Asianet Suvarna News Asianet Suvarna News

ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ: ಎಚ್‌.ಡಿ.ಕುಮಾರಸ್ವಾಮಿ

ತಮ್ಮ ಸಂಪುಟದ ಸಚಿವರ ಮಾನಗೇಡಿ ಕೃತ್ಯಗಳನ್ನು ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ. 

Ex CM HD Kumaraswamy Slams On CM Siddaramaiah gvd
Author
First Published Aug 9, 2023, 10:10 AM IST | Last Updated Aug 9, 2023, 10:10 AM IST

ಬೆಂಗಳೂರು (ಆ.09): ತಮ್ಮ ಸಂಪುಟದ ಸಚಿವರ ಮಾನಗೇಡಿ ಕೃತ್ಯಗಳನ್ನು ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ. ಮಂಗಳವಾರ ಟ್ವೀಟ್‌ ಮಾಡಿರುವ ಅವರು ‘ನಕಲಿ ಪತ್ರ ಎಂದಾದರೆ ರಾಜ್ಯಪಾಲರ ಕಾರ್ಯಾಲಯ ನಕಲಿ ಪತ್ರದ ಮೇರೆಗೆ ಕ್ರಮ ಜರುಗಿಸಿ ಎಂದು ಷರಾ ಬರೆದಿದೆಯೇ? ಸುಳ್ಳಿನ ಪತ್ರಕ್ಕೆ ರಾಜ್ಯಪಾಲರು ಸ್ಪಂದಿಸಿದ್ದಾರೆಯೇ? ರಾಜಧರ್ಮದ ಪ್ರವಚನಕಾರರೇ ರಾಜಭವನದ ಪಾವಿತ್ರ್ಯವನ್ನೇ ಶಂಕಿಸುವುದೇ ತರವೇ ಎಂದಿದ್ದಾರೆ.

‘ನಿಮ್ಮ ಸಚಿವರ ವಿರುದ್ಧ ನಿಮ್ಮ ಕಾಂಗ್ರೆಸ್‌ ಶಾಸಕರೇ ಬರೆದ ಪತ್ರವನ್ನೇ ನಕಲಿ ಎಂದು ಬಿಂಬಿಸಿದ ‘ನಕಲಿರಾಮ’ನ ಉಪ್ಪುಹುಳಿ ಖಾರದ ಬಗ್ಗೆ ನನಗೆ ಗೊತ್ತಿಲ್ಲದೇನಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಉಗಿದು ಉಪ್ಪಾಕಿದ ಮೇಲೆ ನಕಲಿ ಪತ್ರ ‘ಅಸಲಿ’ಯಾದ ಕಥೆಯ ಹಕೀಕತ್ತು ಏನಿರಬಹುದು ಸಿಎಂ ಸಾಹೇಬರೇ? ನಿಮ್ಮ ರಾಜಕೀಯ ಬದುಕಿಗೆ ಬ್ಲ್ಯಾಕ್‌ ಮೇಲೇ ಬಂಡವಾಳ. ಗೃಹಸಚಿವರು, ಹಿರಿಯ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ‘ಅಪ್ಪಯ್ಯ ಮತ್ತು ಅತೀಂದ್ರನ ಆಟಾಟೋಪ ಕಂಡು ಹೌಹಾರಿದವರು ಯಾರು? ವರ್ಗಾವಣೆ ಪಟ್ಟಿಗೆ ಅಲ್ಲಿ ಬಿದ್ದು ಟಿಕ್ಕುಗಳ ಲೆಕ್ಕ ಹೇಳಬೇಕಾ ಟಿಕ್‌ ಟಿಕ್‌ ಸಿದ್ದರಾಮಯ್ಯ?’ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ದಸರಾ ಮಹೋತ್ಸವದ ಗಜಪಡೆ ಮೊದಲ ಪಟ್ಟಿ ಫೈನಲ್: ಆನೆಗಳ ವಿವರ ಇಲ್ಲಿದೆ!

