ್ವದಲ್ಲಿ ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ದೂರು ನೀಡಿದ್ದರು.
![FIR Against BJP Spokesperson Amit Malviya For Derogatory writing Against Congress Leaders grg FIR Against BJP Spokesperson Amit Malviya For Derogatory writing Against Congress Leaders grg](https://static-ai.asianetnews.com/images/01ergtjss2jnf62x4c8wy5tdn2/bjp1-jpg_363x203xt.jpg)
ಬೆಂಗಳೂರು(ಜೂ.29): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ ಆರೋಪದ ಮೇರೆಗೆ ಬಿಜೆಪಿ ವಕ್ತಾರ ಹಾಗೂ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇತ್ತೀಚಿಗೆ ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸವನ್ನು ಉಲ್ಲೇಖಿಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಅಮಿತ್ ಮಾಳವೀಯ ವಿಡಿಯೋ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಕಾಂಗ್ರೆಸ್ ನಾಯಕರ ಅಗೌರವ ತಂದಿದೆ ಎಂದು ಆರೋಪಿಸಿ ಹೈಗ್ರೌಂಡ್ಸ್ ಠಾಣೆಗೆ ತೆರಳಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ನೇತೃತ್ವದಲ್ಲಿ ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ದೂರು ನೀಡಿದ್ದರು. ಅದರನ್ವಯ ಐಪಿಸಿ 153ಎ (ಪ್ರಚೋದನಾಕಾರಿ ಬರಹ ಪ್ರಕಟ) ಹಾಗೂ 120 ಜಿ (ಅಪರಾಧಿಕ ಒಳ ಸಂಚು) ಸೇರಿದಂತೆ ಇತರ ಪರಿಚ್ಛೇದಗಳಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧದ ಎಫ್ಐಆರ್ ರದ್ದತಿಗೆ ನಕಾರ
ಎಫ್ಐಆರ್ನಲ್ಲೇನಿದೆ?:
ತಮ್ಮ ಟ್ವಿಟರ್ ಖಾತೆಯಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕರನ್ನು ಗುರಿಯಾಗಿಸಿ ವಿಡಿಯೋ ಪೋಸ್ಟ್ ಮಾಡಿ ಸಮಾಜವನ್ನು ಪ್ರಚೋದನೆಗೊಳಿಸುವಂತೆ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಅಂತಾರಾಷ್ಟ್ರೀಯ ಮಾಧ್ಯಮ ಜೊತೆಗಿನ ಒಡನಾಟವು ಭಾರತ ವಿರೋಧಿ ನಿರೂಪಣೆಯನ್ನು ಹರಡುವ ಮತ್ತು ಹಿಂದೂ ಉಗ್ರವಾದದ ಉದಯವನ್ನು ಬಿಂಬಿಸುವ ಮುಖ್ಯಾಂಶಗಳೊಂದಿಗೆ ಪತ್ರಿಕೆಗಳನ್ನು ಪ್ರದರ್ಶಿಸುತ್ತಿದೆ ಎಂದು ವಿಡಿಯೋ ಆರೋಪಿಸಿದೆ.
ಇನ್ನೊಂದು ಆಂತಕಕಾರಿ ಅಂಶವೆಂದರೆ ಇಸ್ಲಾಮಿಕ್ ನಂಬಿಕೆಯ ಜನರೊಂದಿಗೆ ರಾಹುಲ್ ಗಾಂಧಿಯವರ ಸಂವಾದದ ಎಂದು ಅನಿಮೇಷನ್ ಮಾಡಿ ತಪ್ಪಾಗಿ ನಿರೂಪಿಸಲಾಗಿದೆ. ಅವಹೇಳನಕಾರಿ ಚಿತ್ರವನ್ನು ನಿಸ್ಸಂದೇಹವಾಗಿ ವಿವಿಧ ವರ್ಗಗಳ ಜನರ ನಡುವೆ ದ್ವೇಷವನ್ನು ಉಂಟು ಮಾಡುವುದಕ್ಕೆ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತದೆ. ಇದರಿಂದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ಗೌರವಕ್ಕೆ ಕುಂದು ತರುವ ರೀತಿಯಲ್ಲಿ ಸಮಾಜಕ್ಕೆ ತಪ್ಪು ಮಾಹಿತಿ ಹರುಡುವ ಹಾಗೂ ಗುಂಪುಗಳ ಮತ್ತು ಮತದಾರರ ನಡುವೆ ದ್ವೇಷವನ್ನು ಸೃಷ್ಟಿಸುವಲ್ಲಿ ಒಳ ಸಂಚನ್ನು ಮಾಡಿರುವ ಅಮಿತ್ ಮಾಳವೀಯ ಮತ್ತು ಇತರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.