Asianet Suvarna News Asianet Suvarna News

ಸಿಬಿಐನವರು ಏನ್‌ ಮಾಡ್ತಾರೋ ಮಾಡ್ಲಿ: ಡಿ.ಕೆ.ಶಿವಕುಮಾರ್‌

ಸಿಬಿಐ ಅಧಿಕಾರಿಗಳು ಬೆಂಗಳೂರಿನ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸಿಬ್ಬಂದಿ, ಟ್ರಸ್ಟಿಗಳನ್ನು ವಿಚಾರಣೆ ಮಾಡಿದ್ದಾರೆ. ಆದರೆ, ಅವರು ಯಾವ ಮಾಹಿತಿ ಪಡೆದಿದ್ದಾರೆ ಎಂಬುದು ಗೊತ್ತಿಲ್ಲ. ಸರ್ಕಾರ ಅವರಿಗೆ ತನಿಖೆ ಮಾಡುವ ಅಧಿಕಾರ ಕೊಟ್ಟಿದ್ದು, ಅವರು ಏನು ಮಾಡುತ್ತಾರೋ ಮಾಡಲಿ. 

KPCC President DK Shivakumar Talks Over CBI At Belagavi gvd
Author
First Published Dec 20, 2022, 3:20 AM IST

ಬೆಳಗಾವಿ (ಡಿ.20): ಸಿಬಿಐ ಅಧಿಕಾರಿಗಳು ಬೆಂಗಳೂರಿನ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸಿಬ್ಬಂದಿ, ಟ್ರಸ್ಟಿಗಳನ್ನು ವಿಚಾರಣೆ ಮಾಡಿದ್ದಾರೆ. ಆದರೆ, ಅವರು ಯಾವ ಮಾಹಿತಿ ಪಡೆದಿದ್ದಾರೆ ಎಂಬುದು ಗೊತ್ತಿಲ್ಲ. ಸರ್ಕಾರ ಅವರಿಗೆ ತನಿಖೆ ಮಾಡುವ ಅಧಿಕಾರ ಕೊಟ್ಟಿದ್ದು, ಅವರು ಏನು ಮಾಡುತ್ತಾರೋ ಮಾಡಲಿ. ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನನ್ನ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದ್ದರು. ಅವರಿಗೆ ಕಾನೂನಿನಲ್ಲಿ ಏನೆಲ್ಲ ಅವಕಾಶ ಇದೆಯೋ ಅದನ್ನು ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ನಾನು ಕೆಲ ತಿಂಗಳ ಹಿಂದೆಯೇ ಕಾಗದ ಬರೆದು ಈ ಪ್ರಕರಣದಲ್ಲಿ ಎಫ್‌ಐಆರ್‌ ಹಾಕಿ 2 ವರ್ಷ ಆಗಿದೆ. ನೀವು ಯಾವುದೇ ತನಿಖೆ ಮಾಡಿಲ್ಲ. ನಿಮಗೆ ಯಾವುದೇ ಸ್ಪಷ್ಟತೆ ಬೇಕಿದ್ದರೂ ಕೇಳಿ, ನಾನು ಸ್ಪಷ್ಟನೆ ನೀಡುತ್ತೇನೆ ಎಂದು ತಿಳಿಸಿದ್ದೆ. ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿದ್ದೆ. ಸರ್ಕಾರ ಸಿಬಿಐಗೆ ನೀಡಿರುವ ಅನುಮತಿ ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದೆ. ಈ ಪ್ರಕರಣವನ್ನು ಸ್ಥಳೀಯ ತನಿಖಾ ಸಂಸ್ಥೆಗಳ ಮೂಲಕವೇ ತನಿಖೆ ಮಾಡಿಸಬಹುದು. ಇದೇನು ವಿಶೇಷ ಪ್ರಕರಣವಲ್ಲ ಎಂಬ ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯವನ್ನು ನಾನು ನ್ಯಾಯಾಲಯಕ್ಕೆ ತಿಳಿಸಿದ್ದೆ. ಆದರೂ ರಾಜಕೀಯ ಒತ್ತಡದಿಂದ ಸಿಬಿಐಗೆ ನೀಡಿದ್ದರು. ಈಗಲೂ ತೊಂದರೆ ನೀಡಬೇಕು ಎಂದು ತೀರ್ಮಾನಿಸಿದ್ದಾರೆ. ಅದರಲ್ಲಿ ಅನುಮಾನವೇ ಇಲ್ಲ ಎಂದು ತಿಳಿಸಿದರು.

