ರಾಜ್ಯ ಚುನಾವಣೆಗೆ ಬಿಜೆಪಿ ಸಾರಥಿಗಳಾಗಿ ಧರ್ಮೇಂದ್ರ ಪ್ರಧಾನ್, ಅಣ್ಣಾಮಲೈ ಆಯ್ಕೆ: ವಿಪಕ್ಷಗಳಿಗೆ ನಡುಕ
ರಾಜ್ಯದ ಚುನಾವಣೆ ಬಿಜೆಪಿ ಸಹ ಉಸ್ತುವಾರಿಯಾಗಿ ಅಣ್ಣಾಮಲೈ ನೇಮಕ
ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭ
ಕಾಂಗ್ರೆಸ್ ವಿರುದ್ಧ ಕೆಂಡಕಾರಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
ಬೆಂಗಳೂರು (ಫೆ.04): ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಸಹ ಉಸ್ತುವಾರಿಯಾಗಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ನೇಮಕವಾಗಿದ್ದಾರೆ. ರಾಜ್ಯದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಹಾಗೂ ಮೂರು ಪಕ್ಷಗಳ ನಾಯಕರ ಲೋಪದೋಷಗಳು ಗೊತ್ತಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಗೆ ನೀಡಿರುವುದು ವಿಪಕ್ಷಗಳಲ್ಲಿ ಕೆಲವರಿಗೆ ನಡುಕವಂತೂ ಶುರುವಾಗಿದೆ.
ಬೆಂಗಳೂರಲ್ಲಿ ವಿಶೇಷ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸೇರಿ ವಿವಿಧ ರಾಜ್ಯಗಳ ಬಿಜೆಪಿ ನಾಯಕರು ಸಭೆಗೆ ಆಗಮಿಸಿದ್ದಾರೆ. ಈ ವೇಳೆ ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಜ್ಯಕ್ಕೆ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಸಹ ಉಸ್ತುವಾರಿಯಾಗಿ ಅಣ್ಣಾಮಲೈ ನೇಮಕವಾಗಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿ ರಥಯಾತ್ರೆ ಮಹಾಸಂಗಮ: ಸಿ.ಟಿ.ರವಿ
ಕಾರ್ಯಕಾರಿಣಿ ಸಭೆಯಲ್ಲಿ ಯಡಿಯೂರಪ್ಪ ಭಾಷಣ: ಇನ್ನು ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಮೊನ್ನೆ ತಾನೇ ಕೇಂದ್ರ ಬಜೆಟ್ ಮಂಡನೆ ಮಾಡಲಾಗಿದೆ. ಕರ್ನಾಟಕ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿರುವುದನ್ನ ಗಮನಿಸಿದ್ದೀರಾ ಎಂದುಕೊಂಡಿದ್ದೇನೆ. ಏಪ್ರಿಲ್ 10,12 ರೊಳಗಾಗಿ ವಿಧಾನಸಭಾ ಚುನಾವಣೆ ಬರ್ತಿದೆ. ಬಹುಶಃ ಈ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು 130, 140 ಸ್ಥಾನ ಗೆದ್ದು ಸರ್ಕಾರ ರಚಿಸುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬರುವುದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್: ಕಾಂಗ್ರೆಸ್ನವರು ಮುಖ್ಯಮಂತ್ರಿ ಖುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ನಾನು ವಿರೋಧ ಪಕ್ಷದ ನಾಯಕರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ನಿಮ್ಮ ನಾಯಕರು ಯಾರು..? ರಾಹುಲ್ ಗಾಂಧಿನಾ..? ಎಂದು ಕೇಳಿದರು. ಕಾಂಗ್ರೆಸ್ ನಲ್ಲಿ ಅತೃಪ್ತಿ ಅಸಮಾಧಾನ ತುಂಬಿ ತುಳುಕುತ್ತಿದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಮೂರು ತಂಡಗಳಲ್ಲಿ ರಾಜ್ಯಾಧ್ಯಕ್ಷರು, ನಾನು, ಮುಖ್ಯಮಂತ್ರಿಗಳು ಪ್ರವಾಸ ಮಾಡಲಿದ್ದೇವೆ. ಕಾಂಗ್ರೆಸ್ ನ ಬಸ್ ಯಾತ್ರೆ ಆರಂಭ ಆದರೂ ಅಸಮಾಧಾನ ಇದೆ. ಏನೇನಾಗ್ತಿದೆ ಅಂತ ನೋಡ್ತಿದ್ದೀರಾ. ಕಾಂಗ್ರೆಸ್ ನ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್ ಆಗತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕಾಂಗ್ರೆಸ್ ಬಸ್ ಯಾತ್ರೆ ಬಗ್ಗೆ ಬಿ.ಎಸ್. ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.
