* ಬಿಎಸ್‌ವೈ ರಾಜೀನಾಮೆ ಬೆನ್ನಲ್ಲೇ ಗರಿಗೆದರಿದ ರಾಜಕೀಯ ಚಟುವಟಿಕೆ* ಯಡಿಯೂರಪ್ಪ ರಾಜೀನಾಮೆಗೆ ಅಭಿನಂದನೆ ತಿಳಿಸಿದ ಬಿಜೆಪಿ ಶಾಸಕ * ಪರೋಕ್ಷವಾಗಿ ಸಚಿವ ಸ್ಥಾನದ ಆಕಾಂಕ್ಷಿ ಎಂದು ದಾವಣಗೆರೆ ಉತ್ತರ ಶಾಸಕ* ಬಿಎಸ್‌ವೈಗೆ ಬೆಂಬಲ ಸೂಚಿಸಿದ್ದಕ್ಕೆ ಶಾಮನೂರು ಶಿವಶಂಕ್ರಪ್ಪಗೆ ಟಾಂಗ್ 

ದಾವಣಗೆರೆ, (ಜು.26): ರಾಷ್ಟ್ರೀಯ ‌ನಾಯಕರಿಗೆ ಕೊಟ್ಟ ಮಾತಿನಂತೆ ಬಿಎಸ್‌ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ‌ ನೀಡಿದ್ದಾರೆ. ಅವರ ಶಿಸ್ತಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಮೂಲಕ ಬಿಜೆಪಿ ಶಿಸ್ತಿನ ಪಾರ್ಟಿ ಎಂಬುದನ್ನು ತೋರಿಸಿದ್ದಾರೆ ಎಂದು ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಎ.ರವೀಂದ್ರನಾಥ್‌ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಶಿರಮಗೊಂಡನಹಳ್ಳಿಯಲ್ಲಿ ಇಂದು (ಸೋಮವಾರ) ಮಾತನಾಡಿದ ಅವರು, ಬಿಎಸ್‌ವೈ ಕೆಜೆಪಿ‌ ಕಟ್ಟಿದಾಗಲೂ ಲಿಂಗಾಯತರು ಬಿಜೆಪಿ‌ಗೆ ಬೆಂಬಲಿಸಿದ್ದರು. ಈಗಲೂ‌ ಲಿಂಗಾಯತರೂ ಬಿಜೆಪಿ ಜತೆಗಿದ್ದಾರೆ. ಇದರಿಂದ ಬಿಜೆಪಿ ಸಂಘಟನೆಗೆ ಯಾವುದೇ ಸಮಸ್ಯೆ ‌ಆಗಲ್ಲ ಎಂದರು.

ಯಡಿಯೂರಪ್ಪನವರ ಕಣ್ಣೀರಿನಲ್ಲಿ ಬಿಜೆಪಿ ತೇಲಿ ಹೋಗಲಿದೆ: ಸ್ವಾಮೀಜಿ ಭವಿಷ್ಯ

ಹೊಸ ಸಿಎಂ ಯಾರೇ ಅದ್ರೂ ಬೆಂಬಲ ನೀಡುತ್ತೇವೆ. 2 ವರ್ಷ ಸಿಎಂ ಆಗಿರುತ್ತೇನೆ‌ ಎಂದು ವರಿಷ್ಠರ ಬಳಿ ಮೊದಲೇ ಬಿಎಸ್‌ವೈ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಅಂದ್ರೆ ಲಿಂಗಾಯತರ ಪಾರ್ಟಿ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಎಂದರು.

ರಾಜ್ಯದಲ್ಲಿ 5 ಜನ‌ ಸೀನಿಯರ್‌ಗಳಿದ್ದಾರೆ, ಪ್ರಹ್ಲಾದ್ ಜೋಷಿ, ಮುರುಗೇಶ್‌ ನಿರಾಣಿ, ಸಂತೋಷ್‌ ಜಿ, ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ ಸಿಎಂ‌ ರೇಸ್‌ನಲ್ಲಿದ್ದಾರೆ. ಇವರಲ್ಲಿ ಅಥವಾ ಇವರನ್ನು ಬಿಟ್ಟು ಬೇರೆಯವರೂ ಸಿಎಂ ಆಗಬಹುದು. ನಾನು 5 ಬಾರಿ ಸೋತು, 5 ಬಾರಿ ಗೆದ್ದಿದ್ದೇನೆ. ನಮಗೂ‌ ಸಿನಿಯಾರಿಟಿ‌ ಇದೆ. ಸಚಿವ ಸ್ಥಾನ‌ ನಿಭಾಯಿಸುವ ಶಕ್ತಿ ಇದೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ದನಾಗಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನ ಆಕಾಂಕ್ಷಿ ಎಂದು ಹೇಳಿದರು.

ಬಿಎಸ್‌ವೈ ಬೆಂಬಲಿಸಿದ ಅಖಿಲ ಭಾರತ ವೀರಶೈವ ಮಹಾ ಸಭಾ ಹಾಗೂ ನೂರಾರು ಸ್ವಾಮೀಜಿಗಳಿಗೆ ಅಪಮಾನ ಮಾಡಿದಂತೆ ಆಗಲ್ವಾ? ಹಣ ಇದ್ದವರು ಅಧಿಕಾರದಲ್ಲಿ‌ ಇದ್ದವರನ್ನು ಬೆಂಬಲಿಸುತ್ತಾರೆ. ಹೊಸ ಸಿಎಂ ಬಂದರೆ ಅವರಿಗೂ‌ ಹಾರ ಹಾಕಿ‌ ಸ್ವಾಗತಿಸುತ್ತಾರೆ ಎಂದು ಪರೋಕ್ಷವಾಗಿ ಶಾಸಕ ಶಾಮನೂರು ಶಿವಶಂಕ್ರಪ್ಪಗೆ ಟಾಂಗ್ ಕೊಟ್ಟರು.