ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ತೋರಿದ್ದಾರೆ ಎಂಬ ಅರ್ಥದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ನೀಡಿದ ಹೇಳಿಕೆಯು ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು.

ವಿಧಾನಸಭೆ (ಡಿ.23): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ತೋರಿದ್ದಾರೆ ಎಂಬ ಅರ್ಥದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ನೀಡಿದ ಹೇಳಿಕೆಯು ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಿ.ಟಿ.ರವಿ ಅವರು, ಭಯೋತ್ಪಾದಕರ ಬಗ್ಗೆ ಸಹಾನುಭೂತಿ ತೋರುತ್ತಿರುವ ಬಗ್ಗೆ ಚರ್ಚಿಸಲು ಅವಕಾಶ ಕೋರಿದರು. ಈ ವೇಳೆ ಸದನದ ಹಿರಿಯ ಸದಸ್ಯರು ಹಾಗೂ ಪಕ್ಷದ ಅಧ್ಯಕ್ಷರೊಬ್ಬರು ಬಾಂಬ್‌ ಸ್ಫೋಟಕ್ಕೆ ಮುಂದಾಗಿದ್ದ ಭಯೋತ್ಪಾದಕನ ಪರ ಸಹಾನುಭೂತಿಯಿಂದ ಮಾತನಾಡಿದ್ದಾರೆ ಎಂದು ಆರೋಪಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನು ತೀವ್ರವಾಗಿ ಆಕ್ಷೇಪಿಸಿದ ಕಾಂಗ್ರೆಸ್‌ನ ಯು.ಟಿ.ಖಾದರ್‌, ಸದನದಲ್ಲಿ ಹಾಜರಿರದ ಸದಸ್ಯರೊಬ್ಬರ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪ ಮಾಡುತ್ತಿರುವ ಸಿ.ಟಿ.ರವಿ ಅವರ ಧೋರಣೆ ದುರುದ್ದೇಶದಿಂದ ಕೂಡಿದೆ. ರಾಜಕೀಯ ಉದ್ದೇಶದ ಇಂತಹ ಚರ್ಚೆ ಸರಿಯಲ್ಲ ಎಂದು ಟೀಕಿಸಿದರು. ಇದಕ್ಕೆ ಕಾಂಗ್ರೆಸ್‌ನ ಬಹುತೇಕ ಸದಸ್ಯರು ಬೆಂಬಲಿಸಿದರೆ, ಆಡಳಿತ ಪಕ್ಷದ ಸದಸ್ಯರು ಆಕ್ಷೇಸಿದ್ದರಿಂದ ಗದ್ದಲ ಉಂಟಾಯಿತು. ಮಧ್ಯಪ್ರವೇಶ ಮಾಡಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಕುರಿತು ಸೋಮವಾರದ ಬಳಿಕ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

