Asianet Suvarna News Asianet Suvarna News

ರಾಮನ ಜನ್ಮಪತ್ರ ಕೇಳಿದ್ದ ಕಾಂಗ್ರೆಸ್‌ಗೆ ಜ್ಞಾನೋದಯ: ಎಂ.ಪಿ.ರೇಣುಕಾಚಾರ್ಯ ಲೇವಡಿ

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇತ್ತು ಅಂದವರಿಗೆ, ಶ್ರೀರಾಮನ ಜನ್ಮಪತ್ರ ಕೇಳಿದವರಿಗೆ, ಕರ ಸೇವಕರ ಮೇಲೆ ಕೇಸ್ ದಾಖಲಿಸಿದ ಕಾಂಗ್ರೆಸ್ಸಿಗರಿಗೆ ಈಗ ಜ್ಞಾನೋದಯವಾಗಿದ್ದು, ಇದೀಗ ತಮ್ಮ ತಪ್ಪಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ.
 

Ex Minister MP Renukacharya Slams On Congress Govt At Davanagere gvd
Author
First Published Jan 14, 2024, 11:59 PM IST

ದಾವಣಗೆರೆ (ಜ.14): ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇತ್ತು ಅಂದವರಿಗೆ, ಶ್ರೀರಾಮನ ಜನ್ಮಪತ್ರ ಕೇಳಿದವರಿಗೆ, ಕರ ಸೇವಕರ ಮೇಲೆ ಕೇಸ್ ದಾಖಲಿಸಿದ ಕಾಂಗ್ರೆಸ್ಸಿಗರಿಗೆ ಈಗ ಜ್ಞಾನೋದಯವಾಗಿದ್ದು, ಇದೀಗ ತಮ್ಮ ತಪ್ಪಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನೆ ವಿಚಾರವಾಗಿ ಕಾಂಗ್ರೆಸ್ಸಿಗರಿಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯು ತೀವ್ರವಾಗಿ ಕಾಡುತ್ತಿದ್ದು, ಅಯೋಧ್ಯೆಯಲ್ಲೇ ಬಾಬರಿ ಮಸೀದಿ ಇತ್ತು ಅಂದವರಿಗೆಲ್ಲಾ ಈಗ ಜ್ಞಾನೋದಯವೂ ಆಗಿದೆ ಎಂದರು.

ಬಾಬರಿ ಮಸೀದಿಯು ದೇಶಕ್ಕೆ ಕಳಂಕ. ಅದನ್ನು ತೆಗೆಯಲು ದೇಶದ ಮೂಲೆ ಮೂಲೆಯಿಂದಲೂ ಲಕ್ಷಾಂತರ ಕರ ಸೇವಕರು ಪಾದಯಾತ್ರೆ ಮಾಡಿದ್ದರು. ಕರ ಸೇವಕರ ಮೇಲೆ ಗುಂಡು ಹಾರಿಸಿದ್ದೇ ಕಾಂಗ್ರೆಸ್. ಆದರೆ, ಈಗ ಅದೇ ಕಾಂಗ್ರೆಸ್‌ಗೆ ತಡವಾಗಿ ಅರಿವು ಮೂಡಿದೆ. ಎಐಸಿಸಿ ನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೂ ಅಯೋಧ್ಯೆಗೆ ಆಹ್ವಾನಿಸಲಾಗಿದೆ. ಆದರೆ, ಅವರ್ಯಾರೂ ಬರುತ್ತಿಲ್ಲ. ಉದ್ಘಾಟನೆ ನಂತರ ಭೇಟಿ ನೀಡುವುದಾಗಿ ಹೇಳುತ್ತಿದ್ದಾರೆ. ಹಿಂಬಾಗಿಲ ರಾಜಕಾರಣ ಮಾಡಬೇಡಿ. ರಾಮನ ಬಗ್ಗೆ ಮಾತನಾಡಿದರೆ, ಅಯೋಧ್ಯೆಗೆ ಹೋಗುವುದಾಗಿ ಹೇಳಿದರೆ ಎಲ್ಲಿ ಅಲ್ಪಸಂಖ್ಯಾತರ ಮತಗಳು ಕೈ ತಪ್ಪುತ್ತವೋ ಎಂಬ ಭೀತಿಯಲ್ಲಿ ಕಾಂಗ್ರೆಸ್ ಪಕ್ಷವಿದೆ ಎಂದು ಅವರು ಟೀಕಿಸಿದರು.

