'ಮಿಸ್ಟರ್ ಜಮೀರ್ ರಾಜ್ಯ ನಿಮ್ಮಪ್ಪನ ಮನೆ ಆಸ್ತಿಯೇನು?' ಜನಾಕ್ರೋಶ ಯಾತ್ರೆಯಲ್ಲಿ ರೇಣುಕಾಚಾರ್ಯ ಆಕ್ರೋಶ!

Synopsis
ದಾವಣಗೆರೆಯ ಜನಾಕ್ರೋಶ ಯಾತ್ರೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 'ಪಂಚ ಭರವಸೆ'ಗಳನ್ನು ಸುಳ್ಳಿನ ಕಂತೆ ಎಂದು ಕರೆದರು, ಜೊತೆಗೆ ರಾಹುಲ್ ಗಾಂಧಿ ಮತ್ತು ಜಮೀರ್ ಅಹ್ಮದ್ ಖಾನ್ ವಿರುದ್ಧವೂ ಕಿಡಿಕಾರಿದರು.
ದಾವಣಗೆರೆ (ಏ.21): ಜನಾಕ್ರೋಶ ಯಾತ್ರೆಯ ಅಂತಿಮ ಸಮಾವೇಶದಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಎಂಪಿ ರೇಣುಕಾಚಾರ್ಯ ಅವರು, ಹೋರಾಟಕ್ಕೆ ಮತ್ತೊಂದು ಹೆಸರು ದಾವಣಗೆರೆ ಜಿಲ್ಲೆ. ಇಲ್ಲಿ ಕಾರ್ಯಕ್ರಮ ಆದ್ರೆ ಸಂವಿಧಾನ ಮೂರನೇ ಮಹಡಿಯಲ್ಲಿ ಸರ್ಕಾರ ಬರಲಿದೆ. ಇಲ್ಲಿ ನಡೆದಿರೋ ಎಲ್ಲಾ ಹೋರಾಟಗಳು ಇಲ್ಲಿ ಯಶಸ್ವಿಯಾಗಿವೆ. ಜನಾಕ್ರೋಶ ಯಾತ್ರೆಯ ಅಂತಿಮ ಸಮಾವೇಶವನ್ನು ನಮ್ಮ ಜಿಲ್ಲೆಗೆ ಕೊಡಿ ಎಂದು ಕರೆ ನೀಡಿದರು.
ಗ್ಯಾರೆಂಟಿ ಸುಳ್ಳಿನ ಕಂತೆ:
ಕಾಂಗ್ರೆಸ್ ಸರ್ಕಾರದ 'ಪಂಚ ಭರವಸೆ'ಗಳನ್ನು ಸುಳ್ಳಿನ ಕಂತೆ ಎಂದು ಕರೆದ ರೇಣುಕಾಚಾರ್ಯ, 'ಗೃಹಲಕ್ಷ್ಮಿ, ಯುವನಿಧಿ, ಗೃಹ ಜ್ಯೋತಿ ಯೋಜನೆಗಳು ವಿಫಲವಾಗಿವೆ. ವಿದ್ಯುತ್ ದರ ಏರಿಕೆಯಾಗಿದೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಸರ್ಕಾರ ಜನರಿಗೆ ಮೋಸ ಮಾಡಿದೆ' ಎಂದು ಆರೋಪಿಸಿದರು. ಅಲ್ಲದೇ ಡಿಕೆ ಶಿವಕುಮಾರ್ ಕುರ್ಚಿಯ ಬೋಲ್ಟ್ ಲೂಸ್ ಮಾಡಿ ಸಿಎಂ ಆಗಲು ಪ್ರಯತ್ನಿಸುತ್ತಿದ್ದಾರೆ, ಆದರೆ ಸಿಎಂ ಸಿದ್ದರಾಮಯ್ಯ ಕೂಡ ಹಿಂದಿನ ಬಾಗಿಲಿನಿಂದ ಮುಖ್ಯಮಂತ್ರಿಯಾಗಿ ಉಳಿಯಲು ಹವಣಿಸುತ್ತಿದ್ದಾರೆ. ಈ ಇಬ್ಬರ ಜಗಳದಲ್ಲಿ ರಾಜ್ಯದ ಜನ ಬಡವರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಜಾತಿಗಣತಿ ಸಭೇಲಿ ಗಲಾಟೆ ಮಾಡಿದ್ದು ಸಚಿವರಲ್ಲ, ಮೈಕ್ಸೆಟ್!
