ಬೆಂಗ್ಳೂರಿನಿಂದ ವಿಮಾನ ಏರಿ ನಿಗೂಢ ಸ್ಥಳಕ್ಕೆ ಹೊರಟ ರಮೇಶ್ ಜಾರಕಿಹೊಳಿ
ಸಿದ್ದರಾಮಯ್ಯ ಸೇರಿದಂತೆ ವರಿಷ್ಠರ ಆಹ್ವಾನಕ್ಕೆ ಕಿಮ್ಮತ್ತು ಕೊಡದ ರಮೇಶ್ ಜಾರಕಿಹೊಳಿ ಬೆಂಗಳೂರಿನಿಂದ ನಿಗೂಢ ಸ್ಥಳಕ್ಕೆ ತೆರಳಿದ್ದಾರೆ.
ಬೆಂಗಳೂರು, [ಡಿ.25]: ಸಚಿವ ಸ್ಥಾನಕ ಕಿತ್ತುಕೊಂಡಿದ್ದರಿಂದ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ರಮೇಶ್ ಜಾರಕಿಹೊಳಿ ಎಂಬ ಜ್ವಾಲಾಮುಖಿ ನಿಧಾನಕ್ಕೆ ಕೆಂಡ ಉಗುಳಲು ಅಣಿಯಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವಿನ ಅಸಮಾಧಾನ ಮತ್ತಷ್ಟು ಸ್ಫೋಟಗೊಂಡಿದೆ.
ಸಚಿವ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ಅವರನ್ನು ಸಮಾಧಾನ ಮಾಡಲು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅಖಾಡಕ್ಕಿಳಿದಿದ್ದು, ತಮ್ಮನ್ನು ಭೇಟಿ ಮಾಡುವಂತೆ ರಮೇಶ್ ಜಾರಕಿಹೊಳಿಗೆ ಆಹ್ವಾನ ನೀಡಿದ್ದರು.
ಬೆಂಬಲಿಗರ ದಿಢೀರ್ ಸಭೆ ಕರೆದ ರಮೇಶ್ ಜಾರಕಿಹೊಳಿ: ಗರಿಗೆದರಿದ ರಾಜಕಾರಣ
ಏನೇ ಮುನಿಸು, ಅಸಮಾಧಾನ ಇದ್ದರೂ ಚರ್ಚೆ ಮಾಡೋಣ ಬನ್ನಿ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಸಹ ಅತೃಪ್ತರ ಜೊತೆ ಸಭೆ ನಡೆಸಲು ತೀರ್ಮಾನಿ ಸಿ ಇಂದು [ಡಿ.25] ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಆದರೆ ರಮೇಶ್ ಜಾರಕಿಹೊಳಿ ಅವರು ಇದ್ಯಾವುದಕ್ಕೆ ಡೋಂಟ್ ಕೇರ್ ಎಂದು ಬೆಂಗಳೂರಿನಿಂದ ಬೇರೆಡೆಗೆ ಕಾಲ್ಕಿತ್ತಿದ್ದಾರೆ. ಇಷ್ಟು ದಿನ ಬೆಂಗಳೂರಿನಲ್ಲೇ ಇದ್ದ ರಮೇಶ್ ಜಾರಕಿಹೊಳಿ ಇದೀಗ ಬೇಕಂತಲೇ ನಿಗೂಢ ಸ್ಥಳಕ್ಕೆ ತೆರಳಿದ್ದಾರೆ.
ಜಾರಕಿಹೊಳಿ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಕಾರಣ ಬಿಚ್ಚಿಟ್ಟ ದಿನೇಶ್
ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿಯೇ ಬೀಡುಬಿಟ್ಟಿದ್ದ ರಮೇಶ್ ಜಾರಕಿಹೊಳಿ ಹುಬ್ಬಳ್ಳಿಗೆ ತೆರಳಿದ್ದು, ಅಲ್ಲಿಂದ ಯಾವ ಕಡೆ ಹೋಗುತ್ತಾರೆ ಎನ್ನುವ ಖಚಿತ ಮಾಹಿತಿ ಇಲ್ಲ.
ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದು, ಮುಂದಿನ ಅವರ ನಡೆ ಕಾಂಗ್ರೆಸ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದಂತೂ ಸತ್ಯ.