ಪೂರ್ಣಗೊಳ್ಳದ ಶ್ರೀರಾಮಮಂದಿರ ಉದ್ಘಾಟನೆ ಸರಿಯಲ್ಲ: ವಿ.ಎಸ್.ಉಗ್ರಪ್ಪ

ಬಿಜೆಪಿ ಹಿರಿಯ ಮುಖಂಡರಾದ ಡಾ.ಟಿ.ಜಿ.ರವಿಕುಮಾರ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಶಿವಪ್ರಕಾಶ, ರಾಜು ವೀರಣ್ಣ, ಶಿವನಗೌಡ ಟಿ.ಪಾಟೀಲ್, ಪ್ರವೀಣ ಜಾಧವ್, ದಯಾನಂದ, ಜಯರುದ್ರೇಶ, ಮೋಹನ, ಅಣಜಿ ಬಸವರಾಜ ಇತರರು ಇದ್ದರು. ಯುವನಿಧಿ ಯೋಜನೆ ಬೋಗಸ್: ಶಿವಮೊಗ್ಗದಲ್ಲಿ ನಿನ್ನೆ ಉದ್ಘಾಟನೆಯಾದ ಯುವನಿಧಿ ಕಾರ್ಯಕ್ರಮವೇ ಬೋಗಸ್ ಆಗಿದ್ದು, ನಿಯಮಾವಳಿಗಳನ್ನೆಲ್ಲಾ ಗಾಳಿಗೆ ತೂರಿ, ಮಾನದಂಡಗಳನ್ನೆಲ್ಲಾ ಧಿಕ್ಕರಿಸಿ ಕಾರ್ಯಕ್ರಮ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು. ಯುವನಿಧಿ ಕಾರ್ಯಕ್ರಮಕ್ಕೆ ಶಿವಮೊಗ್ಗಕ್ಕೆ ನೆರೆಯ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳನ್ನು ಕರೆಸಿಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳನ್ನೆಲ್ಲಾ ಕಾರ್ಯಕ್ರಮಕ್ಕೆ ಕರೆಸಿಕೊಂಡಿದ್ದಾರೆ ಎಂದರು.

ಶಿಕ್ಷಣ ವ್ಯವಸ್ಥೆ ಜಾತಿ, ನಿರಪೇಕ್ಷಿತವಾಗರಬೇಕು: ಶಾಸಕ ನಾರಾಯಣಸ್ವಾಮಿ

ಬಸ್‌ಗಳನ್ನು ವಿಂಗಡಣೆ ಮಾಡಿ, ಕಾಲೇಜು ವಿದ್ಯಾರ್ಥಿಗಳನ್ನು ಬಲವಂತವಾಗಿ, ಒತ್ತಾಯ ಪೂರ್ವಕವಾಗಿ ಯುವನಿಧಿ ಕಾರ್ಯಕ್ರಮಕ್ಕೆ ಕರೆಸಿಕೊಂಡಿದ್ದು ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ಕಾರ್ಯಕ್ರಮಕ್ಕೆ ಹೋದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಊಟ, ಉಪಹಾರವೂ ಇಲ್ಲದಂತೆ ಬಿಸಿಲಿನಲ್ಲಿ ಕೂಡುವಂತೆ ಮಾಡಿದ್ದಾರೆ. ಯುವನಿಧಿ ಕಾರ್ಯಕ್ರಮದಲ್ಲೂ ವಿದ್ಯಾರ್ಥಿಗಳು ಜೈ ಶ್ರೀರಾಮ ಎಂದು ಜಪ ಮಾಡಿ, ಮೋದಿಗೆ ಜಯಕಾರ ಹಾಕಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಲಿ ಕುರ್ಚಿಗಳ ಮುಂದೆ ಭಾಷಣ ಮಾಡಿದ್ದಾರೆ. ಗ್ಯಾರಂಟಿಗಳ ಉಸ್ತುವಾರಿಗೆ 16 ಕೋಟಿ ರು. ಖರ್ಚು ಮಾಡಿದ್ದಾರೆಂದರೆ ಅದ್ಯಾವ ಪರಿ ಆಡಳಿತ ಇದೆಯೆಂಬುದನ್ನು ಯಾರಾದರೂ ಗ್ರಹಿಸಬಹುದು ಎಂದು ಟೀಕಿಸಿದರು.

Follow Us:
Download App:
  • android
  • ios