ಸಿಬಿಐನವರು ಏನ್‌ ಮಾಡ್ತಾರೋ ಮಾಡ್ಲಿ: ಡಿ.ಕೆ.ಶಿವಕುಮಾರ್‌

ವಿಷಯ ಪ್ರಸ್ತಾಪಿಸಿದ ಸಿ.ಟಿ.ರವಿ, ದೇಶವು ದಶಕಗಳ ಕಾಲ ಭಯೋತ್ಪಾದನೆ ಕಪಿಮುಷ್ಠಿಯಲ್ಲಿ ನಲುಗಿದೆ. ಇಸ್ಲಾಂ ಮೂಲಭೂತವಾದಿ ಭಯೋತ್ಪಾದಕರು, ಎಡಪಂಥೀಯ ಬೆಂಬಲಿತ ನಕ್ಸಲರಿಂದಾಗಿ ನಾವು ಸಾಕಷ್ಟುಕಳೆದುಕೊಂಡಿದ್ದೇವೆ. ಪ್ರಧಾನ ಮಂತ್ರಿಯೊಬ್ಬರನ್ನು, ಮಾಜಿ ಪ್ರಧಾನಮಂತ್ರಿಯೊಬ್ಬರನ್ನು ಕಳೆದುಕೊಂಡಿದ್ದೇವೆ. ಭಯೋತ್ಪಾದಕ ಕೃತ್ಯದಿಂದ ಸಾವಿರಾರು ಮಂದಿಯ ಜೀವ ಕಳೆದುಕೊಂಡಿದ್ದಾರೆ. ಹೀಗಿದ್ದೂ ರಾಜ್ಯದಲ್ಲಿ ನಡೆದ ಬಾಂಬ್‌ ಸ್ಫೋಟದ ಸದನದ ಹಿರಿಯ ಸದಸ್ಯರು ಹಾಗೂ ಒಂದು ಪಕ್ಷದ ಅಧ್ಯಕ್ಷರು ಸದರಿ ಭಯೋತ್ಪಾದಕನ ಬಗ್ಗೆ ಸಹಾನುಭೂತಿ ಮಾತನಾಡಿರುವುದು ಅಕ್ಷಮ್ಯ ಎಂದು ಹೇಳಿದರು.

ಬೆಂಬಲಿಸಿ ಮಾತನಾಡಿದ ಆರಗ ಜ್ಞಾನೇಂದ್ರ, ಆಟೋದಲ್ಲಿ ಸ್ಫೋಟವಾದಾಗ ಅದರೊಂದಿಗೆ ಇದ್ದ ವ್ಯಕ್ತಿ ಈ ಹಿಂದೆಯೂ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದ. ಈ ಬಗ್ಗೆ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳಿವೆ. ಹೀಗಿದ್ದೂ ಆತನನ್ನು ಭಯೋತ್ಪಾದಕ ಎನ್ನಲು ಡಿಜಿಪಿ ಯಾರು? ಯಾವ ಆಧಾರದ ಮೇಲೆ ಭಯೋತ್ಪಾದಕ ಎನ್ನುತ್ತಾರೆ ಎಂದು ಅವರು (ಡಿ.ಕೆ. ಶಿವಕುಮಾರ್‌) ಕೇಳುತ್ತಾರೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದರು. ಈ ವೇಳೆ ಸ್ಪೀಕರ್‌, ಸೋಮವಾರ ಚರ್ಚೆಗೆ ಅವಕಾಶ ನೀಡುವುದಾಗಿ ಚರ್ಚೆಗೆ ತೆರೆ ಎಳೆದರು.

Bus Yatra: ಜ.11ಕ್ಕೆ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಬಸ್‌ ಯಾತ್ರೆ

ಆಕ್ಷೇಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪರೋಕ್ಷವಾಗಿ ನಮ್ಮ ಅಧ್ಯಕ್ಷರ ಹೇಳಿಕೆಯೊಂದನ್ನು ಅದೂ ಅವರು ಸದನದಲ್ಲಿ ಇಲ್ಲದ ವೇಳೆ ಪ್ರಸ್ತಾಪಿಸುವುದು ಸರಿಯಲ್ಲ. ನನಗೆ ತಿಳಿದಂತೆ ಅಧ್ಯಕ್ಷರು ಸಹಾನುಭೂತಿ ತೋರುವ ಮಾತು ಆಡಿಲ್ಲ. ನಾವೆಲ್ಲರೂ ಭಯೋತ್ಪಾದಕರ ವಿರುದ್ಧವಿದ್ದು, ಭಯೋತ್ಪಾದಕರನ್ನು ನೇಣುಗಂಬಕ್ಕೆ ಏರಿಸಬೇಕು ಎಂದರು. ಇದಕ್ಕೆ ಸಿ.ಟಿ. ರವಿ, ಅವರ ಹೇಳಿಕೆಯ ಪತ್ರಿಕಾ ವರದಿ, ಪೆನ್‌ಡ್ರೈವ್‌ ಕೊಡುತ್ತೇನೆ. ಇದನ್ನು ನೋಡಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ನ್ಯಾಯಾಧೀಶರಾಗಿ ತೀರ್ಪು ನೀಡಲಿ ಎಂದು ಹೇಳಿದರು.