Asianet Suvarna News Asianet Suvarna News

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಂಚ ಗ್ಯಾರಂಟಿ ಜಾರಿ: ಸಂಸದ ಡಿ.ಕೆ.ಸುರೇಶ್

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗುತ್ತಿದ್ದ 40% ಕಮಿಷನ್ ಹಾಗೂ ಮತ್ತಿತರ ಭ್ರಷ್ಚಾಚಾರಕ್ಕೆ ಕಡಿವಾಣ ಹಾಕಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

Curb corruption and implement five guarantees Says MP DK Suresh gvd
Author
First Published Nov 30, 2023, 12:22 PM IST

ಚನ್ನಪಟ್ಟಣ (ನ.29): ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗುತ್ತಿದ್ದ 40% ಕಮಿಷನ್ ಹಾಗೂ ಮತ್ತಿತರ ಭ್ರಷ್ಚಾಚಾರಕ್ಕೆ ಕಡಿವಾಣ ಹಾಕಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ತಾಲೂಕಿನ ಅಕ್ಕೂರು ಗ್ರಾಮದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯವನ್ನು ಲೂಟಿ ಮಾಡಲಾಗಿತ್ತು. ಅವರು ನಡೆಸುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಅದೇ ಹಣದಿಂದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

ವಿರೋಧ ಪಕ್ಷಗಳು ಏನೇ ಟೀಕಿಸಿದರೂ ಅವರ ಟೀಕೆಗಳ ನಡುವೆಯೂ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಚುನಾವಣೆಗೂ ಮುನ್ನಾ ಘೋಷಿಸಿದ್ದ ಪಂಚ ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಉಳಿದಿರುವ ಯುವನಿಧಿ ಗ್ಯಾರಂಟಿಯನ್ನು ಜನವರಿಯಿಂದ ಜಾರಿಗೆ ತರಲು ಸಿದ್ಧತೆ ನಡೆಸಿದೆ ಎಂದು ತಿಳಿಸಿದರು.

ಪುಲ್ವಾಮಾ ದಾಳಿಯಾಗದಿದ್ದರೆ ಮೋದಿ ಗೆಲ್ಲುತ್ತಿರಲಿಲ್ಲ: ಶಾಸಕ ಬಾಲಕೃಷ್ಣ ಕೀಳು ಹೇಳಿಕೆ

ಸುಳ್ಳು ಭರವಸೆ ನೀಡಲಿಲ್ಲ: ನಾವು ಬಿಜೆಪಿಯವರಂತೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುತ್ತೇವೆ ಎಂದು ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬರಲಿಲ್ಲ. ಅದೇ ರೀತಿ ಇನ್ನೊಂದು ಪಕ್ಷದಂತೆ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿ ಅದನ್ನು ಮರೆಯಲಿಲ್ಲ. ಅಧಿಕಾರಕ್ಕೆ ಬಂದ ಮೇಲೆ ನಮ್ಮ ಆಶ್ವಾಸನೆಯಂತೆ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದೇವೆ ಎಂದು ತಿಳಿಸಿದರು. ರಾಜ್ಯದ 1.11 ಕೋಟಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆ ಲಾಭ ಪಡೆದುಕೊಂಡಿದ್ದಾರೆ. 1.60 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಪಡೆದುಕೊಂಡಿವೆ. 100 ಕೋಟಿ ಮಹಿಳೆಯರು ಶಕ್ತಿ ಯೋಜನೆ ಲಾಭ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ತಪ್ಪು ದಾಖಲೆಗಳಿಂದ ಸಮಸ್ಯೆ: ಕೆಲವರ ಬ್ಯಾಂಕ್ ಖಾತೆ, ಆಧಾರ್ ಮಾಹಿತಿ ಮತ್ತಿತರ ಕಾರಣಗಳಿಂದ ಅವರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ತಲುಲಿಲ್ಲ. ತಪ್ಪು ಮಾಹಿತಿಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಮ್ಮ ಎಲ್ಲ ಯೋಜನೆಗಳು ರಾಜ್ಯದ ಎಲ್ಲ ಜನರಿಗೂ ಸರಿಯಾಗಿ ತಲುಪಿಸಬೇಕು ಎಂಬುದು ನಮ್ಮ ಬದ್ಧತೆಯಾಗಿದೆ. ಆದರೆ, ಟಿ.ವಿ.ಗಳಲ್ಲಿ ಕುಳಿತು ಮಾತನಾಡುವ ವಿರೋಧ ಪಕ್ಷದ ನಾಯಕರಿಗೆ ಈ ಭಾವನೆ ಇಲ್ಲ ಎಂದು ಟೀಕಿಸಿದರು. ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ರೈತರ ಪಂಪ್‌ಸೆಟ್‌ಗಳಿಗೆ ಎಚ್‌ವಿಡಿಎಸ್ ಯೋಜನೆ ಜಾರಿಗೆ ತರಲು ಶ್ರಮಿಸಿದರು. ಜಿಲ್ಲೆಯ ಜನರಿಗೆ ಕೊಡುಗೆ ನೀಡಬೇಕು ಎಂದು ನಾವು ಶ್ರಮಿಸಿದ್ದೇವೆ. ನಾನು ಹೋದ ಕಡೆಯಲ್ಲೆಲ್ಲಾ ರೈತರು ಟ್ರಾನ್ಸ್‌ಫಾರ್ಮರ್‌ಗಾಗಿ ಬೇಡಿಕೆ ಇಡುತ್ತಿದ್ದಾರೆ. ಬಿಜೆಪಿ ಸರ್ಕಾರದವರು ಹಣ ಕಟ್ಟಿಸಿಕೊಂಡು ಟ್ರಾನ್ಸ್‌ಫಾರ್ಮರ್ ನೀಡಲಿಲ್ಲ. ಆದರೆ, ನಾವು ರೈತರಿಗೆ ಉಚಿತವಾಗಿ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಡುತ್ತೇವೆ ಎಂದು ತಿಳಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಯೋಜನೆ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಹಾಕಿಕೊಂಡಿದ್ದೇವೆ. ರೈತರ ಜಮೀನು ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಂಡಿದ್ದೇವೆ. ದಾಖಲೆ ಹಾಗೂ ಕಂದಾಯ ಗ್ರಾಮಗಳನ್ನು ಬಿಟ್ಟು ಉಪಗ್ರಾಮಗಳನ್ನು ಘೋಷಿಸಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಇ-ಸ್ವತ್ತು ಕೊಡಲು ಯೋಜನೆ ರೂಪಿಸಲಾಗಿದೆ. ಯೋಜನೆಯನ್ನು ಕಾರ್ಯಗತಗೊಳಿಸಲು ಅಧಿಕಾರಿಗಳಿಗೆ ನ.30ವರೆಗೆ ಗಡವು ನೀಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ರಾಜ್ಯ ಕುಕ್ಕೂಟ ಮಹಾಮಂಡಳದ ಅಧ್ಯಕ್ಷ ಡಿ.ಕೆ.ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಶೃತಿ, ಮುಖಂಡರಾದ ವೀರೇಗೌಡ, ಅಪ್ಪಾಜಿ ಇಒ ಶಿವಕುಮಾರ್ ಇತರರು ಉಪಸ್ಥಿತರಿದ್ದರು.

