ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರದಲ್ಲಿ ಐಎಎಸ್‌ ಅಧಿಕಾರಿಗಳು ಬಿಳಿ ಆನೆಗಳಿದ್ದಂತೆ. ಸರ್ಕಾರದ ಸಣ್ಣಪುಟ್ಟನೌಕರರ ಆರ್ಥಿಕ ಬೇಡಿಕೆಗಳ ಈಡೇರಿಕೆ ಸಂದರ್ಭ ಬಂದಾಗ ಐಎಎಸ್‌ ಅಧಿಕಾರಿಗಳು ಅಡ್ಡಗಾಲು ಹಾಕುತ್ತಾ ಬಂದಿರುವುದು ನಿರಂತರ ನಡೆದಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿ (ಆ.21): ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರದಲ್ಲಿ ಐಎಎಸ್‌ ಅಧಿಕಾರಿಗಳು ಬಿಳಿ ಆನೆಗಳಿದ್ದಂತೆ. ಸರ್ಕಾರದ ಸಣ್ಣಪುಟ್ಟನೌಕರರ ಆರ್ಥಿಕ ಬೇಡಿಕೆಗಳ ಈಡೇರಿಕೆ ಸಂದರ್ಭ ಬಂದಾಗ ಐಎಎಸ್‌ ಅಧಿಕಾರಿಗಳು ಅಡ್ಡಗಾಲು ಹಾಕುತ್ತಾ ಬಂದಿರುವುದು ನಿರಂತರ ನಡೆದಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ನೌಕರರ ವೇತನ ಹೆಚ್ಚಳ, ಎನ್‌ಪಿಎಸ್‌ನಿಂದ ಒಪಿಎಸ್‌ ಪುನರ್‌ಸ್ಥಾಪನೆ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮುಂದೆ ಬಂದಾಗ ಐಎಎಸ್‌ ಅಧಿಕಾರಿಗಳು ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎನ್ನುವ ಸಬೂಬು ಹೇಳುತ್ತಾರೆ. ಇಂತಹ ಕಾರಣಗಳಿಗೆ ಮುಖ್ಯಮಂತ್ರಿಗಳಾದವರು ಯಾವ ಕಾರಣಕ್ಕೂ ಸೊಪ್ಪು ಹಾಕದೇ ನೌಕರರ ಬೇಡಿಕೆ ಈಡೇರಿಸುವ ಮನಸ್ಸು ಹೊಂದಬೇಕಿದೆ ಎಂದು ಹೇಳಿದರು.

ಹೋರಾಟ ನಡೆಸಿದಾಗ ಕೇಸ್‌ ಸಹಜ, ಹೆದರದಿರಿ: ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ

ಪ್ರಸ್ತುತ ಸರ್ಕಾರದ ಸಿಎಂ ಮತ್ತು ಡಿಸಿಎಂ ಚುನಾವಣೆಗೂ ಮುನ್ನ ಎನ್‌ಪಿಎಸ್‌ ತೆಗೆದು ಹಾಕಿ ಒಪಿಎಸ್‌ ಕೊಡುತ್ತೇವೆ ಎಂದು ಭರವಸೆ ನೀಡಿದ್ದರೂ ಮಾತು ಕೊಟ್ಟಂತೆ ಒಪಿಎಸ್‌ ಕೊಡಬೇಕು ಎಂದು ಒತ್ತಾಯಿಸಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿ ಒಗ್ಗಟ್ಟು ಪ್ರದರ್ಶಿಸಬೇಕು. ಸಂಘಕ್ಕೆ 2ನೇ ಬಾರಿಗೆ ಮಹಿಳಾ ಅಧ್ಯಕ್ಷ ಪಟ್ಟದೊರಕಿರುವುದು ಸಂತಸದ ವಿಷಯವಾಗಿದೆ ಎಂದರು.

ಬಿಇಒ ನಂಜರಾಜ, ಬಿಆರ್‌ಸಿ ತಿಪ್ಪೇಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರುದ್ರಪ್ಪ, ದೈಹಿಕ ಶಿಕ್ಷಣ ಅಧಿಕಾರಿ ಈಶ್ವರಪ್ಪ, ಸರ್ಕಾರಿ ನೌಕರರ ತಾಲೂಕು ಸಂಘದ ಅಧ್ಯಕ್ಷ ಆರ್‌.ಎಸ್‌.ಪಾಟೀಲ್‌ ಮಾತನಾಡಿದರು. ಶಾಸಕ ಡಿ.ಜಿ.ಶಾಂತನಗೌಡ ನೂತನ ಅಧ್ಯಕ್ಷರಿಗೆ ಶುಭ ಕೋರಿದರು. ತಾಲೂಕು ಪ್ರಾಥಮಿಕ ಶಾಲಾ ಶೀಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಬಿ.ನೀಲಮ್ಮ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಕೆ.ಪ್ರಕಾಶನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ದಿವಾಳಿಯ ಸ್ಥಿತಿಗೆ ತಲುಪಿದ ಕಾಂಗ್ರೆಸ್‌ ಸರ್ಕಾರ: ಪ್ರಲ್ಹಾದ್‌ ಜೋಶಿ

ನ್ಯಾಮತಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜಬಾವಿ, ಹೊನ್ನಾಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಗೀತಾ, ಸಾಂಸ್ಕೃತಿಕ ಕಾರ್ಯದರ್ಶಿ ಕುಮಾರನಾಯ್ಕ, ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕ ಬಿ.ಎನ್‌.ರುದ್ರೇಶ್‌ ಸ್ವಾಗತಿಸಿದರು. ಸಂಘದ ಸಹ ಕಾರ್ಯದರ್ಶಿ ಎಚ್‌.ಕೆ.ಚಂದ್ರಶೇಖರಪ್ಪ ನಿರೂಪಿಸಿದರು.