ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರದ್ದು ಎನ್ನಲಾದ  ಆಡಿಯೋ ವೈರಲ್ ಆಗಿದ್ದು, ಇದರಲ್ಲಿ ಅವರು ಹೆಚ್.ಡಿ.ಕೆ ತಮಗೆ ಟಿಕೆಟ್ ನೀಡಿ ಮೋಸ ಮಾಡಿದರು ಎಂದು ಆರೋಪಿಸಿದ್ದಾರೆ. ಅಲ್ಲದೆ, ದಿವಂಗತ ನಟ ಅಂಬರೀಶ್ ಸೇರಿದಂತೆ ಹಲವು ರಾಜಕೀಯ ನಾಯಕರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿರುವುದು ಚರ್ಚೆಗೆ ಕಾರಣವಾಗಿದೆ.

ಮಂಡ್ಯ: ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರ ಆಕ್ಷೇಪಾರ್ಹ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಜೆಡಿಎಸ್ ಕಾರ್ಯಕರ್ತನೊಬ್ಬರೊಂದಿಗೆ ದೂರವಾಣಿ ಸಂಭಾಷಣೆ ವೇಳೆ ಅವರು ಅಶ್ಲೀಲ ಹಾಗೂ ಅವಾಚ್ಯ ಪದಗಳನ್ನು ಬಳಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ದಿವಂಗತ ನಟ ಅಂಬರೀಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ದೂರವಾಣಿ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.

ಹೆಚ್‌ಡಿಕೆ ವಿರುದ್ಧ ಏಕವಚನದಲ್ಲಿ ಕಿಡಿ

ವೈರಲ್ ಆಗಿರುವ ಸಂಭಾಷಣೆಯಲ್ಲಿ, ಮಾತಿನ ಭರದಲ್ಲಿ ಶಿವರಾಮೇಗೌಡ ಹಲವು ರಾಜಕೀಯ ವಿಚಾರಗಳು ಹಾಗೂ ತಮ್ಮ ಅಸಮಾಧಾನಗಳನ್ನು ಬಹಿರಂಗಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ಕಿಡಿಕಾರಿರುವ ಅವರು, “ಲೋಕಸಭೆ ಉಪಚುನಾವಣೆಗೆ ಟಿಕೆಟ್ ನೀಡಿ ನನ್ನಿಂದ ಸುಮಾರು 36 ಕೋಟಿ ರೂಪಾಯಿ ಖರ್ಚು ಮಾಡಿಸಿದರು. ಆದರೆ ನಂತರ ಮತ್ತೆ ಟಿಕೆಟ್ ನೀಡದೆ ನನ್ನನ್ನು ಮೋಸಗೊಳಿಸಿದರು” ಎಂದು ಆರೋಪಿಸಿದ್ದಾರೆ.

ದಿವಂಗತ ನಟ ಅಂಬರೀಷ್ ವಿರುದ್ದವೂ ಕೆಟ್ಟ ಪದ ಬಳಕೆ

ಇದೇ ವೇಳೆ, ಜೆಡಿಎಸ್ ಪಕ್ಷದಲ್ಲಿ ಒಕ್ಕಲಿಗ ಸಮುದಾಯದ ನಾಯಕರನ್ನು ಬೆಳೆಯಲು ಅವಕಾಶ ನೀಡಲಿಲ್ಲ ಎಂಬ ಆರೋಪವನ್ನೂ ಅವರು ಮುಂದಿಟ್ಟಿದ್ದಾರೆ. ಪಕ್ಷದೊಳಗಿನ ನಾಯಕತ್ವದ ರಾಜಕಾರಣವನ್ನು ಪ್ರಶ್ನಿಸಿರುವ ಅವರು, ತಮ್ಮದೇ ಪಕ್ಷದ ಚಲುವರಾಯಸ್ವಾಮಿ, ಮಾಜಿ ಸಂಸದ ದಿವಂಗತ ಮಾದೇಗೌಡ ಹಾಗೂ ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧವೂ ಅವಾಚ್ಯ ಭಾಷೆಯಲ್ಲಿ ಟೀಕೆ ಮಾಡಿರುವುದು ಆಡಿಯೋದಲ್ಲಿ ಕೇಳಿಬರುತ್ತಿದೆ.

ಇದಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಿವರಾಮೇಗೌಡ, “ಅಂಬರೀಶ್ ಅವರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದೆ, ಆದರೆ ಆತ ತೊಳೆದುಬಿಟ್ಟು ಹೋದ ” ಎಂದು ಹೇಳಿಕೊಂಡು, ಬಳಿಕ ಪಕ್ಷ ತೊರೆದು ಹೋದ ವಿಚಾರಕ್ಕೆ ಸಂಬಂಧಿಸಿ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಈ ಆಡಿಯೋ ವೈರಲ್ ಆದ ಬಳಿಕ, ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾರ್ವಜನಿಕ ಜೀವನದಲ್ಲಿರುವ ನಾಯಕರು ಜವಾಬ್ದಾರಿಯುತ ಭಾಷೆ ಬಳಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.