ಮೇಕೆದಾಟು ನೀರಾವರಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಅನುಮತಿ ಕೋರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್‌ ಅವರನ್ನು ಭೇಟಿಯಾಗಿ ವಸ್ತುಸ್ಥಿತಿ ವಿವರಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಿರ್ಧರಿಸಿದ್ದಾರೆ. 

ಬೆಂಗಳೂರು (ಜು.04): ಮೇಕೆದಾಟು ನೀರಾವರಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಅನುಮತಿ ಕೋರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್‌ ಅವರನ್ನು ಭೇಟಿಯಾಗಿ ವಸ್ತುಸ್ಥಿತಿ ವಿವರಿಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಿರ್ಧರಿಸಿದ್ದಾರೆ. ಮೇಕೆದಾಟು ಯೋಜನೆ ಕುರಿತಂತೆ ತಮಿಳುನಾಡು ಸರ್ಕಾರದ ವಿರೋಧ ವ್ಯಕ್ತಪಡಿಸುತ್ತಿದ್ದು, ಯೋಜನೆಯ ಡಿಪಿಆರ್‌ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. 

ಹೀಗಾಗಿ ರಾಜ್ಯ ಸರ್ಕಾರದ ಮುಂದಿನ ಕ್ರಮಗಳ ಕುರಿತಂತೆ ವಿಕಾಸಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಡಿ.ಕೆ. ಶಿವಕುಮಾರ್‌ ಸೋಮವಾರ ಸಭೆ ನಡೆಸಿದರು. ಸಭೆ ವೇಳೆ, ಯೋಜನೆ ಜಾರಿಗೆ ಇರುವ ಅಡೆತಡೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಜತೆಗೆ, ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಾದ ಏನಿರಬೇಕು ಎಂಬ ಬಗ್ಗೆ ಚರ್ಚಿಸಲಾಯಿತು. 

ಬರಿದಾಗುತ್ತಿದೆ ಕೆಆರ್‌ಎಸ್‌ ಜಲಾಶಯ: ಕುಡಿಯುವ ನೀರಿಗೂ ಸಮಸ್ಯೆಯಾಗುವ ಸಂಕಷ್ಟ ಪರಿಸ್ಥಿತಿ

ಈ ಕುರಿತು ರಾಜ್ಯ ಸರ್ಕಾರದ ಪರ ವಕೀಲರ ವಾದ ಯಾವ ರೀತಿಯಲ್ಲಿರಬೇಕು, ಅವರಿಗೆ ಯಾವ ರೀತಿಯ ಮಾಹಿತಿ ನೀಡಬೇಕು ಎಂಬ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಡಿ.ಕೆ. ಶಿವಕುಮಾರ್‌ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೇರಿದಂತೆ ಕೇಂದ್ರದ ಜಲಸಂಪನ್ಮೂಲ ಸಚಿವರು, ಪರಿಸರ, ಅರಣ್ಯ ಸಚಿವರನ್ನು ಭೇಟಿಯಾಗಿ ವಸ್ತುಸ್ಥಿತಿ, ಯೋಜನೆ ಜಾರಿಯ ಅವಶ್ಯಕತೆಯನ್ನು ಮನದಟ್ಟು ಮಾಡಿಕೊಡಬೇಕಿದೆ. ಅದಕ್ಕಾಗಿ ಖುದ್ದು ತಾವೇ ಪ್ರಧಾನಿ ಅವರು ಸೇರಿದಂತೆ ಇನ್ನಿತರ ಸಚಿವರನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಕಾವೇರಿ ವಿಚಾರದಲ್ಲಿ ತ.ನಾಡು ಜತೆ ಜಗಳ ಆಡಲ್ಲ: ತಮಿಳುನಾಡಿಗೆ ಕಾವೇರಿ ನೀರು ಬಿಡದ ವಿಚಾರವಾಗಿ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಕುಮಾರಕೃಪ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ನೀರಿನ ವಿಚಾರವಾಗಿ ತಮಿಳುನಾಡಿನ ಜತೆಗೆ ಜಗಳ ಆಡಲು ನಮಗೆ ಇಷ್ಟವಿಲ್ಲ. ಸುಪ್ರೀಂಕೋರ್ಚ್‌ ಆದೇಶವನ್ನು ಪಾಲಿಸುತ್ತೇವೆ. ತಮಿಳುನಾಡು ಸರ್ಕಾರಕ್ಕೆ ವಾಸ್ತವಾಂಶ ಗೊತ್ತಿಲ್ಲ ಎಂದು ಕಾಣಿಸುತ್ತಿದೆ. ಅವರೆಲ್ಲರೂ ನಮಗೆ ಸಹೋದರರಂತೆ. ಅಲ್ಲಿಯವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಏನೇ ಸಮಸ್ಯೆ ಇದ್ದರೂ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕು ಎಂಬುದು ನಮ್ಮ ಆಸೆ. ಆ ಬಗ್ಗೆ ತಮಿಳುನಾಡು ಸರ್ಕಾರದ ಗಮನಕ್ಕೂ ತರುತ್ತೇವೆ’ ಎಂದರು.

ಬಿಜೆಪಿ 605 ಭರ​ವ​ಸೆ​ಗ​ಳಲ್ಲಿ ಎಷ್ಟು ಈಡೇ​ರಿ​ಸಿ​ದೆ?: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಪ್ರಶ್ನೆ

ಮೇಕೆದಾಟು ಯೋಜನೆ ಜಾರಿಗೆ ಇರುವ ಅಡೆ-ತಡೆಗಳ ಬಗ್ಗೆ ಚರ್ಚಿಸಲಾಗಿದೆ. ಪ್ರಮುಖವಾಗಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಕುರಿತಂತೆ ಚರ್ಚಿಸಲಾಗಿದ್ದು, ಸವೋಚ್ಛ ನ್ಯಾಯಾಲಯದಲ್ಲಿ ನಮ್ಮ ವಾದ ಹೇಗಿರಬೇಕು ಎಂಬುದರ ಬಗ್ಗೆ ಉಪಮುಖ್ಯಮಂತ್ರಿಗಳು ಕೆಲ ನಿರ್ದೇಶನ ನೀಡಿದ್ದಾರೆ.
ರಾಕೇಶ್‌ ಸಿಂಗ್‌, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