ಕಾಂಗ್ರೆಸ್ ಪಕ್ಷವು ಶಿಸ್ತುಬದ್ಧವಾಗಿದ್ದು, ಕೂಲಂಕುಷವಾಗಿ ಪರಿಶೀಲಿಸಿಯೇ ನಿರ್ಧಾರ ಕೈಗೊಳ್ಳುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಪಕ್ಷದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಶಾಮನೂರು ಶಿವಶಂಕರಪ್ಪನವರ ಹೇಳಿಕೆಗೂ ಸ್ಪಷ್ಟನೆ ನೀಡಿದರು.

ದಾವಣಗೆರೆ (ಏ.22): ಕಾಂಗ್ರೆಸ್ ಪಕ್ಷವೆಂದರೆ ಶಿಸ್ತುಬದ್ಧ ಪಕ್ಷವಾಗಿದ್ದು, ಪಕ್ಷದಲ್ಲಿ ಒಂದು ಸಿದ್ಧಾಂತ, ನೈತಿಕತೆ ಇರುತ್ತದೆ. ಪಕ್ಷವು ಒಂದು ನಿರ್ಧಾರ ಕೈಗೊಂಡರೆ ಅದಕ್ಕೊಂದು ಕಾರಣ ಇದ್ದೇ ಇರುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಎಂಎಲ್‌ಸಿ ಕೆ.ಅಬ್ದುಲ್ ಜಬ್ಬಾರ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್ ವಿರುದ್ಧ ಕಾಂಗ್ರೆಸ್ ಪಕ್ಷವು ಕ್ರಮ ಕೈಗೊಂಡ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಗಳ ಬಗ್ಗೆ ಕೆಪಿಸಿಸಿ, ಎಐಸಿಸಿ ಮಟ್ಟದಲ್ಲಿ ಎಲ್ಲಾ ರೀತಿ ಫೀಡ್ ಬ್ಯಾಕ್‌ ಪಡೆದು, ಚುನಾವಣೆಯಲ್ಲಿ ಯಾರು ಕೆಲಸ ಮಾಡಿದ್ದಾರೆ, ಇಷ್ಟು ವರ್ಷ ಏನೇನಾಗಿದೆ, ರಾಜಕಾರಣದಲ್ಲಿ ಅದನ್ನೆಲ್ಲಾ ಕೂಲಂಕುಷವಾಗಿ ನೋಡಿಯೇ ಒಂದು ನಿರ್ಧಾರ ಕೈಗೊಳ್ಳಲಾಗುತ್ತದೆ. ಹಾಗಾದಾಗಲೇ ಒಂದು ಶಿಸ್ತುಬದ್ಧವಾದ ಪಕ್ಷ ಕಾಂಗ್ರೆಸ್ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದರು.

ಶಿವಮೊಗ್ಗದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಪಾಲ್ಗೊಂಡಿದ್ದರು. ಸಭೆಯಲ್ಲಿ ಅಲ್ಲಿನ ಸಂಸದ ಬಿ.ವೈ.ರಾಘವೇಂದ್ರ ಸಹ ಉಪಸ್ಥಿತರಿದ್ದರು. ರಾಘವೇಂದ್ರ ಒಳ್ಳೆಯ ಕೆಲಸ ಮಾಡಿದ್ದಾರೆಂದಷ್ಟೇ ಅಪ್ಪಾಜಿ (ಶಾಮನೂರು ಶಿವಶಂಕರಪ್ಪ) ಹೇಳಿದ್ದಾರೆ. ಅಪ್ಪಾಜಿ, ನಾನು ಮಾತನಾಡಿರಬಹುದಾದ ಎಲ್ಲವನ್ನೂ ನೋಡಿಯೇ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ ಎಂದು ರಾಘವೇಂದ್ರಗೆ ಗೆಲ್ಲಿಸುವಂತೆ ಕರೆ ನೀಡಿದ್ದ ಶಾಮನೂರು ವಿರುದ್ಧ ಕ್ರಮ ಕೈಗೊಳ್ಳಲಿಲ್ಲ, ಮುಸ್ಲಿಮರಿಗೆ ಟಿಕೆಟ್ ಕೇಳಿದ್ದಕ್ಕೆ ನಮ್ಮ ಮೇಲೆ ಕ್ರಮ ಏಕೆ ಎಂಬ ಮುಸ್ಲಿಂ ನಾಯಕರ ಪ್ರಶ್ನೆಗೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದರು.

ಸಮರ್ಥ ಶಾಮನೂರು ಗೆಲುವು ನಿಶ್ಚಿತ:

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಮೆ ಬಗ್ಗೆ ನಮಗೆ ಯಾವುದೇ ಟೆನ್ಷನ್ ಇಲ್ಲ. ಜನರು ಯಾವತ್ತೂ ಕಾಂಗ್ರೆಸ್ ಪಕ್ಷದ ಪರವಾಗಿಯೇ ಇದ್ದಾರೆ. ಒಳ್ಳೆಯ ಬಹುಮತದಿಂದ ಸಮರ್ಥ ಶಾಮನೂರು ಜಯ ಸಾಧಿಸಲಿದ್ದಾರೆ. 8 ಸಾವಿರ, 15 ಸಾವಿರ, 30 ಸಾವಿರ ಮತಗಳ ಅಂತರದಲ್ಲಿ ಸಮರ್ಥ ಗೆಲ್ಲುತ್ತಾರೆಂದು ಕ್ಷೇತ್ರದ ಜನರೆ ಹೇಳುತ್ತಿದ್ದಾರೆ. ಮೇ.4ರಂದು ಗೊತ್ತಾಗುತ್ತದೆ. ಸಮರ್ಥ ಗೆದ್ದೇ ಗೆಲುತ್ತಾರೆಂಬ ಸಂಪೂರ್ಣ ವಿಶ್ವಾಸ, ನಂಬಿಕೆ ನಮಗಿದೆ ಎಂದು ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು.