ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ: ಬಿಜೆಪಿ ತಿರುಗೇಟು
ನಾವು ಮೋದಿ ಮುಖವನ್ನು ಕಾರ್ಪೊರೇಷನ್ ಚುನಾವಣೆಗಳಲ್ಲಿ, ಎಂಎಲ್ಎ ಚುನಾವಣೆಗಳಲ್ಲಿ ಹಾಗೂ ಎಂಪಿ ಚುನಾವಣೆಗಳಲ್ಲಿ - ಹೀಗೆ ಎಲ್ಲ ಕಡೆಯೂ ನೋಡುತ್ತೇವೆ. ನಿಮಗೆ ರಾವಣನ ರೀತಿ 100 ತಲೆಗಳಿವೆಯೇ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕೆ ಮಾಡಿದ್ದಾರೆ.
ಗುಜರಾತ್ (Gujarat) ವಿಧಾನಸಭೆ ಚುನಾವಣೆ (Assembly Elections) ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳಿಂದ (Political Party) ಪ್ರಚಾರ, ಆರೋಪ - ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಹಲವು ತಿಂಗಳುಗಳಿಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಗುಜರಾತ್, ಹಿಮಾಚಲ ಪ್ರದೇಶ (Himachal Pradesh) ಸೇರಿ ಚುನಾವಣೆ (Election) ಇರುವ ಹಲವು ಕಡೆಗಳಲ್ಲಿ ಮೋದಿ ಬಿಜೆಪಿ (BJP) ಪರ ಮತಬೇಟೆ ನಡೆಸುತ್ತಲೇ ಇದ್ದಾರೆ. ಇದನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್ ಅಧ್ಯಕ್ಷ (Congress President) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗುಜರಾತ್ ಚುನಾವಣೆ ವೇಳೆ ಕೈ ಪಕ್ಷದ ಪರ ಪ್ರಚಾರ ನಡೆಸುತ್ತಿರುವ ವೇಳೆ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯನ್ನು ಮಲ್ಲಿಕಾರ್ಜುನ ಖರ್ಗೆ ರಾವಣನಿಗೆ ಹೋಲಿಸಿದ್ದು, ಈ ಹಿನ್ನೆಲೆ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಪ್ರತಿ ಚುನಾವಣೆಗೂ ಮೋದಿ ಮೇಲೆ ಬಿಜೆಪಿ ಹೆಚ್ಚು ಅವಲಂಬಿತವಾಗಿರುವುದಕ್ಕೆ ಕಾಂಗ್ರೆಸ್ ನೂತನ ಅದ್ಯಕ್ಷರು ಟೀಕೆ ಮಾಡಿದ್ದಾರೆ. ಗುಜರಾತ್ನ ಅಹಮದಾಬಾದ್ನ ಬೆಹ್ರಾಮ್ಪುರದಲ್ಲಿ ಸೋಮವಾರ ರಾತ್ರಿ ಸಾರ್ವಜನಿಕ ರ್ಯಾಲಿ ವೇಳೆ ಮಾತನಾಡಿದ ಖರ್ಗೆ, ನಾವು ನಿಮ್ಮ (ಮೋದಿ) ಮುಖವನ್ನು ಕಾರ್ಪೊರೇಷನ್ ಚುನಾವಣೆಗಳಲ್ಲಿ, ಎಂಎಲ್ಎ ಚುನಾವಣೆಗಳಲ್ಲಿ ಹಾಗೂ ಎಂಪಿ ಚುನಾವಣೆಗಳಲ್ಲಿ - ಹೀಗೆ ಎಲ್ಲ ಕಡೆಯೂ ನೋಡುತ್ತೇವೆ. ನಿಮಗೆ ರಾವಣನ ರೀತಿ 100 ತಲೆಗಳಿವೆಯೇ ಎಂದೂ ಟೀಕೆ ಮಾಡಿದ್ದಾರೆ.
ಇದನ್ನು ಓದಿ: Mallikarjun Kharge: ಪ್ರಧಾನಿಗಳೇ, ನಿಮ್ಮ ಚಹಾವನ್ನು ಕನಿಷ್ಠ ಕುಡಿತಾರೆ, ನಾವು ಮಾಡಿರೋ ಚಹಾವನ್ನು ಮುಟ್ಟೋದೇ ಇಲ್ಲ!
ಮುನ್ಸಿಪಲ್ ಚುನಾವಣೆಯಲ್ಲೇ ಆಗಲಿ, ಕಾರ್ಪೊರೇಷನ್ ಚುನಾವಣೆಯಲ್ಲೇ (ಅಥವಾ ವಿಧಾನಸಭೆ ಚುನಾವಣೆ) ಆಗಲಿ, ಮೋದಿಜೀ ಹೆಸರಲ್ಲಿ ಮತ ಕೇಳುವುದನ್ನು ನಾನು ನೋಡುತ್ತಲೇ ಇದ್ದೇನೆ. ಅಭ್ಯರ್ಥಿಯ ಹೆಸರಲ್ಲಿ ಮತ ಕೇಳಿ. ಮುನ್ಸಿಪಾಲಿಟಿಯಲ್ಲಿ ಮೋದಿ ಬಂದು ಕೆಲಸ ಮಾಡುತ್ತಾರಾ.. ನಿಮ್ಮ ಅಗತ್ಯದ ಸಮಯದಲ್ಲಿ ಅವರು ಸಹಾಯ ಮಾಡುತ್ತಾರಾ ಎಂದೂ ಸಾರ್ವಜನಿಕ ರ್ಯಾಲಿಯಲ್ಲಿ ಭಾಷಣದ ವೇಳೆ ಮಾತನಾಡಿದ್ದಾರೆ.
ಅಲ್ಲದೆ, ಗೋಧ್ರಾ ಘಟನೆ ಮತ್ತು ನಂತರ ಗುಜರಾತ್ನಲ್ಲಿ ನಡೆದ ಕೋಮುಗಲಭೆಗಳಿಗೆ ಮೋದಿಯನ್ನು ದೂಷಿಸುವ ಕಾಂಗ್ರೆಸ್ ಆರೋಪವನ್ನು ಉಲ್ಲೇಖಿಸಿ ಬಿಜೆಪಿ ವಕ್ತಾರ ಅಮಿತ್ ಮಾಳವಿಯ ಉಲ್ಲೇಖಿಸಿದ್ದಾರೆ. “ಗುಜರಾತ್ನಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ನಂಬಿದ್ದರೆ, ದೆಹಲಿಯಲ್ಲಿ ಕೇಂದ್ರ ಸರ್ಕಾರದ ಪರವಾಗಿ ಕೆಲಸ ಮಾಡಬೇಕಿದ್ದ ಮೋದಿಜಿ ಗುಜರಾತ್ನ ಗಲ್ಲಿ ಗಲ್ಲಿಗಳನ್ನು ಸುತ್ತುತ್ತಿರಲಿಲ್ಲ ಎಂದೂ ಟೀಕಿಸಿದ್ದಾರೆ. ಮೋದಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡುತ್ತಿದ್ದಾರೆ. ಗುಜರಾತ್ನ ಪ್ರತಿ ವಾರ್ಡ್ಗೆ ಹೋಗುತ್ತಿದ್ದಾರೆ. ಅವರು ಹೋಗುತ್ತಿದ್ದಾರೆ, ಅಮಿತ್ ಶಾ ಹೋಗುತ್ತಿದ್ದಾರೆ. 4 - 5 ಇತರೆ ರಾಜ್ಯಗಳ ಇತರ ಮುಖ್ಯಮಂತ್ರಿಗಳು ಹೋಗುತ್ತಿದ್ದಾರೆ, 40 ಕ್ಕೂ ಹೆಚ್ಚು ಕೇಂದ್ರ ಸಚಿವರು ಹೋಗುತ್ತಿದ್ದಾರೆ… ಏಕೆಂದರೆ ಜನರು ತಮ್ಮ ವಿರುದ್ಧ ಇದ್ದಾರೆ ಎಂದು ಅವರಿಗೆ ತಿಳಿದಿದೆ ಮತ್ತು ಅವರು ಅದನ್ನು ನೋಡಬಹುದು…” ಎಂದೂ ಗುಜರಾತ್ನಲ್ಲಿ ಸಾರ್ವಜನಿಕ ರ್ಯಾಲಿ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿಯನ್ನು ಟೀಕಿಸಿದ್ದಾರೆ.
ಇದನ್ನು ಓದಿ: ಸರ್ಜಿಕಲ್ ಸ್ಟ್ರೈಕ್ ಅನುಮಾನ, ಬಾಟ್ಲಾ ಉಗ್ರರ ಪರ ಕಣ್ಣೀರು, ಮೋದಿ ಭಾಷಣಕ್ಕೆ ಕಾಂಗ್ರೆಸ್, ಆಪ್ ಕಂಗಾಲು!
ಇನ್ನು, ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗೆ ಬಿಜೆಪಿಯಿಂದ ತೀವ್ರ ವಿರೋಧ ಕೇಳಿಬಂದಿದೆ. ಖರ್ಗೆ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಅಮಿತ್ ಮಾಳವಿಯ, ಕಾಂಗ್ರೆಸ್ ಪಕ್ಷವು ಪ್ರಧಾನಿಯನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಗುಜರಾತ್ ಚುನಾವಣೆಯ ಬಿಸಿ ತಾಳಲಾರದೆ, ಮೂಲೆಗೆ ತಳ್ಳಲ್ಪಟ್ಟ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಾತಿನ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು "ರಾವಣ" ಎಂದು ಕರೆಯುತ್ತಾರೆ. "ಮೌತ್ ಕಾ ಸೌದಾಗರ್" ನಿಂದ "ರಾವಣ" ವರೆಗೆ ಕಾಂಗ್ರೆಸ್ ಗುಜರಾತ್ ಮತ್ತು ಆ ರಾಜ್ಯದ ಮಗನನ್ನು ಅವಮಾನಿಸುತ್ತಲೇ ಇದೆ ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿ ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: Gujarat Elections: ಭದ್ರತಾ ಯೋಧನಿಂದ ಗುಂಡಿನ ದಾಳಿ: 2 ಯೋಧರ ಹತ್ಯೆ