ಮೊಟ್ಟೆ ಎಸೆತ: 26ಕ್ಕೆ ಕೊಡಗಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ
ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮೇಲೆ ಮೊಟ್ಟೆದಾಳಿ ನಡೆಸಿರುವುದನ್ನು ಖಂಡಿಸಿ ಬೃಹತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸೇರಿಸಿ ಆ.26ರಂದು ಮಡಿಕೇರಿ ಚಲೋ ನಡೆಸಲು ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ.
ಬೆಂಗಳೂರು (ಆ.20): ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮೇಲೆ ಮೊಟ್ಟೆದಾಳಿ ನಡೆಸಿರುವುದನ್ನು ಖಂಡಿಸಿ ಬೃಹತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸೇರಿಸಿ ಆ.26ರಂದು ಮಡಿಕೇರಿ ಚಲೋ ನಡೆಸಲು ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ. ಪ್ರತಿಪಕ್ಷ ನಾಯಕರ ಮೇಲೆ ಗೂಂಡಾಗಿರಿ ನಡೆಸಿರುವ ಬಿಜೆಪಿ ಕಾರ್ಯಕರ್ತರನ್ನು ಒಂದೇ ದಿನದಲ್ಲಿ ಬಿಡುಗಡೆ ಮಾಡಲಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಬಂಧಿಸಬೇಕು ಎಂದು ಒತ್ತಾಯಿಸಿ ಖುದ್ದು ಸಿದ್ದರಾಮಯ್ಯ ಉಪಸ್ಥಿತಿಯಲ್ಲೇ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.
ಹಾಸನ, ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ, ಮಂಡ್ಯ ಸೇರಿದಂತೆ ರಾಜ್ಯದ ಮೂಲೆ-ಮೂಲೆಗಳಿಂದ ಸಾವಿರಾರು ಕಾರ್ಯಕರ್ತರನ್ನು ಮಡಿಕೇರಿಯಲ್ಲಿ ಸೇರಿಸಲಾಗುವುದು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಎಲ್ಲಾ ಹಿರಿಯ ನಾಯಕರು, ಶಾಸಕರು, ಪರಿಷತ್ ಸದಸ್ಯರು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ತನ್ಮೂಲಕ ಸಂಘಟನಾತ್ಮಕವಾಗಿ ಹಿಂದುಳಿದಿರುವ ಮಡಿಕೇರಿ ಭಾಗದಲ್ಲಿ ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ನೀಡುವ ಜತೆಗೆ ಸಿದ್ದರಾಮಯ್ಯ ಅವರ ಮೇಲಿನ ದಾಳಿಯನ್ನು ಉಗ್ರವಾಗಿ ಖಂಡಿಸಲು ನಿರ್ಧರಿಸಿದ್ದು, ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರಿಗೆ ಸಿದ್ಧತೆ ಜವಾಬ್ದಾರಿ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Udupi; ಮತ್ತಷ್ಟು ಪ್ರತಿಭಟನೆ ಎದುರಿಸಲು ರೆಡಿಯಾಗಿ, ಸಿದ್ದುಗೆ ಸಚಿವ ಸುನಿಲ್ ಕುಮಾರ್ ಚಾಟಿ
ಸಿದ್ದರಾಮಯ್ಯ ಮೇಲೆ ಮೊಟ್ಟೆಎಸೆತ ಖಂಡಿಸಿ ಪ್ರತಿಭಟನೆ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆಎಸೆಯುವ ಮೂಲಕ ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿ ಗದಗ-ಬೆಟಗೇರಿ ಬ್ಲಾಕ್ ಯುವ ಕಾಂಗ್ರೆಸ್ನಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಡುಗಿಗೆ ಯಾವುದೇ ರಾಜಕೀಯ ಸಭೆ ಸಮಾರಂಭಗಳಿಗೆ ತೆರಳಿದ್ದಿಲ್ಲ. ಅಲ್ಲಿ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳ ವೀಕ್ಷಣೆ ಮಾಡಿ ಜನರ ಸಮಸ್ಯೆಗಳನ್ನು ಕೇಳಲು ತೆರಳಿದ್ದರು.
ಕೆಲವು ಕಿಡಿಗೇಡಿಗಳು, ಬಿಜೆಪಿ ಏಜೆಂಟರು ಅವರ ಮೇಲೆ ಮೊಟ್ಟೆಎಸೆಯುವ ಮೂಲಕ ಗೂಂಡಾ ವರ್ತನೆ ತೋರಿದ್ದಾರೆ. ವಿಪಕ್ಷ ನಾಯಕರಿಗೆ ಭದ್ರತೆ ನೀಡುವುದಕ್ಕೂ ಅಶಕ್ತವಾಗಿರುವ ಸರ್ಕಾರ ಇನ್ನ ರಾಜ್ಯದ ಜನತೆಗೆ ಎಷ್ಟರ ಮಟ್ಟಿಗೆ ಭದ್ರತೆಯನ್ನು ನೀಡುತ್ತದೆ? ಪೊಲೀಸರೂ ಬಿಜೆಪಿ ಏಜೆಂಟರಂತೆ ವರ್ತಿಸಿದ್ದಾರೆ. ಮೊಟ್ಟೆಎಸೆದವರ ಮೇಲೆ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯ. ಮಾಜಿ ಮುಖ್ಯಮಂತ್ರಿಗೆ ಬಿಜೆಪಿಯ ಕಾರ್ಯಕರ್ತರು ಮೊಟ್ಟೆ ಎಸೆಯುವ ಮೂಲಕ ರಾಜ್ಯದಲ್ಲಿ ಕಾನೂನನ್ನು ಅಭದ್ರತೆಗೊಳಿಸಲಾಗುತ್ತಿದೆ. ಆದ್ದರಿಂದ ಈ ಭ್ರಷ್ಟಬಿಜೆಪಿ ಸರ್ಕಾರ ರಾಜ್ಯದಿಂದ ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವನ್ನು ಕೋಮುವಾದಿಗಳ ಮತ್ತು ಗೂಂಡಾಗಳ ಕೈಗೆ ಕೊಡಲಾಗಿದೆ: ಖಾದರ್ ಆಕ್ರೋಶ
ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷ ಸರ್ಫರಾಜ ಬರ್ಬಜಿ, ಶಂಭು ಕಾಳೆ, ಮಹಾಂತೇಶ ಮಡಿವಾಳ, ಭರಖ ತಲಿ ಮುನ್ನಾ, ನಗರಸಭೆ ಸದಸ್ಯರಾದ ಲಕ್ಷೀ ಸಿದ್ದಮನಹಳ್ಳಿ, ಮಹಮ್ಮದ್ಸಾಬ್ ಬೆಟಗೇರಿ, ಮೋಹನ್ ಡಿ, ವಿನಾಯಕ ಹಾಲೂರ, ಅಜ್ಜೆಪ್ಪ ಹುಗ್ಗೆಣ್ಣವರ, ಉಮರ್ಫಾರೂಕ್ ಭಾರಿಗಿಡದ, ಉಮರ್ಫಾರೂಕ್ ಹುಬ್ಬಳ್ಳಿ, ರಾಘವೇಂದ್ರ ದೊಡ್ಮನಿ ವೀರನಗೌಡ್ರ, ವಿಜಯಕುಮಾರ ಚಲವಾದಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.