ಮಧು ಬಂಗಾರಪ್ಪ ಅವರ ಸಹೋದರಿಯೂ ಆದ ಗೀತಾ ಶಿವರಾಜ್‌ಕುಮಾರ್‌, ಕಿಮ್ಮನೆ ರತ್ನಾಕರ್‌ ಸೇರಿದಂತೆ ಮೂರ್ನಾಲ್ಕು ಮಂದಿಯ ಹೆಸರು ಮುಂದಿನ ಲೋಕಸಭೆ ಚುನಾವಣೆಗೆ ಪ್ರಸ್ತಾಪ ಮಾಡಲಾಯಿತು. ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ. ಸಂಗಮೇಶ್ವರ್‌ ಸೇರಿದಂತೆ ಎಲ್ಲಾ ಶಾಸಕರೂ ಒಟ್ಟಾಗಿ ಕುಳಿತು ಒಮ್ಮತದ ಹೆಸರಿನೊಂದಿಗೆ ಬನ್ನಿ ಎಂದು ಸಿದ್ದರಾಮಯ್ಯ ಅವರು ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.

ಬೆಂಗಳೂರು(ಆ.18):  ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಶಿವಮೊಗ್ಗ ಜಿಲ್ಲಾ ಸಚಿವರು ಹಾಗೂ ಕಾಂಗ್ರೆಸ್‌ ಶಾಸಕರ ಸಭೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಮತ್ತೆ ಗೀತಾ ಶಿವರಾಜ್‌ಕುಮಾರ್‌ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಶಾಸಕರು, ಪರಿಷತ್‌ ಸದಸ್ಯರ ಸಭೆ ನಡೆಯಿತು.

3 ತಿಂಗಳಲ್ಲೇ ಸಿದ್ದು ಸರ್ಕಾರದ ವರ್ಚಸ್ಸು ಕಡಿಮೆ: ಶಾಸಕ ವಿಜಯೇಂದ್ರ ಟೀಕೆ

ಈ ವೇಳೆ ಮಧು ಬಂಗಾರಪ್ಪ ಅವರ ಸಹೋದರಿಯೂ ಆದ ಗೀತಾ ಶಿವರಾಜ್‌ಕುಮಾರ್‌, ಕಿಮ್ಮನೆ ರತ್ನಾಕರ್‌ ಸೇರಿದಂತೆ ಮೂರ್ನಾಲ್ಕು ಮಂದಿಯ ಹೆಸರು ಮುಂದಿನ ಲೋಕಸಭೆ ಚುನಾವಣೆಗೆ ಪ್ರಸ್ತಾಪ ಮಾಡಲಾಯಿತು. ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ. ಸಂಗಮೇಶ್ವರ್‌ ಸೇರಿದಂತೆ ಎಲ್ಲಾ ಶಾಸಕರೂ ಒಟ್ಟಾಗಿ ಕುಳಿತು ಒಮ್ಮತದ ಹೆಸರಿನೊಂದಿಗೆ ಬನ್ನಿ ಎಂದು ಸಿದ್ದರಾಮಯ್ಯ ಅವರು ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.

ಪಕ್ಷದ ತೀರ್ಮಾನಕ್ಕೆ ಬದ್ಧ:

ಸಭೆ ಬಳಿಕ ಗೀತಾ ಶಿವರಾಜ್‌ಕುಮಾರ್‌ ಸ್ಪರ್ಧೆ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ, ಶಿವಮೊಗ್ಗ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆಯಾಗಿದೆ. ಆದರೆ ಯಾರು ಸ್ಪರ್ಧಿಸಬೇಕು ಎಂಬುದರ ಬಗ್ಗೆ ತೀರ್ಮಾನವಾಗಿಲ್ಲ. ಯಾರು ಸ್ಪರ್ಧಿಸಬೇಕು ಎಂಬುದು ಪಕ್ಷದ ತೀರ್ಮಾನ. ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧ ಎಂದು ಹೇಳಿದರು.