ಯಾರೆಲ್ಲಾ ನಮ್ಮ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರುತ್ತಾರೋ ಅವರನ್ನೆಲ್ಲಾ ಸೇರ್ಪಡೆ ಮಾಡಿಕೊಳ್ಳುತ್ತೇವೆ’ ಎನ್ನುವ ಮೂಲಕ ಮುಕ್ತ ಆಹ್ವಾನ ನೀಡಿದ ಡಿಕೆಶಿ. 

ಬೆಂಗಳೂರು(ಏ.19): ಬಿಜೆಪಿಯವರು ಸೋಲಿನ ಭೀತಿಯಿಂದ ಐಟಿ, ಇಡಿ ಮೂಲಕ ಹೆದರಿಸಲು ಹೊರಟಿದ್ದಾರೆ. ಕೇವಲ ಕಾಂಗ್ರೆಸ್‌ ನಾಯಕರನ್ನು ಮಾತ್ರ ಗುರಿಯಾಗಿಸಿ ಐಟಿ- ಇಡಿ ದಾಳಿ ಮಾಡುತ್ತಿಲ್ಲ. ನಮ್ಮ ಸಂಪರ್ಕದಲ್ಲಿರುವ ಉದ್ಯಮಿಗಳ ಮೇಲೂ ದಾಳಿ ಮಾಡುತ್ತಿದ್ದಾರೆ. ನಮ್ಮ ಕರೆ ಸ್ವೀಕರಿಸಲೂ ಸ್ನೇಹಿತರು ಹೆದರುವಂತಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಐಟಿ-ಇಡಿ ಅಧಿಕಾರಿಗಳೇ ಕಾಂಗ್ರೆಸ್‌ಗೆ ಸಹಾಯ ಮಾಡಬೇಡಿ ಎಂದು ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ನಾಯಕರಿಗೂ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ನಾವು ಹೆದರಲ್ಲ. ಈ ಚುನಾವಣೆಯಲ್ಲಿ ಅವರಿಗೆಲ್ಲ ಪಾಠ ಕಲಿಸುತ್ತೇವೆ’ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ 140 ಸ್ಥಾನ ಗೆಲ್ಲಲಿದೆ ಎಂದುಕೊಂಡಿದ್ದೆವು. ಆದರೆ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್‌, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ವೀರಶೈವ ಲಿಂಗಾಯತರ ಮತಗಳ ಶೇ.2 ರಿಂದ 3 ರಷ್ಟುಹೆಚ್ಚಾಗಲಿವೆ. ಪರಿಣಾಮ ರಾಜ್ಯ ಕಾಂಗ್ರೆಸ್‌ 150 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ 4ನೇ ಪಟ್ಟಿ ಬಿಡುಗಡೆ: ಶೆಟ್ಟರ್‌ಗೆ ಟಿಕೆಟ್‌- ಪುಲಿಕೇಶಿನಗರ ಸೇರಿ 8 ಕ್ಷೇತ್ರ ಬಾಕಿ

ಸಿದ್ಧಾಂತ ಒಪ್ಪಿ ಬಂದರೆ ರಾಮದಾಸ್‌ಗೆ ಸ್ವಾಗತ: ಡಿಕೆಶಿ

ಟಿಕೆಟ್‌ ನಿರಾಕರಣೆಗೆ ಒಳಗಾಗಿರುವ ಮೈಸೂರಿನ ಬಿಜೆಪಿ ಶಾಸಕ ಎಸ್‌.ಎ. ರಾಮದಾಸ್‌ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ‘ಯಾರೆಲ್ಲಾ ನಮ್ಮ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರುತ್ತಾರೋ ಅವರನ್ನೆಲ್ಲಾ ಸೇರ್ಪಡೆ ಮಾಡಿಕೊಳ್ಳುತ್ತೇವೆ’ ಎನ್ನುವ ಮೂಲಕ ಮುಕ್ತ ಆಹ್ವಾನ ನೀಡಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.