ಮಹದಾಯಿ ಯೋಜನೆ ವಿಷಯದಲ್ಲಿ ಕರ್ನಾಟಕದ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. 

ಹಾವೇರಿ (ಜು.26): ಮಹದಾಯಿ ಯೋಜನೆ ವಿಷಯದಲ್ಲಿ ಕರ್ನಾಟಕದ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ‘ಮಹದಾಯಿ ವನ್ಯಜೀವಿ ಅಭಯಾರಣ್ಯ’ವನ್ನು ‘ಹುಲಿ ಸಂರಕ್ಷಿತ ಭಯಾರಣ್ಯ’ಪ್ರದೇಶವೆಂದು ಘೋಷಣೆ ಮಾಡುವಂತೆ ಮುಂಬೈ ಹೈಕೋರ್ಟ್‌ನ ಗೋವಾ ಪೀಠ ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಹದಾಯಿ ಯೋಜನೆಗೆ ಗೆಜೆಟ್‌ ನೋಟಿಫಿಕೇಶನ್‌ ಆಗಿದೆ. ಪರಿಸರ ಇಲಾಖೆಯ ಕ್ಲಿಯರೆನ್ಸ್‌ ಆಗಿಲ್ಲವಷ್ಟೆ. 

Add Asianetnews Kannada as a Preferred SourcegooglePreferred

ಇದೇ ವೇಳೆ ಗೋವಾ ಸರ್ಕಾರವೂ ಯೋಜನೆಗೆ ತಕರಾರು ಮಾಡುತ್ತಿದೆ. ಡಬಲ್‌ ಎಂಜಿನ್‌ ಸರ್ಕಾರವಿದ್ದಾಗ ಅವರು ಯಾಕೆ ಯೋಜನೆ ಕಾರ‍್ಯಗತ ಮಾಡಲಿಲ್ಲ? ಗೋವಾದಲ್ಲೂ ಅವರದೇ ಸರ್ಕಾರವಿತ್ತಲ್ಲ? ಎಂದ ಅವರು, ಈಗಲೂ ನಾವು ಯೋಜನೆ ಜಾರಿಗೆ ಪ್ರಯತ್ನ ಮಾಡುತ್ತೇವೆ. ಕರ್ನಾಟಕದ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವೈದ್ಯರೇ ರೋಗಿಗಳಿಗೆ ನಗುಮುಖದಿಂದ ಚಿಕಿತ್ಸೆ ನೀಡಿ: ಸಚಿವ ದಿನೇಶ್‌ ಗುಂಡೂರಾವ್‌

ಸುಪ್ರೀಂಗೆ ಹೋಗಲು ರಾಜ್ಯ ರೈತರ ಸಿದ್ಧತೆ: ‘ಮಹದಾಯಿ ವನ್ಯ ಜೀವಿ ಅಭಯಾರಣ್ಯ’ವನ್ನು ‘ಹುಲಿ ಸಂರಕ್ಷಿತ ಅಭಯಾರಣ್ಯ’ ಎಂದು ಘೋಷಿಸುವಂತೆ ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಿರುವುದಕ್ಕೆ ಆತಂಕಿತರಾದ ‘ಕಳಸಾ-ಬಂಡೂರಿ ಹೋರಾಟ’ಗಾರರು ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಈ ಕೂಡಲೇ ‘ಸರ್ವಪಕ್ಷ ಸಭೆ’ ಕರೆದು ಈ ಬಗ್ಗೆ ಚರ್ಚೆ ನಡೆಸಬೇಕು. ಜತೆಗೆ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟು ಹೋರಾಟಕ್ಕೆ ಅಣಿಯಾಗಿದ್ದಾರೆ.