ನಿಮ್ಮ ಜೊತೆ ನಾನಿರುತ್ತೇನೆ: ದಾಸರಹಳ್ಳಿ ಕ್ಷೇತ್ರದ ಮುಖಂಡರಿಗೆ ಎಚ್‌ಡಿಕೆ ಧೈರ್ಯ

ಸತ್ತೆಗಾಲ ಯೋಜನೆ ನಮ್ಮ ಪ್ರಯತ್ನ: ಡಿ.ಕೆ.ಶಿವಕುಮಾರ್ ಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದಾಗ ಸತ್ತೆಗಾಲದಿಂದ ನೀರು ತರುವಂತಹ ಪ್ರಯತ್ನ ಮಾಡಿದರು. ನೀವು ಮುಖ್ಯಮಂತ್ರಿ ಆಗಿದ್ದ ಕಾರಣಕ್ಕೆ ಅದಕ್ಕೆ ಅನುಮೋದನೆ ನೀಡಿದಿರಿ. ನೀವು ಸಿಎಂ ಆಗಿದ್ದಾಗ ಆ ಒಂದು ಯೋಜನೆ ಬಿಟ್ಟು ಬೇರೆ ಯೋಜನೆ ಜಾರಿಗೆ ಬರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಸಂಸದ ಡಿ.ಕೆ.ಸುರೇಶ್ ಪರೋಕ್ಷ ವಾಗ್ದಾಳಿ ನಡೆಸಿದರು. ಸತ್ತೆಗಾಲ ಯೋಜನೆ ನಾನು ಮತ್ತು ಡಿ.ಕೆ.ಶಿವಕುಮಾರ್ ಕೂಡಿ ಮಾಡಿದ ಕಾರ್ಯಕ್ರಮ. ನೀವು ಮುಖ್ಯಮಂತ್ರಿಯಾಗಿದ್ದ ಕಾರಣಕ್ಕೆ ಬೋರ್ಡ್‌ನಲ್ಲಿ ಅದಕ್ಕೆ ಅನುಮೋದನೆ ನೀಡಿದಿರಿ. ಅದನ್ನು ನಾನು ಇಲ್ಲ ಅನುವುದಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ನೀವು ಯಾವ ಯೋಜನೆಗಳನ್ನು ಜಾರಿಗೆ ತಂದಿರಿ ತಿಳಿಸಿ ಎಂದು ಪ್ರಶ್ನಿಸಿದರು.

Follow Us:
Download App:
  • android
  • ios