Asianet Suvarna News Asianet Suvarna News

ಏತ ನೀರಾವರಿ ಯೋಜನೆ ಬಿಜೆಪಿ ಸರ್ಕಾರದ ಕೊಡುಗೆ: ಎಂಟಿಬಿ ನಾಗರಾಜ್

ತಾಲೂಕಿನ ಜಡಿಗೇನಹಳ್ಳಿ, ಅನುಗೊಂಡನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆ ನನ್ನ ಹೋರಾಟದ ಫಲ, ಬಿಜೆಪಿ ಸರ್ಕಾರದ ಕೊಡುಗೆ.

Eta Irrigation Scheme Contribution of BJP Govt Says MTB Nagaraj gvd
Author
First Published Oct 19, 2023, 1:58 PM IST

ಹೊಸಕೋಟೆ (ಅ.19): ತಾಲೂಕಿನ ಜಡಿಗೇನಹಳ್ಳಿ, ಅನುಗೊಂಡನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆ ನನ್ನ ಹೋರಾಟದ ಫಲ, ಬಿಜೆಪಿ ಸರ್ಕಾರದ ಕೊಡುಗೆ. ಆದರೆ ಶಾಸಕ ಶರತ್ ಬಚ್ಚೇಗೌಡ ತಾನೇ ಅನುದಾನ ತಂದು ಮಾಡಿದಂತೆ ಬಿಂಬಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2018ರಲ್ಲಿ ನಾನು ಶಾಸಕನಾಗಿದ್ದಾಗ ಕೆ.ಆರ್ ಪುರ, ಮೇಡಹಳ್ಳಿ ಮತ್ತು ಕಾಡುಗೋಡಿ ಎಸ್‌ಟಿಪಿಯಿಂದ ಸಂಸ್ಕರಿಸಿದ ನೀರನ್ನು ಏತ ನೀರಾವರಿ ಯೋಜನೆ ಮೂಲಕ ತಾಲೂಕಿನ 38 ಕೆರೆಗಳಿಗೆ ತುಂಬಿಸಲು ಸರ್ಕಾರದ ಮೇಲೆ ಒತ್ತಡ ಹೇರಿ ಬಜೆಟ್‌ನಲ್ಲಿ 100 ಕೋಟಿ ಅನುದಾನ ಮೀಸಲಿರಿಸಿದ್ದೆ. ಬಳಿಕ ಚುನಾವಣೆ ನಡೆದು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಆದರೆ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಕೆರೆಗಳಿಗೆ ಅನುದಾನ ಬಿಡುಗಡೆ ಮಾಡದಿದ್ದಾಗ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ. 

ಎಲೆಕ್ಟ್ರಿಕ್‌ ವಾಹನ ಉತ್ಪಾದನೆಗೆ 15000 ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ್‌

ನಂತರ ಬಿಜೆಪಿ ಸರ್ಕಾರದಲ್ಲಿ ಸಿಎಂ ಯಡಿಯೂರಪ್ಪ ಬಳಿ ಸಾಕಷ್ಟು ಬಾರಿ ಒತ್ತಡ ಹಾಕಿದ ಪರಿಣಾಮ 30 ಕೆರೆಗಳ ಜೊತೆಗೆ ಇನ್ನೂ 8 ಕೆರೆಗಳನ್ನು ಹೆಚ್ಚುವರಿಯಾಗಿ ಸೇರಿಸಿ 100 ಕೋಟಿಯಿಂದ 140 ಕೋಟಿಗೆ ಪ್ರಸ್ತಾವನೆ ಹೆಚ್ಚಿಸಿ 140 ಕೋಟಿ ವೆಚ್ಚದಲ್ಲಿ 38 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡಿದರು. ಯಡಿಯೂರಪ್ಪನವರೇ ಅದಕ್ಕೆ ಚಾಲನೆಯೂ ನೀಡಿದರು. ಅಂದಿನಿಂದಲೂ ಕಾಮಗಾರಿ ಪ್ರಗತಿಯಲ್ಲಿತ್ತು, ಈಗ ಪೂರ್ಣಗೊಳ್ಳುವ ಹಂತದಲ್ಲಿದ್ದು, ಪರೀಕ್ಷಾರ್ಥವಾಗಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಹೇಳಿದರು.