ಮಹದಾಯಿ ಹಾಗೂ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಯನ್ನು ಜಾರಿಗೊಳಿಸಲು ಬೇಕಾದ ಯೋಜನೆಯನ್ನು ಕೈಗೆತ್ತಿಕೊಳ್ಳಲು ಯಾವುದೇ ಅಡ್ಡಿ ಆತಂಕ ಬರಬಾರ ದೆಂಬ ಉದ್ದೇಶದಿಂದಲೇ ನ್ಯಾಯಾಧಿಕರಣ ರಚನೆಯಾಗಿತ್ತು. ನ್ಯಾಯಾಧಿಕರಣವೇ ನಮ್ಮ ಪಾಲಿನ ನೀರನ್ನು ಗೊತ್ತು ಮಾಡಿ ತೀರ್ಪು ನೀಡಿದೆ. ಕೇಂದ್ರ ಸರ್ಕಾರವೂ ಅಧಿಸೂಚನೆ ಹೊರಡಿಸಿ, ಡಿಪಿಆರ್‌ಗೂ ಒಪ್ಪಿಕೊಂಡಿದೆ. ಆದಕಾರಣ ತೀರ್ಪಿನಂತೆ ಕೂಡಲೇ ಯೋಜನೆ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಹುಲಿ ಸೇರಿದಂತೆ ಯಾವುದೇ ವನ್ಯಜೀವಿ ಗಳಿಗೆ ಅಡ್ಡಿಯಾಗದಂತೆ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರವೇ ಮುಂದಾಗಬೇಕು ಎಂದು ‘ರೈತ ಸೇನೆ ಕರ್ನಾಟಕ’ ಆಗ್ರಹಿಸಿತು.

ಹುಲಿ ಸಂರಕ್ಷಿತ ಪ್ರದೇಶವಾಗಲು ಸಾಧ್ಯವಿಲ್ಲ: ಮಹದಾಯಿ ಅಭಯಾರಣ್ಯ ಪ್ರದೇಶ ಜನದಟ್ಟಣೆ ಪ್ರದೇಶವಾಗಿದೆ, ಹುಲಿ ಸಂರಕ್ಷಿತ ಪ್ರದೇಶ ಆಗಲು ಸಾಧ್ಯವಿಲ್ಲ ಎಂದು ರೈತ ಸೇನಾ ಸಂಘಟನೆಯ ರಾಜ್ಯಕಾರ್ಯದರ್ಶಿ ಎಸ್‌.ಬಿ. ಜೋಗಣ್ಣವರ ಹೇಳಿದರು. ಅವರು 2935ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ಗೋವಾ ರಾಜ್ಯದ ಎನ್‌ಜಿಒ ಸಂಸ್ಥೆ ಕೋರ್ಟ್‌ಗೆ ಪಿಐಎಲ್ ಹಾಕಿದ್ದರಿಂದ ಬಾಂಬೆ ಹೈಕೋರ್ಟ್‌ ಈ ಪ್ರದೇಶವನ್ನು ಮಹದಾಯಿ ಅಭಯಾರಣ್ಯ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದೆ. 

ಮಳೆ ಹಾಗೂ ಪ್ರವಾಹದ ಸಂದರ್ಭದಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಿ: ಸಿದ್ದರಾಮಯ್ಯ

ಆದರೆ ಇದರಿಂದ ನಮಗಿಂತ ಗೋವಾ ರಾಜ್ಯದವರಿಗೆ ತೊಂದರೆ ಆಗುತ್ತದೆ. ಮೇಲಾಗಿ ಈಗಾಗಲೇ ಕೇಂದ್ರ ಸರ್ಕಾರ ಕುಡಿಯುವ ನೀರಿನ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆಗೆ ಗೆಜೆಟ್‌ ನೋಟಿಫಿಕೇಷಿನ್‌ ಹೊರಡಿಸಿದೆ. ಯೋಜನೆಗೆ ಡಿಪಿಆರ್‌ ನೀಡಿದೆ. ಆದ್ದರಿಂದ ನಾವು ಕೋರ್ಟ್‌ಗೆ ಪಿಐಎಲ… ಸಲ್ಲಿಸಿ ಇಲ್ಲಿನ ವಾಸ್ತವ ಸ್ಥಿತಿ ತಿಳಿಸಬಹುದು, ಮೇಲಾಗಿ ಈ ಪ್ರದೇಶ ಹುಲಿ ಸಂರಕ್ಷಿತ ಪ್ರದೇಶವಾಗಲು ಸಾಧ್ಯವಿಲ್ಲ. ಏಕೆಂದರೆ ಈ ಪ್ರದೇಶವು ಜನ ದಟ್ಟಣೆ ಪ್ರದೇಶವಾಗಿದ್ದರಿಂದ ಹುಲಿ ಸಂರಕ್ಷಿತ ಪ್ರದೇಶವಾಗಲು ಹೇಗೆ ಸಾಧ್ಯಎಂದು ಪ್ರಶ್ನಿಸಿದರು.