Asianet Suvarna News Asianet Suvarna News

ವಿಶ್ವಗುರು ಭಾರತಕ್ಕೆ ಪ್ರಧಾನಿ ಮೋದಿ ನಾಯಕತ್ವ: ಅನೇಕ ದೇಶಗಳಿಗೆ ಈಗ ಇಂಡಿಯಾನೇ ಎಲ್ಲ!

ಒಂದೇ ದಶಕದಲ್ಲಿ ಬದಲಾಗಿರುವ ಭಾರತವನ್ನು ನೋಡಿದ ನೆರೆಯ ಶತ್ರುರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾ ಈಗ ಬಾಲ ಮುದುರಿ ಕೂತುಕೊಂಡಿವೆ. ಆದರೆ ದೇಶದ 130 ಕೋಟಿ ಜನರು ಇದನ್ನು ಗಮನಿಸುತ್ತಿದ್ದಾರೆ. ಅವರು ಮೋದಿ ನೇತೃತ್ವದಲ್ಲಿ ಭಾರತ ವಿಶ್ವಗುರು ಆಗುವುದನ್ನು ಎದುರು ನೋಡುತ್ತಿದ್ದಾರೆ.
 

Dr MR Venkatesh Special Article For PM Narendra Modis India gvd
Author
First Published Mar 16, 2024, 7:03 AM IST

ಡಾ.ಎಂ.ಆರ್.ವೆಂಕಟೇಶ್

ಭಾರತವನ್ನು ಅನಾದಿಕಾಲದಿಂದ ‘ವಿಶ್ವಗುರು’ಎಂದು ಕರೆಯುವುದು ವಾಡಿಕೆ. ಭಾರತದ ಸನಾತನ ಇತಿಹಾಸದಲ್ಲಿದ್ದ ಜ್ಞಾನ, ವಿಶ್ವದಲ್ಲಿ ನಾಗರಿಕತೆ ಹುಟ್ಟುವ ಮೊದಲೇ ಇತಿಹಾಸದಲ್ಲಿರುವ ಭಾರತೀಯರ ಸಾಧನೆ ಸೇರಿ ಹಲವು ಕಾರಣಗಳಿಂದ ಭಾರತಕ್ಕೆ ಈ ಸ್ಥಾನವನ್ನು ವಿದೇಶಿಗರು ನೀಡಿದ್ದಾರೆ. ಇದೇ ಕಾರಣಕ್ಕಾಗಿ, ಭಾರತದ ಮೇಲೆ ಸಾಲು ಸಾಲು ದಾಳಿಗಳು ನಡೆದವು. ಅದರಲ್ಲಿಯೂ ಸುಮಾರು ಎರಡು ಶತಮಾನಗಳ ಕಾಲ ನಮ್ಮನ್ನಾಳಿದ ಬ್ರಿಟೀಷರಿಂದ ಭಾರತೀಯತೆಯ ಮೇಲೆ ಹತ್ತಾರು ಬದಲಾವಣೆಗಳಾಗಿ, ಇಂದಿನ ಮಾಡರ್ನ್‌ ಭಾರತವನ್ನು ಕಾಣುತ್ತಿದ್ದೇವೆ ಎಂದರೆ ತಪ್ಪಾಗುವುದಿಲ್ಲ.

ಭಾರತ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಫ್ರೆಂಚ್, ಡಚ್ಚ್‌, ಬ್ರಿಟಿಷರ ದಾಳಿಯ ಮೊದಲಿನ ಭಾರತಕ್ಕೂ, ಸ್ವಾತಂತ್ರ್ಯ ನಂತರದ ಭಾರತಕ್ಕೂ ಅಜಗಜಾಂತರವಿದೆ. ವಿಶ್ವಗುರು ಎನ್ನುವ ಹೆಸರನ್ನು ಉಳಿಸಿಕೊಂಡಿರುವುದು ಸರಣಿ ದಾಳಿಗೂ ಮೊದಲಿನ ಭಾರತ. ಆದರೆ ಸ್ವಾತಂತ್ರ್ಯ ಬಳಿಕ ದೇಶವನ್ನಾಳಿದ ಬಹುತೇಕ ನಾಯಕರು ವಿದೇಶದ ಮುಂದೆ ‘ಬೆನ್ನುಬಗ್ಗಿಸಿಕೊಂಡು’ ಸಮಯದ ಕಳೆದಿದ್ದೇ ಹೆಚ್ಚು ಎನ್ನುವುದು ಒಪ್ಪಬೇಕಿರುವ ಸತ್ಯ.

ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೇ ಇಲ್ಲ: ದಿನೇಶ್ ಗುಂಡೂರಾವ್ ಸಂದರ್ಶನ!

ಒಂದು ಹೆಜ್ಜೆಯಿಟ್ಟರೆ ವಿಶ್ವದ ದೊಡ್ಡಣ್ಣ ಎಲ್ಲಿ ಬೇಸರಿಸಿಕೊಳ್ಳುವನೋ? ಒಂದು ಹೆಜ್ಜೆ ಹಿಂದಿಟ್ಟರೆ ಎಲ್ಲಿ ನೆರೆಯ ಚೀನಾ ಘರ್ಷಿಸುವುದೋ ಎನ್ನುವ ಆತಂಕದಲ್ಲಿಯೇ ಕಾಂಗ್ರೆಸ್ ಆಡಳಿತ ನಡೆಸಿತ್ತು. ಕಾಂಗ್ರೆಸ್ ಅವಧಿಯಲ್ಲಿ, ಇಂದಿರಾ ಗಾಂಧಿ ಅವರ ಆಡಳಿತದ ಕೆಲ ಕಾಲವನ್ನು ಹೊರತುಪಡಿಸಿದರೆ ಇನ್ನುಳಿದ ಬಹು ಸಮಯ ಇದೇ ಆತಂಕದಲ್ಲಿ ಜೀವನ ಸಾಗಿಸಿದ್ದಾಗಿತ್ತು. ಪಾಕಿಸ್ತಾನದಿಂದ ಅಪ್ರಚೋದಿತ ದಾಳಿ ನಡೆದರೂ, ಪ್ರತಿರೋಧ ತೋರದೇ ದೆಹಲಿಯಲ್ಲಿ ಕೂತಿರುವ ನಾಯಕರತ್ತ ಸೈನಿಕರು ನೋಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ದೆಹಲಿಯಿಂದ ‘ಗ್ರೀನ್ ಸಿಗ್ನಲ್’ಸಿಗುವ ತನಕ ಕಾಯಬೇಕಿತ್ತು.

ಆದರೆ ಕಳೆದೊಂದು ದಶಕದಿಂದ ಭಾರತದ ವಿದೇಶಾಂಗ ನೀತಿಯನ್ನು ಗಮನಿಸುವುದಾದರೆ, ಭಾರಿ ಬದಲಾವಣೆಯಾಗಿದೆ ಕಂಡಿದೆ. ಈ ಹಿಂದೆ ಯಾರ ಭೇಟಿಗಾಗಿ ಭಾರತೀಯ ಪ್ರಧಾನಿ ಕಾಯಬೇಕಿತ್ತೋ, ಇಂದು ಅದೇ ದೇಶದವರು ನಮ್ಮ ದೇಶದ ಪ್ರಧಾನಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದ ನೆರೆರಾಷ್ಟ್ರಗಳ ವಿರುದ್ಧ ಅಮೆರಿಕ, ರಷ್ಯಾದಂತ ದೈತ್ಯ ರಾಷ್ಟ್ರಗಳಿಗೆ ಭಾರತ ದೂರು ನೀಡಬೇಕಿತ್ತು. ಆದರೀಗ ಇತರೆ ದೇಶಗಳ ಯುದ್ಧಗಳನ್ನು ನಿಲ್ಲಿಸಲು ಭಾರತದ ‘ನೆರವನ್ನು’ ಯಾಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಅಂತಾರಾಷ್ಟ್ರೀಯ ನೀತಿ-ನಿರೂಪಣೆಯಲ್ಲಿ ಭಾರತವನ್ನು ನಾಮ್‌ಕೆವಾಸ್ತೆಗೆ ಅಭಿಪ್ರಾಯ ಕೇಳುತ್ತಿದ್ದ ರಾಷ್ಟ್ರಗಳೆಲ್ಲ, ಇಂದು ಭಾರತದ ಮುಂದಾಳತ್ವದಲ್ಲಿ ನೀತಿಗಳನ್ನು ಸಿದ್ಧಪಡಿಸುವ ಕೆಲಸಕ್ಕೆ ಮುಂದಾಗಿವೆ.

