Asianet Suvarna News Asianet Suvarna News

ಸೋತ ಶಾಸಕರು ಬಿಜೆಪಿ ನಾಯಕರ ವಿರುದ್ಧ ಗರಂ..!

ಸರ್ಕಾರ ಇದ್ದಾಗ ನಮ್ಮ ಸಲಹೆಗಳನ್ನೇ ಕೇಳಲಿಲ್ಲ, ಮತದಾರರ ಭಾವನೆ ತಿಳಿಯಲೂ ಯತ್ನಿಸಲಿಲ್ಲ, ಆಡಳಿತವಿರೋಧಿ ಅಲೆ, ಟಿಕೆಟ್‌ ಗೊಂದಲ ಸೋಲಿಗೆ ಕಾರಣ, ಸರ್ಕಾರ ಇದ್ದಾಗ ನಾವು ನೀಡಿದ ಸಲಹೆ ಕಿವಿಗೆ ಹಾಕಿಕೊಳ್ಳಲಿಲ್ಲ, ಕಾಂಗ್ರೆಸ್‌ನ ಭ್ರಷ್ಟಾಚಾರ ವಿರುದ್ಧ ದೂರು ಕೊಟ್ಟರೂ ಕ್ರಮವಿಲ್ಲ, ಕಾಂಗ್ರೆಸ್‌ ಪಕ್ಷದ ಆರೋಪಗಳಿಗೆ ಸೂಕ್ತ ತಿರುಗೇಟನ್ನು ಕೊಡಲಿಲ್ಲ, ಶೆಟ್ಟರ್‌, ಸವದಿ, ಈಶ್ವರಪ್ಪಗೆ ಟಿಕೆಟ್‌ ನಿರಾಕರಿಸಿದ್ದರಿಂದ ತಪ್ಪು ಸಂದೇಶ.

Defeated MLAs Fierce against BJP Leaders in Karnataka grg
Author
First Published Jun 9, 2023, 4:37 AM IST | Last Updated Jun 9, 2023, 4:37 AM IST

ಬೆಂಗಳೂರು(ಜೂ.09): ಆಡಳಿತ ವಿರೋಧಿ ಅಲೆ, ಕಾಂಗ್ರೆಸ್‌ ಪಕ್ಷದ ಗ್ಯಾರಂಟಿಗಳನ್ನು ನಿರ್ಲಕ್ಷಿಸಿದ್ದು ಮತ್ತು ಟಿಕೆಟ್‌ ಹಂಚಿಕೆಯಲ್ಲಿನ ಗೊಂದಲವೇ ನಮ್ಮ ಸೋಲಿಗೆ ಕಾರಣವಾಯಿತು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಳಿತ ವಿರೋಧಿ ಅಲೆಯನ್ನು ಗ್ರಹಿಸುವಲ್ಲಿ ನಮ್ಮ ಪಕ್ಷ ವಿಫಲವಾಯಿತು. ಸರ್ಕಾರ ಇದ್ದಾಗ ಅನೇಕ ಬಾರಿ ಶಾಸಕರು ಸಲಹೆಗಳನ್ನು ನೀಡಿದರೂ ಅವುಗಳನ್ನು ಆಡಳಿತ ನಡೆಸುತ್ತಿದ್ದವರು ಸ್ವೀಕರಿಸಲಿಲ್ಲ. ಸರಿಯಾಗಿ ಸ್ಪಂದಿಸಲಿಲ್ಲ. ಶಾಸಕರನ್ನು ಕರೆದು ಜನರ ಮನದಲ್ಲಿ ಯಾವ ಭಾವನೆಯಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂದು ಕೆಲವು ಹಿರಿಯ ಮಾಜಿ ಶಾಸಕರು ಏರಿದ ಧ್ವನಿಯಲ್ಲಿಯೇ ಮಾತನಾಡಿದರು ಎನ್ನಲಾಗಿದೆ.

