ವಿಧಾನಪರಿಷತ್ ಕಲಾಪದಲ್ಲಿ  ನಡೆದ ಗಲಾಟೆಗೆ ಸಂಬಂಧಿಸಿದಂತೆ ಮಾಜಿ ಸಭಾಪತಿ ಡಿ. ಹೆಚ್. ಶಂಕರಮೂರ್ತಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ, (ಡಿ.15):  ಇಂದು (ಮಂಗಳವಾರ) ವಿಧಾನಪರಿಷತ್ ಕಲಾಪದಲ್ಲಿ ನಡೆದ ಘಟನೆ ಯಾರಿಗೂ ಶೋಭೆ ತರುವುದಿಲ್ಲ. ಇದೊಂದು ಬೇಸರದ ಘಟನೆ ಎಂದು ವಿಧಾನಪರಿಷತ್‌ನ ಮಾಜಿ ಸಭಾಪತಿ ಡಿ. ಹೆಚ್. ಶಂಕರಮೂರ್ತಿ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿರಿಯರ ಸದನದಲ್ಲಿ ಇಂತಹ ಘಟನೆ ನಡೆದಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ಈ ಘಟನೆಗೆ ಕಾಂಗ್ರೆಸ್ಸಿಗರೇ ಕಾರಣ. ಕಾಂಗ್ರೆಸ್ಸಿಗರು ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.

ಅಧಿಕಾರ ಇಲ್ಲದೆ ಅವರಲ್ಲಿ ಅಸಹನೆ ತುಂಬಿ ತುಳುಕುತ್ತಿದೆ. ಆದರೆ ಈ ರೀತಿಯ ವರ್ತನೆ ತೋರುವುದು ಸರಿಯಲ್ಲ. ಕಾಂಗ್ರೆೆಸ್ ನಾಯಕರು ಅಧಿಕಾರ ನಡೆಸುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದುಕೊಂಡಿದ್ದಾರೆ. ನೆಹರು ಕುಟುಂಬದವರು ಹಾಗೂ ಇತರರು ವಂಶಪಾರಂಪರ್ಯವಾಗಿ ತಾವೇ ಅಧಿಕಾರ ನಡೆಸಬೇಕು ಎಂಬ ಮನೋಭಾವ ಹೊಂದಿದ್ದಾಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ನಾನು ಸಭಾಪತಿಯಾಗಿದ್ದ ಸಂದರ್ಭದಲ್ಲಿ ನನ್ನ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಆದರೆ ನಾನು ಆಗ ಬಹುಮತ ಸಾಬೀತು ಆಗುವವರೆಗೂ ಕುರ್ಚಿಯ ಮೇಲೆ ಕುಳಿತಿರಲಿಲ್ಲ. ಈಗ ಸಭಾಪತಿಗಳಿಗೆ ಬಹುಮತ ಇಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇಂತಹ ಸನ್ನಿವೇಶದಲ್ಲಿ ಸಭಾಪತಿಗಳು ನಡೆದುಕೊಂಡ ರೀತಿ ಸರಿಯಲ್ಲ ಎಂದು ಹೇಳಿದರು.

ಸಂಸದೀಯ ನಡವಳಿಕೆಗೆ ರಾಜ್ಯದ ಜನಪ್ರತಿನಿಧಿಗಳು ಮಾದರಿಯಾಗಿದ್ದಾರೆ. ಆದರೆ ಇಂತಹ ಘಟನೆಗಳಿಂದ ರಾಜ್ಯದ ಜನತೆ ರಾಜಕೀಯ ವ್ಯಕ್ತಿಗಳನ್ನು ನೋಡುವ ದೃಷ್ಟಿಕೋನ ಬೇರೆಯದಾಗುತ್ತದೆ ಅಸಮಾಧಾನ ವ್ಯಕ್ತಪಡಿಸಿದರು.