ಸೇನೆಗೆ ಗಡಿಯಲ್ಲಿ ಫ್ರೀ ಹ್ಯಾಂಡ್‌: ಕೇವಲ ಒಂದು ದಶಕದ ಅವಧಿಯಲ್ಲಿ ಭಾರತ ನಿಜವಾದ ಅರ್ಥದಲ್ಲಿ ‘ವಿಶ್ವಗುರು’ ಸ್ಥಾನವನ್ನು ಅಲಂಕರಿಸಿದೆ. ಈ ಪ್ರಮಾಣದಲ್ಲಿ ಭಾರತ ವಿಶ್ವಮಟ್ಟದಲ್ಲಿ ಗೌರವವನ್ನು ಪಡೆಯುವುದಕ್ಕೆ ಪ್ರಮುಖ ಕಾರಣವೇನೆಂದು ನೋಡುವುದಾದರೆ ಕಾಣಿಸಿಕೊಳ್ಳುವ ಮೊದಲು ಹೆಸರು ‘ನರೇಂದ್ರ ಮೋದಿ’. 2013ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ದೇಶದ ಚುಕ್ಕಾಣಿಯನ್ನು ನರೇಂದ್ರ ಮೋದಿ ಅವರು ಹಿಡಿದ ಕೆಲವೇ ತಿಂಗಳಲ್ಲಿ ದೇಶದೊಳಗಿನ ಬದಲಾವಣೆಗಳೊಂದಿಗೆ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಹತ್ತು ಹಲವು ತೀರ್ಮಾನಗಳನ್ನು ಕೈಗೊಂಡರು. 

ಇನ್ನು ನೆರೆಯ ಪಾಕಿಸ್ತಾನ, ಚೀನಾದ ಉಪಟಳವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಭಾರತ ಗಡಿಗಳಲ್ಲಿನ ಸೇನೆ ‘ಫ್ರೀ ಹ್ಯಾಂಡ್’ ನೀಡಿದ್ದರು. ಶಾಂತಿಪ್ರಿಯ ರಾಷ್ಟ್ರವಾಗಿರುವ ಭಾರತದಿಂದ ಯಾವುದೇ ಕಾರಣಕ್ಕೂ ಮೊದಲ ಗುಂಡು ಹಾರಬಾರದು. ಆದರೆ ಆ ಕಡೆಯಿಂದ ಒಂದು ಗುಂಡು ಬಂದರೆ ಪ್ರತ್ಯುತ್ತರವಾಗಿ ನೂರು ಗುಂಡು ಸಿಡಿದರೂ ಚಿಂತೆಯಿಲ್ಲ ಎನ್ನುವ ಸಂದೇಶವನ್ನು ರವಾನಿಸುವ ಮೂಲಕ ಗಡಿಯಲ್ಲಿನ ಸೇನೆಯ ಆತ್ಮಸ್ಥೈರ್ಯ ನೀಡುವುರೊಂದಿಗೆ ನೆರೆರಾಷ್ಟ್ರಗಳಿಗೆ ಈಗಿರುವುದು ‘ಬದಲಾದ ಭಾರತ’ಎನ್ನುವ ಖಡಕ್ ಸಂದೇಶವನ್ನು ರವಾನಿಸಿದರು.

ಇತರೆ ದೇಶಗಳೊಂದಿಗೆ ಉತ್ತಮ ಬಾಂಧವ್ಯ: ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಪ್ರಧಾನಿ ಮೋದಿ ಅವರು, ಚೀನಾದ ಶತ್ರುವಾಗಿರುವ ಜಪಾನ್‌ನೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಇದರೊಂದಿಗೆ ನೆರೆ ರಾಷ್ಟ್ರವಷ್ಟೇ ಅಲ್ಲದೇ ಅಮೆರಿಕ, ಜರ್ಮನಿ, ರಷ್ಯಾ, ಗಲ್ಫ್‌ ದೇಶಗಳು ಸೇರಿದಂತೆ ಹತ್ತು ಹಲವು ದೇಶಗಳ ಮುಖ್ಯಸ್ಥರೊಂದಿಗೆ ವ್ಯಾವಹಾರಿಕ ಸಂಬಂಧಗಳನ್ನು ಮೀರಿ, ವೈಯಕ್ತಿಕ ಬಾಂಧವ್ಯಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇಯಾದ ಛಾಪನ್ನು ಮೂಡಿಸಿದ್ದಾರೆ. ಇನ್ನು ಕಳೆದೊಂದು ದಶಕದಲ್ಲಿ ಬದಲಾದ ಬಹುದೊಡ್ಡ ಬದಲಾವಣೆ ಏನೆಂದರೆ, ಭಾರತದ ರಾಜಕೀಯದಲ್ಲಿ ವಿದೇಶಿಗರು ಕೈಹಾಕುತ್ತಿದ್ದರು. 

ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕದ ಅಧ್ಯಕ್ಷರನ್ನು ಭೇಟಿಯಾಗಲು ಭಾರತದವರು ಸರತಿಯಲ್ಲಿ ನಿಲ್ಲುವ ಸ್ಥಿತಿಯಿತ್ತು. ಆದರೆ ಇತ್ತೀಚಿನ ವರ್ಷದಲ್ಲಿ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ ಎಂದು ಗುರುತಿಸಿಕೊಳ್ಳಲು ದೊಡ್ಡ ದೊಡ್ಡ ನಾಯಕರು ಬಯಸುತ್ತಿದ್ದಾರೆ. ಅದರಲ್ಲಿಯೂ ಕಳೆದ ವರ್ಷ ನಡೆದ ಜಿ20 ಶೃಂಗಸಭೆಯ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹುಡುಕಿಕೊಂಡು ಬಂದು ಅಪ್ಪುಗೆಯೊಂದಿಗೆ ಮಾತನಾಡಿದ್ದು. ಇನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ‘ಮೆಲೊಡಿ’ ಎಂದು ಹ್ಯಾಷ್‌ಟ್ಯಾಗ್ ನೊಂದಿಗೆ ಸೆಲ್ಫಿ ವಿತ್ ಮೋದಿ ಎನ್ನುವ ಅಭಿಯಾನಕ್ಕೆ ನಾಂದಿ ಹಾಡಿದ್ದರು. ಅಭಿಯಾನ ಕೇವಲ ಇಟಲಿ ಪ್ರಧಾನಿಗೆ ಸೀಮಿತವಾಗದೇ, ಆಸ್ಟ್ರೇಲಿಯಾ, ಮಂಗೋಲಿಯಾ ಸೇರಿದಂತೆ ವಿವಿಧ ದೇಶದ ಪ್ರಧಾನಿಗಳು ಮೋದಿ ಜತೆ ಸೆಲ್ಫಿ ಪಡೆಯಲು ಉತ್ಸುಕರಾಗಿದ್ದು ನೋಡಿದ್ದೇವೆ.

ಭಾರತದ ರಾಜತಾಂತ್ರಿಕತೆ: ಪ್ರಧಾನಿ ನರೇಂದ್ರ ಮೋದಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ವಿಶ್ವ ಪರ್ಯಾಟನೆ ಮಾಡಿ ತಮ್ಮ ವೈಯಕ್ತಿಕ ವರ್ಚಸ್ಸಿನ ಮೂಲಕ ಭಾರತವನ್ನು ಮತ್ತೊಂದು ಮಟ್ಟಕ್ಕೆ ತಗೆದುಕೊಂಡು ಹೋಗಲು; ಹೂಡಿಕೆಗಳನ್ನು ಭಾರತದತ್ತ ಸೆಳೆಯಲು ಹತ್ತು ಹಲವು ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಇದಿಷ್ಟೇ ಅಲ್ಲದೇ, ಕರೋನಾ ಸಮಯದಲ್ಲಿ ಇಡೀ ವಿಶ್ವವೇ ಆತಂಕದಲ್ಲಿದ್ದು, ಏನು ಮಾಡಬೇಕೆಂಬ ಗೊಂದಲದಲ್ಲಿದ್ದಾಗ ಲಸಿಕೆ ಹಾಗೂ ಔಷಧವನ್ನು ಇಡೀ ವಿಶ್ವಕ್ಕೆ ಪರಿಚಯಿಸಿ, ಎಲ್ಲಾ ಸಹಾಯ ಮಾಡಿದ್ದು ಭಾರತ ಎಂದರೆ ತಪ್ಪಾಗುವುದಿಲ್ಲ. ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾದ ಸಮಯದಲ್ಲಿ, ಇದೇ ವಿಶ್ವದ ದೊಡ್ಡಣ್ಣ ತನ್ನ ಪ್ರಜೆಗೆ ನಿಮ್ಮನ್ನು ವಾಪಸು ಕರೆತರಲು ಸದ್ಯಕ್ಕೆ ಕಷ್ಟ. ನಿಮ್ಮ ಎಚ್ಚರಿಕೆಯನ್ನು ನೀವು ವಹಿಸಿ ಎಂದು ಹೇಳಿ ಕೈತೊಳೆದುಕೊಂಡಿತ್ತು.