ಮಿಸ್ಟರ್ ಜಮೀರ್ ಕರ್ನಾಟಕ ನಿಮ್ಮಪ್ಪನ ಮನೆ ಆಸ್ತಿನಾ?
ರಾಹುಲ್ ಗಾಂಧಿ ಮತ್ತು ಜಮೀರ್ ಅಹ್ಮದ್ ಖಾನ್ ವಿರುದ್ಧವೂ ರೇಣುಕಾಚಾರ್ಯ ಕಿಡಿಕಾರಿದರು. 'ರಾಹುಲ್ ಗಾಂಧಿ ಎಳಸು, ಪಪ್ಪು ಗಾಂಧಿ ಕೈಯಲ್ಲಿ ಅಂಬೇಡ್ಕರ್ ಸಂವಿಧಾನವನ್ನು ಇಟ್ಟುಕೊಂಡು ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ. ಮಿಸ್ಟರ್ ಜಮೀರ್, ಕರ್ನಾಟಕವೇನು ನಿಮ್ಮ ತಂದೆಯ ಆಸ್ತಿಯೇ? ಹಿಂದೂ ಭೂಮಿ, ಮಠ-ಮಾನ್ಯಗಳ ಭೂಮಿಯನ್ನು ನುಂಗಿದ್ದೀರಿ. ನಿಮ್ಮ ಪ್ರಚೋದನಕಾರಿ ಭಾಷಣಗಳಿಂದ ಗಲಭೆ ಉಂಟಾಗುತ್ತಿದೆ. ನಾವು ಇನ್ನೂ ಸುಮ್ಮನಿರುವುದಿಲ್ಲ' ಎಂದು ಎಚ್ಚರಿಕೆ ನೀಡಿದರು.
ವೇದಿಕೆಯಲ್ಲೇ ವಿಜಯೇಂದ್ರ ಪರ ಬ್ಯಾಟಿಂಗ್:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಶ್ಲಾಘಿಸಿದ ರೇಣುಕಾಚಾರ್ಯ, ವಿಜಯೇಂದ್ರ ಯಡಿಯೂರಪ್ಪನವರ ಮಗ ಎಂದು ಹೊಗಳುವುದಿಲ್ಲ, ಆದರೆ ಅವರಿಗೆ ಹೋರಾಟದ ಹಿನ್ನೆಲೆಯಿದೆ. ಸಂಘರ್ಷದಿಂದಲೇ ಬೆಳೆದುಬಂದವರು. ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಸೇರಿದಂತೆ ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ದಾವಣಗೆರೆ ಜಿಲ್ಲೆಯ ಜನರು ಸದಾ ವಿಜಯೇಂದ್ರ ಜೊತೆಗಿದ್ದಾರೆ. ಭವಿಷ್ಯದ ನಾಯಕರಾಗಿ ಅವರು ಮುಖ್ಯಮಂತ್ರಿಯಾಗಲಿ' ಎಂದು ವೇದಿಕೆಯಿಂದಲೇ ವಿಜಯೇಂದ್ರ ಪರ ಬ್ಯಾಟಿಂಗ್ ಮಾಡಿದರು.
ಇದನ್ನೂ ಓದಿ: ಕೇಂದ್ರದ ಬೆಲೆ ಏರಿಕೆ ವಿರುದ್ಧ ಮೇ 2ಕ್ಕೆ ಬೃಹತ್ ಪ್ರತಿಭಟನೆ: ಸಲೀಂ ಅಹ್ಮದ್
ಬೆಲೆ ಇಳಿಸದಿದ್ರೆ ಬಾರುಕೋಲು ಚಳವಳಿ ಮುಂದುವರಿಯುತ್ತೆ:
ಅಗತ್ಯ ವಸ್ತುಗಳ ಬೆಲೆ ಇಳಿಯುವವರೆಗೂ, ಈ ಸರ್ಕಾರದ ವಿರುದ್ಧ ನಮ್ಮ ಬಾರುಕೋಲು ಚಳುವಳಿ, ಪೊರಕೆ ಸೇವೆ ಮುಂದುವರಿಯುತ್ತದೆ, ಎಂದ ರೇಣುಕಾಚಾರ್ಯ ಅವರು ನಾವು ಮುನ್ನುಗ್ಗುತ್ತೇವೆ, ದಾವಣಗೆರೆ ಜನರು ಹೆಗಲಿಗೆ ಹೆಗಲು ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.