ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳಾಗಿಲ್ಲ. ಆಗಲೇ ಸರ್ಕಾರ ಉರುಳಿಸಲು ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ಅವರು ಹೇಳುತ್ತಿದ್ದಾರೆ. 

ಶಿವಮೊಗ್ಗ (ಜು.27): ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳಾಗಿಲ್ಲ. ಆಗಲೇ ಸರ್ಕಾರ ಉರುಳಿಸಲು ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ಅವರು ಹೇಳುತ್ತಿದ್ದಾರೆ. ಸಿಂಗಾಪುರದಲ್ಲಿ ಯಾರು ಸರ್ಕಾರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂಬುದನ್ನು ಅವರೇ ಹೇಳಬೇಕು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿ.ಕೆ.ಹರಿಪ್ರಸಾದ್‌ ಕೂಡ ನಮಗೆ ಸಿಎಂ ಮಾಡುವುದೂ ಗೊತ್ತು, ಇಳಿಸುವುದೂ ಗೊತ್ತು ಎಂದು ಹೇಳಿದ್ದಾರೆ. ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತ ಅಲ್ಲ. 

ರಾಷ್ಟ್ರೀಯ ನಾಯಕರೂ ಆಗಿರುವುದರಿಂದ ಅವರ ಹೇಳಿಕೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು. ಕಾಂಗ್ರೆಸ್‌ ಪಕ್ಷದೊಳಗೆಯೇ 30ಕ್ಕೂ ಹೆಚ್ಚು ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಮುಖ್ಯಮಂತ್ರಿ ಅವ​ರಿಗೆ ಬಹಿರಂಗವಾಗಿಯೇ ಪತ್ರ ಬರೆದಿದ್ದು, ವೈರಲ್‌ ಆಗಿದೆ. ಪತ್ರ ನಕಲಿಯಾಗಿರಲು ಸಾಧ್ಯವೇ ಇಲ್ಲ. ನಕಲಿಯಾಗಿದ್ದರೆ ತನಿಖೆ ಆಗಲಿ. ಕಾಂಗ್ರೆಸ್‌ನವರೇ ಮಾಡುತ್ತಿದ್ದಾರೋ, ಬೇರೆ ಪಕ್ಷದವರು ಮಾಡುತ್ತಿದ್ದಾರೋ ಎಂಬುದನ್ನು ಅವರೇ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.

ಶೀಘ್ರ ಹೊಸ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್‌: ಸಚಿವ ದಿನೇಶ್‌ ಗುಂಡೂರಾವ್‌

ಗುತ್ತಿಗೆದಾರರ ಕಾಮಗಾರಿಯ ಬಿಲ್‌ ಸುಮಾರು .28 ಸಾವಿರ ಕೋಟಿ ಇದೆ ಎಂದು ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ ಅವರು ಹಿಂದಿನ ಸರ್ಕಾರದ ಸಂದರ್ಭದಲ್ಲಿ ಹೋರಾಟ ಮಾಡಿದ್ದರು. 40 ಪರ್ಸೆಂಟ್‌ ಕಮಿ​ಷ​ನ್‌ ಬಗ್ಗೆಯೂ ಆರೋಪ ಮಾಡಿದ್ದರು. ಕಾಂಗ್ರೆಸ್‌ ಏಜೆಂಟರಾಗಿರುವ ಅವರು ಗುತ್ತಿಗೆದಾರರಿಗೆ ಈವರೆಗೆ ಒಂದು ನಯಾಪೈಸೆಯನ್ನು ಸಹ ಬಿಡುಗಡೆ ಮಾಡಿಸಿಲ್ಲ. ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಾನಿಗೊಳಗಾದ ಪ್ರದೇಶಗಳಿಗೆ ಸಚಿವರು ಗಮನಹರಿಸುತ್ತಿಲ್ಲ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ನೀರಾವರಿ ಇಲಾಖೆಯ ಅನೇಕ ಕಾಮಗಾರಿಗಳು ಆಗಿದ್ದು, ಕೆಲವು ಅರ್ಧಕ್ಕೆ ನಿಂತು ಮಳೆಗಾಲ ಹಿನ್ನೆಲೆ ಕಟ್ಟಡಗಳು ಹಾಳಾಗುತ್ತಿವೆ. ಡಿ.ಕೆ.ಶಿವಕುಮಾರ್‌ ಕಾಮಗಾರಿಗಳಿಗೆ ಅನುದಾನ ಕೇಳಬೇಡಿ ಎಂದು ಶಾಸಕರಿಗೆ ಹೇಳುತ್ತಿದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ಆದ ಕಾಮಗಾರಿಗಳನ್ನು ನಿಲ್ಲಿಸಬಾರದು. ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್‌.ಎನ್‌. ಚನ್ನಬಸಪ್ಪ, ಪ್ರಮುಖರಾದ ಜಗದೀಶ್‌, ಶಿವರಾಜ್‌, ನಾಗರಾಜ್‌, ಚಂದ್ರಶೇಖರ್‌, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.