ಆದರೆ ಭಾರತ ಮಾತ್ರ ''ಆಪರೇಷನ್ ಗಂಗಾ'' ಹೆಸರಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಯಶಸ್ವಿಯಾಗಿ ವಾಪಸ್‌ ಕರೆದುಕೊಂಡು ಬರುವ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗಿ ನಿಂತಿತ್ತು. ಭಾರತೀಯರು ಈ ಕಾರ್ಯಾಚರಣೆ ಆರಂಭಿಸಿದ ಬಳಿಕ ವಿವಿಧ ದೇಶಗಳು ತಮ್ಮ ಭಾರತದ ನೆರಳಲ್ಲಿಯೇ ತಮ್ಮ ದೇಶದ ಜನರನ್ನು ಸುರಕ್ಷಿತವಾಗಿ ಕರೆಸುವ ಕಾರ್ಯವನ್ನು ಆರಂಭಿಸಿದರು. ಇದಿಷ್ಟೇ ಅಲ್ಲದೇ, ರಷ್ಯಾ-ಉಕ್ರೇನ್ ನಡುವಿನ ಯುದ್ಧ ನಿಲ್ಲಿಸುವುದಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಉಕ್ರೇನ್ ಭಾರತದ ನೆರವನ್ನು ಯಾಚಿಸಿತ್ತು. ಇದೇ ರೀತಿ ಇತ್ತೀಚಿಗೆ ಇಸ್ರೇಲ್- ಪ್ಯಾಲೇಸ್ತೇನ್ ನಡುವಿನ ಯುದ್ಧ ಆರಂಭವಾದಗಲೂ, ಭಾರತ ಮಧ್ಯಪ್ರವೇಶಿಸ ಬೇಕು ಎನ್ನುವ ಒತ್ತಡ ವಿಶ್ವಮಟ್ಟದಲ್ಲಿ ಕೇಳಿಬಂದಿತ್ತು. ಅಚ್ಚರಿಯೆಂದರೆ ಈ ಹಿಂದೆ ಇಂತಹ ಮಧ್ಯಸ್ಥಿಕೆ ವಹಿಸುತ್ತಿದ್ದ ಅಮೆರಿಕವೂ, ಈ ಬಾರಿ ಭಾರತದ ಪ್ರಧಾನಿ ನರೇಂದ್ರ ಮೋದಿಯೇ ಈ ಮಧ್ಯಸ್ಥಿಕೆ ವಹಿಸಬೇಕು ಎನ್ನುವ ಒತ್ತಡವನ್ನು ಹೇರಿದ್ದು, ಬದಲಾದ ಭಾರತಕ್ಕೆ ಮತ್ತೊಂದು ಸಾಕ್ಷಿ.

ವೇದಿಕೆಗೆ ಬನ್ನಿ ಚರ್ಚೆ ಮಾಡೋಣ: ಬಿಜೆಪಿಗೆ ಸಿದ್ದರಾಮಯ್ಯ ಸವಾಲು

ಸೌದಿ ಅರೇಬಿಯಾದಲ್ಲಿ ಎಂಟು ಜನ ಮಾಜಿ ಸೈನಿಕರನ್ನು ಬೇಹುಗಾರಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಿ, ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಇದರ ರದ್ದತಿಗೆ ಹಲವು ರೀತಿಯ ಪ್ರಯತ್ನವಾದರೂ, ಪ್ರಯೋಜನವಾಗಲಿಲ್ಲ. ಕೊನೆಗೆ ಮೋದಿ ಅವರು ಸೌದಿ ರಾಜನೊಂದಿಗಿನ ವೈಯಕ್ತಿಕ ಸ್ನೇಹವನ್ನು ಬಳಸಿಕೊಂಡು ಗಲ್ಲು ಶಿಕ್ಷೆ ರದ್ದುಗೊಳಿಸಿದರು. ಹೀಗೆ ಹೇಳುತ್ತಾ ಹೋದರೆ, ಕಳೆದ ಒಂದು ದಶಕದಲ್ಲಿ ಇಂತಹ ನೂರಾರು ಉದಾಹರಣೆಗಳನ್ನು ನೀಡಬಹುದು. ಈ ರೀತಿ ಒಂದೇ ದಶಕದಲ್ಲಿ ಬದಲಾಗಿರುವ ಭಾರತವನ್ನು ನೋಡಿದ ನೆರೆಯ ಶತ್ರುರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾವೂ ಬಾಲ ಮುದುರಿ ಕೂತುಕೊಂಡಿವೆ. ಆದರೆ ದೇಶದ 130 ಕೋಟಿ ಜನರು ಇದನ್ನು ಗಮನಿಸುತ್ತಿದ್ದಾರೆ. ವಿಶ್ವಗುರುವಾಗುವ ಭಾರತವನ್ನು ನೋಡಲು ದೇಶದ ಜನರು ಉತ್ಸುಕರಾಗಿದ್ದಾರೆ.

Follow Us:
Download App:
  • android
  • ios