ಯಾವ ಸರ್ಕಾರದಲ್ಲಿ ಮಂಜೂರಾಗಿದೆ ತಿಳಿಸಲಿ?: ಶಾಸಕರು ಪರೀಕ್ಷಾರ್ಥ ಕೆರೆಗಳಿಗೆ ನೀರು ಹರಿಸುವಲ್ಲಿ ಭೇಟಿ ನೀಡಿ ನಾನೇ ಯೋಜನೆ ಮಾಡಿಸುತ್ತಿರುವಂತೆ ಬಿಂಬಿಸುತ್ತಿರುವುದು ಎಷ್ಟು ಸರಿ. ಅದು ಯಾವ ಸರ್ಕಾರದಲ್ಲಿ ಮಂಜೂರಾಗಿದೆ ಎಂದು ಹೇಳಬೇಕಲ್ಲವೇ? ಯಾರದೋ ಶ್ರಮವನ್ನು ನನ್ನ ಶ್ರಮವೆಂಬಂತೆ ಬಿಂಬಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಎಷ್ಟು ಸರಿ? ಶಾಸಕರಾಗಿ ತಾಲೂಕಿಗೆ ಇವರು ನೀಡಿರುವ ಕೊಡುಗೆಯಾದರೂ ಏನು? ಎಂದು ಶಾಸಕ ಶರತ್ ಬಚ್ಚೇಗೌಡರ ವಿರುದ್ಧ ಎಂಟಿಬಿ ನಾಗರಾಜ್ ವಾಗ್ದಾಳಿ ನಡೆಸಿದರು.

ನಮಗೆ ಕಾವೇರಿ ಸಂಕಷ್ಟ ಸೂತ್ರ ಬೇಕು: ಕರವೇ ನಾರಾಯಣ ಗೌಡ

ಎರಡು ವರ್ಷ ಫೈಲ್ ಪೆಂಡಿಂಗ್ ಇಡಿಸಿದ್ರು: ಶಾಸಕ ಶರತ್ ತಂದೆ ಹಾಗೂ ಸಂಸದ ಬಚ್ಚೇಗೌಡರು, 2005ರಲ್ಲಿ ನಾನು ಶಾಸಕನಾಗಿದ್ದಾಗ ಬೆಂಗಳೂರಿನ ಎಲೆಮಲ್ಲಪ್ಪ ಶೆಟ್ಟಿ ಕೆರೆಯಿಂದ ಹೊಸಕೋಟೆ ದೊಡ್ಡಕೆರೆಗೆ ಸಂಸ್ಕರಿಸಿದ ನೀರನ್ನು ಹರಿಸಲು ನಬಾರ್ಡನಿಂದ 3 ಕೋಟಿ ಸಾಲ ತಂದು ಮಂಜೂರಾತಿ ಮಾಡಿಸಿದಾಗ ಆ ನೀರು ಮಲ, ಮೂತ್ರದಿಂದ ಕೂಡಿರುವ ಕೊಳಕು ನೀರು ಎಂದು ಕುಹಕವಾಡಿ ಸಾರ್ವಜನಿಕರು ನೀರಿಲ್ಲದೆ ಸಂಕಷ್ಟದಲ್ಲಿದ್ದರೂ ರಾಜಕೀಯ ದುರುದ್ದೇಶದಿಂದ 2 ವರ್ಷ ಫೈಲ್ ಪೆಂಡಿಂಗ್ ಇರಿಸಿದ್ದರು ಎಂದು ಹೇಳಿದರು.

Follow Us:
Download App:
  • android
  • ios