ಉಡುಪಿ ಮುಸ್ಲಿಂ ಯುವ​ತಿ​ಯರ ಪ್ರಕ​ರಣ ತನಿ​ಖೆ​ಯಾ​ಗ​ಲಿ: ಮಹಿಳೆಯನ್ನು ತಾಯಿಯ ರೂಪದಲ್ಲಿ ನೋಡುವ ದೇಶದಲ್ಲೇ ಅವಳ ಅಂಗಾಗವನ್ನು ಚಿತ್ರಿಸುವ ಘಟನೆಗಳು ನಡೆಯುತ್ತಿರುವುದು ದುರಂತ. ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ಯುವತಿಯರು ಹಿಂದೂ ಯುವತಿಯರ ಅಂಗಾಂಗಳನ್ನು ಚಿತ್ರೀಕರಿಸಿ ಮುಸ್ಲಿಂ ಯುವಕರಿಗೆ ಕೊಡುತ್ತಿದ್ದು, ಇದರ ಹಿಂದೆ ಯಾರೆಲ್ಲಾ ಇದ್ದಾರೆಂಬ ಬಗ್ಗೆ ತನಿಖೆ ಆಗಬೇಕು. ಹಿಂದೂ ಸಮಾಜ ಜಾಗೃತವಾಗಿ ತಿರುಗಿಬೀಳುವ ಮುನ್ನ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.

ಮಹದಾಯಿ ವಿಷಯದಲ್ಲಿ ರಾಜ್ಯದ ರೈತರಿಗೆ ಅನ್ಯಾಯವಾಗಲು ಬಿಡಲ್ಲ​​​​​: ಸಿದ್ದರಾಮಯ್ಯ

‘ಮುಸ್ಲಿಂ ಗೂಂಡಾ​ಗಳೇ ಕಾರಣ’: ಶಾಸಕ ತನ್ವೀರ್‌ ಶೇಠ್‌ ಅವರು ಕೆ.ಜೆ.ಹಳ್ಳಿ- ಡಿ.ಜೆ.ಹಳ್ಳಿ, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಇನ್ನಿತರ ಕಡೆ ನಡೆದ ಕೋಮುಗಲಭೆಯ ಕೇಸನ್ನು ವಾಪಸ್‌ ಪಡೆಯುವಂತೆ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಈ ಎಲ್ಲ ಘಟನೆಗಳಿಗೆ ಮುಸ್ಲಿಂ ಗೂಂಡಾಗಳೇ ಕಾರಣ ಎಂಬುವುದು ಸ್ಪಷ್ಟವಾಗಿದೆ. ಯಾವುದೇ ಕಾರಣಕ್ಕೂ ಕೇಸನ್ನು ವಾಪಸ್‌ ಪಡೆಯಬಾರದು. ಒಂದು ವೇಳೆ ಕೇಸ್‌ ವಾಪಾಸು ಪಡೆದರೆ ಮುಸ್ಲಿಂ ಗೂಂಡಾಗಳಿಗೆ ಹಾಗೂ ಕೋಮು ಗಲಭೆಗೆ ಸರ್ಕಾರ ಬೆಂಬಲಿಸಿದಂತಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹರಿಹಾಯ್ದರು.