ದೇಶದಲ್ಲಿ ಎನ್ಇಪಿ ಜಾರಿಗೊಳಿಸಿದ ರಾಜ್ಯ ಕರ್ನಾಟಕ: ದೇಶದಲ್ಲಿ ಮೊದಲ ಬಾರಿಗೆ ನ್ಯೂ ಎಜುಕೇಶನ್ ಪಾಲಿಸಿ (NEP) ಜಾರಿಗೊಳಿಸಿದ್ದು ಕರ್ನಾಟಕ. ಭಾಗ್ಯಲಕ್ಷಿ ಯೋಜನೆಯ ಅತಿ ಹೆಚ್ಚು ಫಲಾನುಭವಿಗಳು ಕರ್ನಾಟಕ ರಾಜ್ಯದಲ್ಲಿದ್ದಾರೆ. ಮನೆ ಮನೆಗೆ ಗಂಗೆ, 22.85 ಕೋಟಿ ಮನೆಗೆ ನಲ್ಲಿ ಸಂಪರ್ಕ ಕೊಡುವುದು. ಶುದ್ಧ ನೀರನ್ನ ಮನೆ ಮನೆಗೆ ಕೊಡುವ ಕೆಲಸ ಮಾಡಿದ್ದೇವೆ. ಗೋ ಹತ್ಯೆ ನಿಷೇಧ ಮಾಡುವ ಕೆಲಸ ಮಾಡಿದ್ದೇವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕೆಲಸ ಆರಂಭ ಆಗಿದೆ. ಪ.ಜಾ ಪ.ಪಂ ಜನರಿಗೆ 75 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡ್ತಿದ್ದೇವೆ ಎಂದು ಮಾಹಿತಿ ನೀಡಿದರು.
Assembly Election: ಕುಬೇರನ ಮೂಲೆಯಿಂದಲೇ ಶುರು "ಬಂಡೆ" ದಂಡಯಾತ್ರೆ!
ವಿಕಾಸಸೌಧದ ಬಳಿ ಅಂಬೇಡ್ಕರ್ ಸ್ಪೂರ್ತಿ ಭವನ: ಇನ್ನು ವಿಕಾಸಸೌಧದ ಬಳಿ ಅಂಬೇಡ್ಕರ್ ಸ್ಪೂರ್ತಿ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದೇವೆ. ನೇಕಾರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದೇವೆ. ಗ್ರಾಮ ಒನ್ ಯೋಜನೆ ಜಾರಿ ಮಾಡಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆ 5300 ಕೋಟಿ ಕೇಂದ್ರ ನೀಡಿದೆ. ಪ್ರಧಾನಿ ಅವರಿಗೆ ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ ಆಗಿದ್ದಾರೆ. ನೀವು ಮನೆ ಮನೆಗೆ ಹೋಗಿ ಕೇಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಯೋಜನೆ ತಲುಪಿದೆ. ರಾಜ್ಯ ಬಜೆಟ್ ನಲ್ಲಿ ಇನ್ನೂ ಹಲವು ಯೋಜನೆಗಳು ಜನರಿಗೆ ಸಿಗಲಿದೆ ಎಂದು ಮಾಹಿತಿ ನೀಡಿದರು.