ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿರುದ್ಧದ ಹೋರಾಟದ ಕುರಿತು ತಮಿಳುನಾಡು ಸರ್ಕಾರ ನೀಡಿರುವ ಆಹ್ವಾನದ ಕುರಿತು ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರು (ಮಾ.13): ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿರುದ್ಧದ ಹೋರಾಟದ ಕುರಿತು ತಮಿಳುನಾಡು ಸರ್ಕಾರ ನೀಡಿರುವ ಆಹ್ವಾನದ ಕುರಿತು ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ತಮಿಳುನಾಡಿನ ಅರಣ್ಯ ಸಚಿವ ಪೊನ್ನುಮುಡಿ, ರಾಜ್ಯಸಭೆ ಸದಸ್ಯ ಎಂ.ಎಂ.ಅಬ್ದುಲ್ಲ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ ಹೆಸರಲ್ಲಿ ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆ ಮಾಡುವ ಷಡ್ಯಂತ್ರ ನಡೆಸಿರುವ ಆರೋಪ ಎದುರಾಗಿದೆ. ಅದರ ವಿರುದ್ಧ ಹೋರಾಡಲು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಜಂಟಿ ಹೋರಾಟ ಸಮಿತಿ ರಚನೆಗೆ ಮುಂದಾಗಿದ್ದಾರೆ. ಇದೇ ತಿಂಗಳು 22ರಂದು ಚೆನ್ನೈನಲ್ಲಿ ಸಭೆ ನಡೆಯಲಿದ್ದು, ಅದರ ಕುರಿತು ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಿ ಅವರ ಮಾರ್ಗದರ್ಶನದಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಭದ್ರ ಮೇಲ್ದಂಡೆ ಶೀಘ್ರ ಪೂರ್ಣ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಇರುವ ಸಮಸ್ಯೆಗಳನ್ನು ಆರು ತಿಂಗಳಲ್ಲಿ ಇತ್ಯರ್ಥಪಡಿಸಿ ಕಾಮಗಾರಿ ಪೂರ್ಣಗೊಳಿಸಿ ನೀರು ಕೊಡಬೇಕು ಎಂಬ ಗುರಿಯಿದ್ದು, ಅದಕ್ಕೆ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದು ಶಿವಕುಮಾರ್ ಹೇಳಿದರು. ಎಂದು ಜಲಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಲೋಕಸಭಾ ಕ್ಷೇತ್ರ ಮರುವಿಂಗಡಣೆಯಲ್ಲಿ ಕೇಂದ್ರದ ನಡೆ ಖಂಡಿಸುತ್ತೇವೆ: ಸಿಎಂ ಸಿದ್ದರಾಮಯ್ಯ
ವಿಧಾನಸೌಧದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ಶಾಖಾ ಕಾಲುವೆ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿ ಭೂಸ್ವಾಧೀನ ಸಮಸ್ಯೆ ನಿವಾರಿಸುವ ಬಗ್ಗೆ ರೈತರು, ಶಾಸಕರು ಮತ್ತು ಅಧಿಕಾರಿಗಳ ಸಭೆ ನಡೆಯಿತು. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಅವರು, ಒಂದೇ ಸರ್ವೆ ನಂಬರ್ನ ಭೂಮಿಗೆ ಈ ಹಿಂದೆ 4 ಲಕ್ಷ ರು. ಪರಿಹಾರವಾಗಿ ನೀಡಲಾಗಿತ್ತು. ಈಗ ಅದೇ ಸರ್ವೆಯಲ್ಲಿ ಮತ್ತೊಂದು ಭೂಮಿಗೆ 20 ಲಕ್ಷ ರು.ಪರಿಹಾರ ಕೊಡಲಾಗಿದೆ. ಇದರಿಂದ ನಮಗೆ ತಾರತಮ್ಯ ಆಗಿದೆ ಎಂದು ಕೆಲ ರೈತರು ಭದ್ರ ಮೇಲ್ದಂಡೆ ಯೋಜನೆ ಕಾಮಗಾರಿಗೆ ಅಡ್ಡಿಯುಂಟು ಮಾಡಿದ್ದರು. ಇದನ್ನು ಕಾನೂನು ರೀತಿಯಲ್ಲಿ ಹೇಗೆ ಪರಿಹರಿಸಬಹುದೆಂದು ಸಭೆ ಕರೆದಿದ್ದೇವೆ ಎಂದರು.