ಸಿದ್ದು ನನ್ನ ಕೆಣಕಬೇಡಿ: ‘ನಾನು ಹಿಟ್‌ ಅಂಡ್‌ ರನ್‌ ಮಾಡುವ ವ್ಯಕ್ತಿಯಲ್ಲ. ನಡೆದಿರುವುದನ್ನು ಹೇಳಿದ್ದೇನೆ. ಮಿಸ್ಟರ್‌ ಸಿದ್ದರಾಮಯ್ಯ, ನಿಮ್ಮಂತೆ ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಮ್ಮ ವಿರುದ್ಧ ಟೀಕೆಗಳನ್ನು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ತಿರುಗೇಟು ನೀಡಿದರು. ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌, ಪೇ ಸಿಎಂ ಆರೋಪ ಮಾಡಲಾಗಿತ್ತು. ಆ ಆರೋಪಗಳ ಕಥೆ ಏನು? ಒಂದು ದಾಖಲೆಯನ್ನಾದರೂ ಹೊರಗೆ ಬಿಟ್ಟರಾ? ನಿಮ್ಮ ಯೋಗ್ಯತೆ ನನಗೆ ಗೊತ್ತಿಲ್ಲವೇ? ಈಗ ನಿಮ್ಮದೇ ಸರ್ಕಾರವಿದೆ, ದಾಖಲೆ ಏಕೆ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಜನ್ಮದಲ್ಲಿ ಅಣ್ಣನಾಗಲು ಸಾಧ್ಯವಿಲ್ಲ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಕಿಡಿಕಾರಿದ ಅವರು, ಕುಮಾರಸ್ವಾಮಿಯವರು ಖಷಿಯಿಂದ ಮಾತಾನಾಡುತ್ತಾರೆ. ಅಣ್ಣ ಮಾತನಾಡಲಿ, ತಮ್ಮ ಕೇಳುತ್ತೇನೆ ಎಂದಿದ್ದಾರೆ. ಸದ್ಯಕ್ಕೆ ಅಂತಹ ತಮ್ಮ ನನಗಿಲ್ಲ. ಈ ಜನ್ಮದಲ್ಲಂತೂ ಅವರಿಗೆ ನಾನು ಅಣ್ಣನಾಗಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಕಡಲು ಸೇರುವ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ 840 ಕೋಟಿ ರು. ಯೋಜನೆ: ಸಚಿವ ಈಶ್ವರ ಖಂಡ್ರೆ

ಪ್ರಿಯಾಂಕ್‌ ಖರ್ಗೆ ವಿರುದ್ಧ ವಾಗ್ದಾಳಿ: ಎಸ್‌ಪಿ ರಸ್ತೆಯಿಂದ ಪೆನ್‌ಡ್ರೈವ್‌ ತರುವ ಅಗತ್ಯವಿಲ್ಲ. ನಾನು ಯಾವುದೇ ನಕಲಿ ದಾಖಲೆ ಸೃಷ್ಟಿಸಿಲ್ಲ. ದಾಖಲೆ ಬಿಡುಗಡೆ ಮಾಡಿದರೆ ನಕಲಿ, ಮಿಮಿಕ್ರಿ ಎನ್ನುತ್ತಾರೆ. ಅದಕ್ಕೆ ಸರಿಯಾದ ಸಮಯದಲ್ಲಿಯೇ ಪೆನ್‌ಡ್ರೈವ್‌ ಹೊರಬಿಡುತ್ತೇನೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ಪೆನ್‌ಡ್ರೈವ್‌ ಸಂಬಂಧ ಆರೋಪಿತ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸುವ ಧೈರ್ಯ ಮುಖ್ಯಮಂತ್ರಿಗೆ ಇದೆಯಾ? ಎಂದರು. ನಮ್ಮ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಗೃಹ ಸಚಿವರೂ ಆಗಿದ್ದ ಡಾ.ಜಿ.ಪರಮೇಶ್ವರ್‌ ಅವರಿಗೆ ನಾನು ವರ್ಗಾವಣೆ ವಿಷಯದಲ್ಲಿ ಸಲಹೆ ಕೊಟ್ಟಿದ್ದೇನೆ ಎಂಬುದಾಗಿ ಸ್ವತಃ ಅವರೇ ಹೇಳಿದ್ದಾರೆ. ನಾನು ಏನು ಸಲಹೆ ಕೊಟ್ಟಿದ್ದೇನೆ ಎಂಬುದನ್ನು ಜನರ ಮುಂದೆ ಹೇಳಲಿ. ಪೊಲೀಸ್‌ ವರ್ಗಾವಣೆಯಲ್ಲಿ ನನ್ನ ಹಸ್ತಕ್ಷೇಪ ಇತ್ತಾ? ನೀವು ಮತ್ತು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಸೇರಿ ವರ್ಗ ಮಾಡಿದ್ದಲ್ಲವೇ? ಬಿಡಿಎ ಸಂಬಂಧಿಸಿದ ಗಲಾಟೆ ನನ್ನಿಂದ ಶುರುವಾಯಿತಾ? ಅಲ್ಲಿ ನಡೆದ ಅವಾಂತರಕ್ಕೆ ಯಾರು ಕಾರಣ? ಪರಮೇಶ್ವರ್‌ ಹೇಳಬಹುದಲ್ಲವೇ ಎಂದು ಕಿಡಿಕಾರಿದರು.

Latest Videos
Follow Us:
Download App:
  • android
  • ios