ಪಂಚರಾಜ್ಯಗಳಲ್ಲಿ ಚುನಾವಣಾ ಫಲಿತಾಂಶ ಪ್ರಕಟ; ಉತ್ತಮ ಸಾಧನೆ ತೋರಿದ ಕಾಂಗ್ರೆಸ್; ಬಿಜೆಪಿಗೆ ಭಾರೀ ಹಿನ್ನಡೆ; ಪ್ರೀತಿ, ಶಾಂತಿ ಮತ್ತು ಸತ್ಯದ ಗೆಲುವು- ಕಾಂಗ್ರೆಸ್
ನವದೆಹಲಿ: 2019 ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚರಾಜ್ಯ ಚುನಾವಣೆಗಳು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಹುಟ್ಟುಹಾಕಿದ್ದು, ಇದೀಗ ಬಹುತೇಕ ಫಲಿತಾಂಶಗಳು ಹೊರಬಿದ್ದಿವೆ.
ಕಾಂಗ್ರೆಸ್-ಮುಕ್ತ ಭಾರತ ಎಂಬ ಘೋಷಣೆಯನ್ನು ಕೂಗುತ್ತಿದ್ದ ಬಿಜೆಪಿಗೆ ಪಂಚರಾಜ್ಯ ಚುನಾವಣೆಗಳ ಮತದಾರರು ಭಾರೀ ಮುಖಭಂಗವಾಗುವಂತಹ ಜನಾದೇಶ ನೀಡಿದ್ದಾರೆ.
ಮೀಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್, ಛತ್ತೀಸ್ಗಢ, ರಾಜಸ್ತಾನ ಹಾಗೂ ಮಧ್ಯಪ್ರದೇಶದಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ.
ಇದನ್ನೂ ಓದಿ: ಮಂದಿರ, ಪ್ರತಿಮೆ, ಹೆಸರು ಬದಲಾವಣೆ ಇದೇ ಮಾಡ್ತಿರಿ:: ಬಿಜೆಪಿ MP!
ಮೀಜೋರಾಂ ಅಧಿಕೃತ ಫಲಿತಾಂಶಗಳು ಪ್ರಕಟವಾಗಿದ್ದು, ತೆಲಂಗಾಣ, ರಾಜಸ್ತಾನ ಮತ್ತು ಛತ್ತೀಸ್ಗಢದಲ್ಲಿ ಸ್ಪಷ್ಟ ಚಿತ್ರಣ ಹೊರಬಿದ್ದಿದೆ. ಆದರೆ ಮಧ್ಯಪ್ರದೇಶದಲ್ಲಿ ಮ್ಯಾಜಿಕ್ ನಂಬರ್ ಮುಟ್ಟಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕರ್ನಾಟಕದಲ್ಲಿ ಆರಂಭವಾದ ಕಾಂಗ್ರೆಸ್ನ ವಿಜಯಯಾತ್ರೆ ಇದೀಗ ಬಿಜೆಪಿಯ ಭದ್ರಕೋಟೆಯಾದ ಉತ್ತರ ಭಾರತದ ರಾಜ್ಯಗಳಿಗೂ ವಿಸ್ತರಿಸಿರುವುದು ಕೈ ಪಾಳೆಯದಲ್ಲಿ ಹೊಸ ಸಂಚಲನವನ್ನುಂಟು ಮಾಡಿದೆ.
ಸರಣಿ ಸೋಲಿನಿಂದ ಕಂಗಾಲಾಗಿದ್ದ ಕೈ ಪಾಳೆಯಕ್ಕೆ ರಾಹುಲ್ ಗಾಂಧಿ ನೇತೃತ್ವದ ಈ ಗೆಲುವು ಹೊಸ ಹುಮ್ಮಸ್ಸು ತುಂಬಿದೆ.
ಇದನ್ನೂ ಓದಿ: ಬಿಜೆಪಿ ಗೆಲುವಿನ ಕುದುರೆ ಕಟ್ಟಿಹಾಕಿದ್ದು ಕರ್ನಾಟಕ.. ಅಂಕಿ ಅಂಶ ಇಲ್ಲಿದೆ..
ಕಾಂಗ್ರೆಸ್ ಪಂಚರಾಜ್ಯಗಳ ಗೆಲುವನ್ನು ಪ್ರಜಾತಂತ್ರದ ಗೆಲುವೆಂದು ಬಣ್ಣಿಸಿದೆ. ಭಾರತೀಯರಿಗೆ ಧನ್ಯವಾದ ಅರ್ಪಿಸಿರುವ ಪಕ್ಷವು, ಇದು ದ್ವೇಷದ ವಿರುದ್ಧ ಪ್ರೀತಿಗೆ, ಹಿಂಸೆಯ ಪ್ರತಿಯಾಗಿ ಶಾಂತಿಗೆ, ಸುಳ್ಳುಗಳ ವಿರುದ್ಧ ಸತ್ಯಕ್ಕೆ ಆಗಿರುವ ಜಯ ಎಂದು ವ್ಯಾಖ್ಯಾನಿಸಿದೆ.
ನವಂಬರ್- ಡಿಸೆಂಬರ್ನಲ್ಲಿ 5 ರಾಜ್ಯಗಳ ವಿಧಾನಸಭೆಗಳಿಗೆ ವಿವಿಧ ಹಂತಗಳಲ್ಲಿ ಚುನಾವಣೆ ನಡೆದಿತ್ತು. ತೆಲಂಗಾಣದಲ್ಲಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಪಕ್ಷ [TRS] ಬಹುಮತ ಪಡೆದಿದ್ದರೆ, ಮೀಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ [MNF] ಬಹುಮತ ಪಡೆದಿದೆ.