ಕಾಂಗ್ರೆಸ್‌ನ ಗ್ಯಾರಂಟಿಗೆ ಬಿಜೆಪಿ ಯೋಜನೆ ಹಣ ಕಡಿತ ಬೇಡ: ಮಾಜಿ ಸಿಎಂ ಬೊಮ್ಮಾಯಿ

ಕಳೆದ ಬಾರಿ ಶಾಸಕರಾಗಿದ್ದ 54 ಮಂದಿ ಚುನಾವಣೆಯಲ್ಲಿ ಸೋಲುಂಡಿದ್ದಾರೆ ಎಂದರೆ ಸರ್ಕಾರದ ಆಡಳಿತ ಜನರಿಗೆ ಎಷ್ಟರ ಮಟ್ಟಿಗೆ ಬೇಸರವಾಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್‌ ಪಕ್ಷ ಸತತವಾಗಿ ಭ್ರಷ್ಟಾಚಾರದ ಆರೋಪ ಮಾಡಿದರೂ ಅದಕ್ಕೆ ಸರಿಯಾದ ತಿರುಗೇಟು ನೀಡಲು ಸಚಿವರಾಗಿದ್ದವರು ಹಾಗೂ ಮುಖಂಡರು ವಿಫಲರಾದರು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರಗಳನ್ನು ಮತ್ತು ವೈಫಲ್ಯಗಳನ್ನು ಪ್ರಮುಖವಾಗಿ ಎತ್ತಿ ತೋರಿಸುವ ಬದಲು ಮೇಲು ಮಟ್ಟದ ಟೀಕೆಗಳನ್ನು ಮಾಡಿದ್ದು ಪರಿಣಾಮ ಬೀರಲಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಗಳ ಬಗ್ಗೆ ದಾಖಲೆಗಳ ಸಮೇತ ಹತ್ತಾರು ದೂರುಗಳನ್ನು ನಮ್ಮ ಪಕ್ಷದ ಮುಖಂಡರೇ ದಾಖಲಿಸಿದ್ದರೂ ಅವುಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿಲ್ಲ. ಪರಿಣಾಮ ಬಿಜೆಪಿ ಸರ್ಕಾರವೇ ಭ್ರಷ್ಟಾಚಾರ ನಡೆಸಿರಬಹುದು ಎಂಬ ಅನುಮಾನ ದಿನೇ ದಿನೇ ಜನರಲ್ಲಿ ದಟ್ಟವಾಗುತ್ತಾ ಹೋಯಿತು. ನಮ್ಮ ಸರ್ಕಾರ ಹಲವು ಒಳ್ಳೆಯ ಕಾರ್ಯಕ್ರಮಗಳನ್ನು ನೀಡಿದರೂ ಅವುಗಳನ್ನು ಈ ಭ್ರಷ್ಟಾಚಾರದ ಆರೋಪ ನುಂಗಿ ಹಾಕಿತು ಎಂದು ಮಾಜಿ ಶಾಸಕರೊಬ್ಬರು ಅಲವತ್ತುಕೊಂಡರು ಎಂದು ತಿಳಿದು ಬಂದಿದೆ.

ಮೇಲಾಗಿ, ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷ ನೀಡಿದ ಐದು ಗ್ಯಾರಂಟಿಗಳನ್ನು ಜನರು ನಂಬಿದರು. ಚುನಾವಣೆಗೆ ಹಲವು ದಿನಗಳ ಮೊದಲೇ ಒಂದೊಂದಾಗಿ ಗ್ಯಾರಂಟಿಗಳನ್ನು ಪ್ರಕಟಿಸುವ ಮೂಲಕ ಕಾಂಗ್ರೆಸ್‌ ಪಕ್ಷ ಜನರ ಒಲವು ಗಳಿಸಿತು. ಆದರೆ, ನಮ್ಮ ಬಿಜೆಪಿ ಮತದಾನಕ್ಕೆ ದಿನಗಣನೆ ಆರಂಭವಾದಾಗ ಪ್ರಣಾಳಿಕೆ ಬಿಡುಗಡೆ ಮಾಡಿತು. ಅದು ಜನರಿಗೆ ಸರಿಯಾಗಿ ತಲುಪಲೂ ಇಲ್ಲ. ಅಷ್ಟುಹೊತ್ತಿಗಾಗಲೇ ಕಾಂಗ್ರೆಸ್‌ ಗ್ಯಾರಂಟಿಗಳು ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದವು ಎಂದು ಮತ್ತೊಬ್ಬ ಪರಾಜಿತ ಅಭ್ಯರ್ಥಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಅತಿಯಾದ ಆತ್ಮವಿಶ್ವಾಸ ಬಿಜೆಪಿ ಸೋಲಿಗೆ ಕಾರಣ: ಮಾಜಿ ಸಚಿವ ಬಿ.ಶ್ರೀರಾಮುಲು

ಟಿಕೆಟ್‌ ಹಂಚಿಕೆಯಲ್ಲಿನ ಗೊಂದಲ ಸೋಲಿಗೆ ಮತ್ತೊಂದು ಪ್ರಮುಖ ಕಾರಣ. ಯಾರಿಗೆ ಟಿಕೆಟ್‌ ನೀಡಬೇಕು ಅಥವಾ ನೀಡಬಾರದು ಎಂಬುದನ್ನು ಕೆಲವು ತಿಂಗಳು ಮುಂಚಿತವಾಗಿಯೇ ತಿಳಿಸಬೇಕಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ, ಈಶ್ವರಪ್ಪ ಅವರಿಗೆ ಟಿಕೆಟ್‌ ನಿರಾಕರಿಸಿದ್ದು ಆಯಾ ಸಮುದಾಯಗಳಲ್ಲಿ ತಪ್ಪು ಸಂದೇಶ ರವಾನಿಸಿತು ಎಂದು ಮಾಜಿ ಶಾಸಕರೊಬ್ಬರು ಹೇಳಿದರು ಎನ್ನಲಾಗಿದೆ.

ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios