ದಿವಂಗತ ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ ಶಾಮನೂರು, ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಬಿ-ಫಾರಂ ಸಿಗದಿದ್ದರೂ ದಾವಣಗೆರೆ ಕ್ಷೇತ್ರದಿಂದ ಸ್ವತಂತ್ರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ತಾತನ ಹಾದಿಯಲ್ಲೇ ಸಾಗುತ್ತಿರುವುದಾಗಿ ಹೇಳಿ, ಪಕ್ಷದ ಟಿಕೆಟ್ ಸಿಗುವ ಮತ್ತು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ (ಮಾ.20): ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಬಿ ಫಾರಂ ಸಿಗದಿದ್ದರೂ ದಿವಂಗತ ಶ್ಯಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ ಮಲ್ಲಿಕಾರ್ಜುನ ಶಾಮನೂರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಷ್ಟಕ್ಕೂ ಬಿ ಫಾರಂ ನಿಮಗೆ ಸಿಕ್ಕಿದೆಯೇ ಎಂದು ಕೇಳಿದರೆ, 'ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ನೀವು ಓದಿದ್ದೀರಾ? ಈ ಪಕ್ಷವನ್ನು ಕಟ್ಟಿದವರೇ ಅವರು. ನಮ್ಮ ಪಾರ್ಟಿ ಕಾರ್ಯಕರ್ತರ ಮೇಲೆ ನಮಗೆ ನಂಬಿಕೆ ಇದೆ, ಟಿಕೆಟ್ ನಮಗೆ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಸಮರ್ಥ ಶಾಮನೂರು ಹೇಳಿದರು.

ದಾವಣಗೆರೆಯ ರಾಜಕೀಯದಲ್ಲಿ ಇಂದು ಹೊಸ ಸಂಚಲನ ಸೃಷ್ಟಿಯಾಗಿದೆ. ಹಿರಿಯ ರಾಜಕೀಯ ಮುತ್ಸದ್ದಿ, ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ ಶಾಮನೂರು ಚುನಾವಣಾ ಕಣಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ. ಯುಗಾದಿ ಮತ್ತು ರಂಜಾನ್ ಹಬ್ಬಗಳ ಶುಭ ಮುಹೂರ್ತದಂದು ಸಮರ್ಥ ತಮ್ಮ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ತಮ್ಮ ತಾತ ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಬಳಸುತ್ತಿದ್ದ ಅತ್ಯಂತ ಪ್ರೀತಿಯ KA 51 MR 0555 ಸಂಖ್ಯೆಯ ಇನ್ನೋವಾ ಕಾರಿನಲ್ಲೇ ಸಮರ್ಥ ಅವರು ಚುನಾವಣಾ ಕಚೇರಿಗೆ ಆಗಮಿಸಿದರು. ತಾತನ ಆಶೀರ್ವಾದ ಮತ್ತು ಅವರ ಪರಂಪರೆಯನ್ನು ಮುಂದುವರಿಸುವ ಸಂಕಲ್ಪದೊಂದಿಗೆ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದರು.

ಬಿ-ಫಾರಂ ಬಗ್ಗೆ ಸಮರ್ಥ ಖಡಕ್ ಉತ್ತರ:

ನಾಮಪತ್ರ ಸಲ್ಲಿಕೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಮರ್ಥ ಅವರಿಗೆ 'ಅಧಿಕೃತವಾಗಿ ಬಿ-ಫಾರಂ ಸಿಕ್ಕಿದೆಯಾ?' ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಅತ್ಯಂತ ಆತ್ಮವಿಶ್ವಾಸದಿಂದ ಉತ್ತರಿಸಿದ ಅವರು, 'ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ನೀವು ಓದಿದ್ದೀರಾ? ಈ ಪಕ್ಷವನ್ನು ಕಟ್ಟಿದವರೇ ಅವರು. ನಮ್ಮ ಪಾರ್ಟಿ ಕಾರ್ಯಕರ್ತರ ಮೇಲೆ ನಮಗೆ ನಂಬಿಕೆ ಇದೆ, ಟಿಕೆಟ್ ನಮಗೆ ಸಿಗುತ್ತದೆ ಎಂಬ ವಿಶ್ವಾಸವಿದೆ' ಎಂದು ಮಾರ್ಮಿಕವಾಗಿ ಉತ್ತರಿಸಿದರು. ಅಲ್ಲದೆ, ಕಳೆದ 6 ತಿಂಗಳಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಜನರ ವಿಶ್ವಾಸ ಗಳಿಸಿದ್ದೇನೆ ಎಂದು ತಿಳಿಸಿದರು.

ಮಗನ ಬೆನ್ನಿಗೆ ನಿಂತ ಸಂಸದೆ ಪ್ರಭಾ ಮಲ್ಲಿಕಾರ್ಜುನ:

ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಮಗನ ರಾಜಕೀಯ ಪ್ರವೇಶಕ್ಕೆ ಭರ್ಜರಿ ಬೆಂಬಲ ನೀಡಿದ್ದಾರೆ. 'ಯುಗಾದಿ ಮತ್ತು ರಂಜಾನ್ ಹಬ್ಬಗಳು ಕೂಡಿ ಬಂದಿರುವುದು ಒಂದು ಶುಭ ಸಂಕೇತ. ಯುಗಾದಿಯ ಈ ದಿನ ರಾಜಕೀಯದಲ್ಲಿ ಹೊಸ ಚಿಗುರು ಮೂಡುತ್ತಿದೆ. ಯುವಕರು ರಾಜಕಾರಣಕ್ಕೆ ಬರಬೇಕು ಎಂಬುದು ನಮ್ಮ ಆಶಯ. ಈ ಹಿಂದೆ ಅಪ್ಪಾಜಿಯವರು ಕೂಡ ಬಿ-ಫಾರಂ ಇಲ್ಲದೆ ನಾಮಪತ್ರ ಸಲ್ಲಿಸಿದ್ದರು, ಈಗ ಸಮರ್ಥ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಜನರ ಬೆಂಬಲ ನಮಗಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೆಲುವಿನ ಲೆಕ್ಕಾಚಾರ:

'ನಮ್ಮ ತಾತ ಮಾಡಿದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ. ಈ ಕ್ಷೇತ್ರದಲ್ಲಿ ನೂರಕ್ಕೆ ನೂರು ಗೆಲ್ಲುವ ಅವಕಾಶ ನಮಗಿದೆ' ಎಂದು ಸಮರ್ಥ ಶಾಮನೂರು ಈ ಸಂದರ್ಭದಲ್ಲಿ ಹೇಳಿದರು. ಇಂದು ಒಂದು ಸೆಟ್ ನಾಮಪತ್ರ ಸಲ್ಲಿಸಿರುವ ಅವರು, ಮುಂಬರುವ ಸೋಮವಾರದಂದು ಮತ್ತೆ ಮೂರು ಸೆಟ್ ನಾಮಪತ್ರಗಳನ್ನು ಅಧಿಕೃತವಾಗಿ ಸಲ್ಲಿಸಲಿದ್ದಾರೆ. ದಾವಣಗೆರೆಯ ಶಾಮನೂರು ಕುಟುಂಬದ ಈ ಮೂರನೇ ತಲೆಮಾರಿನ ನಾಯಕನ ಎಂಟ್ರಿ, ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಯಾವ ರೀತಿಯ ಬದಲಾವಣೆ ತರಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.