* ಸರ್ಕಾರ ರಚಿಸಲು ತಯಾರಿ ನಡೆಸಿದ ಕಾಂಗ್ರೆಸ್‌* ಡಿಕೆ ಶಿವಕುಮಾರ್‌ಗೆ ಹೊಸ ಜವಾಬ್ದಾರಿ ವಹಿಸಿದ ಎಐಸಿಸಿ* ಟ್ರಬಲ್ ಶೂಟರ್ ಆಗ್ತಾರಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು, (ಮಾ.08): ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ., ಪಂಜಾಬ್, ಉತ್ತರಾಖಂಡ, ಉತ್ತರಪ್ರದೇಶ, ಮಣಿಪುರ ಮತ್ತು ಗೋವಾದಲ್ಲಿ ಯಾವ ಪಕ್ಷ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದೆ? ಯಾವ ರಾಜ್ಯದಲ್ಲಿ ಯಾವ ಪಕ್ಷ ಸರ್ಕಾರ ರಚಿಸಲಿದೆ? ಎಂಬುದರ ಬಗ್ಗೆ ಚುನಾವಣೋತ್ತರ ಸಮೀಕ್ಷೆಯ (Goa Exit Poll 2022) ಅಂಕಿ ಅಂಶಗಳು ಹೇಳುತ್ತಿವೆ. 

Add Asianetnews Kannada as a Preferred SourcegooglePreferred

ಅದರಲ್ಲೂ ಪ್ರಮುಖವಾಗಿದೆ ಈ ಸಮೀಕ್ಷೆ ಪ್ರಕಾರ ಗೋವಾದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯೆತೆಗಳಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಅಲರ್ಟ್ ಆಗಿದ್ದು, ನಿರೀಕ್ಷೆಯಂತೆ ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಸರ್ಕಾರ ರಚನೆಗೆ ಇನ್ನಿಲ್ಲದ ಕಸರತ್ತು ನಡೆಸಿದೆ.

Goa Exit Poll 2022 ಗೋವಾದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ,ಯಾರಿಗೆ ಗದ್ದುಗೆ?

ಗೋವಾದಲ್ಲಿ ಶಾಸಕರ ರಕ್ಷಣೆ ಜವಾಬ್ದಾರಿ ಡಿಕೆಶಿ ಹೆಗಲಿಗೆ
ಹೌದು..ಈ ಹಿಂದೆ ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆ ಅಲ್ಲಿನ ಶಾಸಕರನ್ನು ಇದೇ ಡಿಕೆ ಶಿವಕುಮಾರ್ ರಕ್ಷಣೆ ಮಾಡಿದ್ದರು. ಇದೀಗ ಎಐಸಿಸಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಗೋವಾ ಜವಾಬ್ದಾರಿ ನೀಡಿದೆ.

ಮಾರ್ಚ್ 10 ರಂದು ಗೋವಾ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆ ಡಿ.ಕೆ. ಶಿವಕುಮಾರ್ ಇಂದು (ಮಂಗಳವಾರ) ಗೋವಾಗೆ ತೆರಳಲಿದ್ದಾರೆ. ಕಳೆದ ಬಾರಿಯಂತೆ ಈ ಬಾರಿ ಶಾಸಕರು ಕೈತಪ್ಪದಂತೆ ಎಚ್ಚರಿಕೆ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಸ್ಥಳಕ್ಕೆ ಇರಿಸುವಂತೆ ನೋಡಿಕೊಳ್ಳಲಾಗಿದೆ. ಗೋವಾದಲ್ಲಿ ನೂತನ ಶಾಸಕರ ರಕ್ಷಣೆ ಜವಾಬ್ದಾರಿ ಡಿ.ಕೆ. ಶಿವಕುಮಾರ್​ಗೆ ವಹಿಸಲಾಗಿದೆ. 

ಗೋವಾ ಸಮೀಕ್ಷೆ
ಗೋವಾದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜನ್‌ಕಿ ಬಾತ್ ಸಮೀಕ್ಷೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದಿದೆ. ಆದರೆ ಟೈಮ್ಸ್ ನೌ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಟೈಮ್ಸ್‌ನೌ ಸಮೀಕ್ಷೆಯಲ್ಲಿ 16 ಸ್ಥಾನ ಗೆದ್ದುಕೊಂಡರೆ, ಬಿಜೆಪಿ 14 ಸ್ಥಾನ ಗೆಲ್ಲಲಿದೆ ಎಂದಿದೆ. ಎಬಿಪಿ ಸಮೀಕ್ಷೆಯಲ್ಲಿ ಬಿಜೆಪಿ 13 ರಿಂದ 17 ಸ್ಥಾನ ಗೆಲ್ಲಲಿದೆ ಎಂದರೆ ಕಾಂಗ್ರೆಸ್ 12 ರಿಂದ 16 ಸ್ಥಾನ ಗೆಲ್ಲಲಿದೆ ಎಂದಿದೆ. ಇನ್ನು ರಿಪಬ್ಲಿಕ್ ಹಾಗೂ P-MARQ ಸಮೀಕ್ಷೆಯಲ್ಲಿ ಸಮಬಲ ಸಾಧಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ 13 ರಿಂದ 17 ಸ್ಥಾನ ಗೆಲ್ಲಲಿದೆ ಎಂದಿದೆ.

ಗೋವಾದಲ್ಲಿ ಅತಂತ್ರ ಫಲಿತಾಂಶ ಸೂಚನೆಯನ್ನು ಸಮೀಕ್ಷೆ ಹೇಳಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ತಪ್ಪಿನಿಂದ ಎಚ್ಚೆತ್ತುಕೊಂಡಿದೆ. 2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನ ಗೆದ್ದುಕೊಂಡಿತು. ಇತ್ತ ಬಿಜೆಪಿ 13 ಸ್ಥಾನ ಗೆದ್ದುಕೊಂಡಿತ್ತು. ಆದರೆ ಅತೀ ದೊಡ್ಡ ಪಕ್ಷವಾದ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯಲು ವಿಫಲವಾಗಿತ್ತು. ಇದರ ನಡುವೆ ಬಿಜೆಪಿ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಈ ತಪ್ಪಿನಿಂದ ಪಾಠ ಕಲಿತಿರುವ ಕಾಂಗ್ರೆಸ್ ಈಗಾಗಲೇ ಸಣ್ಣ ಸಣ್ಣ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಮುಕ್ತವಾಗಿದೆ ಎಂದಿದೆ.

ಗೋವಾದಲ್ಲಿ ಮನೋಹರ್ ಲಾಲ್ ಪರಿಕ್ಕರ್ ನಿಧನದ ಬಳಿಕ ಕಾಂಗ್ರೆಸ್ ಪುಟಿದೆದ್ದಿದೆ. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಈಗಾಗಲೇ ಜಿಎಫ್‌ಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಇನ್ನು ಆಪ್ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದರೆ, ಟಿಎಂಸಿ ಪಕ್ಷ ಎಂಜಿಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿಲ್ಲ.

ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. 40 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಅಧಿಕಾರಕ್ಕೇರಲು 21 ಸ್ಥಾನಗಳನ್ನು ಗೆಲ್ಲಬೇಕಿದೆ. 

"