ರಾಸಲೀಲೆ ಸಿ.ಡಿ. ಬೆನ್ನಲ್ಲೇ 6 ಸಚಿವರು ಕೋರ್ಟ್ ಮೊರೆ: ಇದು ಸರಿಯಲ್ಲ ಎಂದ ಕೇಂದ್ರ ಸಚಿವ
ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಬಹಿರಂಗಗೊಂಡ ಬೆನ್ನಲ್ಲೇ ಕೆಲವರಿಗೆ ಢವ-ಢವ ಶುರುವಾಗಿದ್ದು, ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, (ಮಾ.06): ಅನಾವಶ್ಯಕವಾಗಿ ಕೋರ್ಟ್ಗೆ ಹೋಗಿ, ಇಂತಹ ವಿಷಯಗಳನ್ನ ಮತ್ತಷ್ಟು ಗೋಜಲಾಗಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ.
ಇಂದು (ಶನಿವಾರ) ಬೆಂಗಳೂರಲ್ಲಿ ಮಾತನಾಡಿದ ಸದಾನಂದಗೌಡ, ಸಿಡಿ ಪ್ರಕರಣವನ್ನ ಹೈಕಮಾಂಡ್ ಗಮನಿಸಿದ ಕೂಡಲೇ ರಮೇಶ್ ಜಾರಕಿಹೊಳಿ ಅವರಿಂದ ರಾಜೀನಾಮೆ ಪಡೆಯುವ ಕೆಲಸ ಆಗಿದೆ. ಇದು ಸ್ವಲ್ಪಮಟ್ಟಿಗೆ ಮುಜುಗರ ಹೌದು ಎಂದು ಹೇಳಿದರು.
ಟೆಕ್ನಾಲಜಿ ಎಷ್ಟು ಮುಂದುವರಿದಿದೆ ಅಂದರೆ ಏನು ಬೇಕಾದರೂ ಮ್ಯಾನಿಪುಲೇಟ್ ಮಾಡಿ ತೋರಿಸಬಹುದು. ಹಾಗಂತ ಆಗಿದ್ದೆಲ್ಲವನ್ನೂ ತಿರುಚಲಾಗಿದೆ ಅಂತ ನಾನು ಹೇಳ್ತಿಲ್ಲ. ತನಿಖೆ ತನ್ನದೇ ಕಾರ್ಯ ಮಾಡುತ್ತದೆ. ನೈತಿಕತೆಗೆ ಪ್ರಾಮುಖ್ಯತೆ ಕೊಡುವುದು ನಮ್ಮೆಲ್ಲರ ಜವಾಬ್ದಾರಿ. ಇಂತಹ ವಿಚಾರ ಬಂದಾಗ ರಾಜಕೀಯ ಲಾಭ ಪಡೆಯುವುದರಿಂದ ಒಳ್ಳೆಯದಾಗುವುದಿಲ್ಲ. ಆಡಳಿತಕ್ಕೂ ಇದು ತೊಂದರೆ ಆಗುತ್ತದೆ ಎಂದರು.
ರಾಸಲೀಲೆ CD ಸ್ಫೋಟ: ಕೋರ್ಟ್ ಮೆಟ್ಟಿಲೇರಿದ 6 ಸಚಿವರು, ಅಚ್ಚರಿ ಮೂಡಿಸಿದ ನಡೆ
ಜಾರಕಿಹೊಳಿ ವಿಚಾರದಲ್ಲಿ ಕೇಂದ್ರದ ನಾಯಕರು ನಮ್ಮ ಬಳಿ ಮಾಹಿತಿ ಕೇಳಿದ್ದರು. ಅಂದು ರಾತ್ರಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ನಮ್ಮ ಬಳಿ ಮಾಹಿತಿ ಕೇಳಿದ್ದರು. ಮಾಧ್ಯಮ ವರದಿ ಆಧಾರಿತವಾಗಿ ನಾವು ವರದಿ ಕೊಟ್ಟಿದ್ದೇವೆ. ಸ್ವಾಭಾವಿಕವಾಗಿ ಇಂತಹ ಆರೋಪ ಬಂದಾಗ ತನಿಖೆಗೆ ಮಂತ್ರಿಗಳು ಸಹಕಾರ ನೀಡಬೇಕು ಎಂದು ತಿಳಿಸಿದರು.
ವೈಯಕ್ತಿಕವಾಗಿ ಹಲವಾರು ಜನ ಅವರ ಭಾವನೆಗಳನ್ನು ಕೋರ್ಟ್ನಲ್ಲಿ ವ್ಯಕ್ತಪಡಿಸಬಾರದು ಅಂತ ನಾವು ಮಧ್ಯಪ್ರವೇಶ ಮಾಡಲು ಆಗಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ಕೂಡಾ ತನ್ನ ಭವಿಷ್ಯದ ಯೋಚನೆ ಇರುತ್ತದೆ. ಅದನ್ನು ನೋಡಿಕೊಂಡು ಅವರು ಹೆಜ್ಜೆ ಇಡ್ತಾರೆ. ಅದು ಅವರಿಗೆ ಬಿಟ್ಟಿದ್ದು, ಆದರೆ ಅನಾವಶ್ಯಕವಾಗಿ ಕೋರ್ಟ್ಗೆ ಹೋಗೋದು ಒಳ್ಳೆಯ ಬೆಳವಣಿಗೆ ಅಲ್ಲ ಸಲಹೆ ನೀಡಿದರು.