ಬಸ್‌ ಯಾತ್ರೆ ವಿಚಾರದಲ್ಲಿ ಪಕ್ಷದ ನಿರ್ಧಾರವೇ ಅಂತಿಮ: ಡಿ.ಕೆ.ಶಿವಕುಮಾರ್‌

ವ್ಯವಹಾರ ಮಾಡಿದವರಿಗೂ ತೊಂದರೆ: ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ಸಮಯಾವಕಾಶ ಕೇಳಿದ್ದೆ. ಆದರೂ ಪಟ್ಟು ಹಿಡಿದು ವಿಚಾರಣೆಗೆ ಕರೆದರು. ನನ್ನ ಜತೆ ವ್ಯವಹಾರ ಮಾಡಿರುವವರಿಗೂ ತೊಂದರೆ ನೀಡುತ್ತಿದ್ದಾರೆ. ಈ ರಾಜ್ಯದಲ್ಲಿ ಯಾವುದೇ ಉದ್ಯಮಿ ಅಥವಾ ರಾಜಕಾರಣಿ ಅವರ ಕೈಗೆ ಸಿಕ್ಕಿಲ್ಲ. ನಾವು ಮಾತ್ರ ಸಿಕ್ಕಿದ್ದೇವೆ. ಏನು ಮಾಡಬೇಕೋ ಅದನ್ನು ಮಾಡಿ, ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಒಂದು ರೌಂಡ್‌ ಕಳುಹಿಸಿದ್ದಾರೆ. ಈಗ ಮತ್ತೊಂದು ಬಾರಿ ಕಳುಹಿಸಲು ಏನೆಲ್ಲ ಮಾಡಬೇಕೋ ಮಾಡುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ. ನಾನು ಯಾರಿಗಾದರೂ ಮೋಸ ಮಾಡಿ, ತೊಂದರೆ ಕೊಟ್ಟಿದ್ದರೆ, ತಪ್ಪು ಮಾಡಿದ್ದರೆ ಯಾವ ಶಿಕ್ಷೆ ಬೇಕಾದರೂ ನೀಡಲಿ. 

ನನ್ನ ಬದುಕು, ವ್ಯವಹಾರ, ಶಿಕ್ಷಣ ಸಂಸ್ಥೆ, ರಾಜಕೀಯ ಬದುಕು ಎಲ್ಲವೂ ಪಾರದರ್ಶಕವಾಗಿದೆ ಎಂದು ತಿಳಿಸಿದರು. ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ. ತನಿಖೆ ನಡೆದಿಲ್ಲ. ಇಂಧನ ಸಚಿವನಾಗಿದ್ದಾಗಲೂ ಒಂದೂ ಅಕ್ರಮ ನಡೆಸಿಲ್ಲ. ಆದರೂ ನನ್ನ ಮೇಲೆ ಅಕ್ರಮ ಆಸ್ತಿ ಸಂಪಾದನೆ ಎಂದು ಹೇಗೆ ಪ್ರಕರಣ ದಾಖಲಿಸಿದ್ದಾರೆ? ಈ ಪ್ರಕರಣವನ್ನು ತನಿಖೆಗೆ ನೀಡಿ 3 ವರ್ಷಗಳಾಗಿವೆ. ಇಷ್ಟೊತ್ತಿಗೆ ಎಲ್ಲ ತನಿಖೆ ಮಾಡಿ, ನಾನು ಏನು ತಪ್ಪು ಮಾಡಿದ್ದೇನೆ ಎಂದು ಹೇಳಬಹುದಿತ್ತಲ್ಲವೇ? ಆದರೆ, ಯಾವುದೂ ಆಗಿಲ್ಲ ಎಂದು ಹೇಳಿದರು. ಸಿಬಿಐ ಸ್ವಾಯತ್ತ ಸಂಸ್ಥೆ, ಅದು ಅದರ ಕೆಲಸ ಮಾಡುತ್ತಿದೆ. 

ಅದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ, ಅವರು ಏನಾದರೂ ಹೇಳಲಿ. ಅವರ ಮಂತ್ರಿಗಳು, ನಾಯಕರ ಮೇಲೂ ಇಂತಹದೇ ಪ್ರಕರಣಗಳಿವೆ. ಅವರ ಪ್ರಕರಣಗಳನ್ನು ಸಿಬಿಐಗೆ ಏಕೆ ನೀಡಿಲ್ಲ? ಸ್ಪೀಕರ್‌ ಅವರ ಕಚೇರಿಗೆ ಪತ್ರ ಬರೆದಿದ್ದಾರೆ. ಮೊನ್ನೆ ಸಂಸದ ಶ್ರೀನಿವಾಸ ಪ್ರಸಾದ್‌ ಹಣದ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಹಿಂದೆಯೂ ಪ್ರತಾಪ ಸಿಂಹ ಭಾಷಣ ಮಾಡುತ್ತ ವಿವಿ ಕುಲಪತಿ ಹುದ್ದೆಗೆ .3-5 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. ಕುಲಪತಿಗಳನ್ನು ನೇಮಕ ಮಾಡುವ ರಾಜ್ಯಪಾಲರ ಕಚೇರಿ ಮೇಲೆ ಸಂಸದರು ಇಂಥ ಆರೋಪ ಮಾಡಿದ್ದಾರೆ. ಆ ವಿಚಾರವನ್ನು ಬೊಮ್ಮಾಯಿ ಅವರು ಸಿಬಿಐ ಅಥವಾ ಇ.ಡಿ. ತನಿಖೆಗೆ ಏಕೆ ನೀಡಿಲ್ಲ? ಸಂಸದ ನೇರವಾಗಿ ಆರೋಪ ಮಾಡಿದ್ದಾರೆ. ಈ ಹಿಂದೆ ವಿಸಿ ಆಗಲು ಪ್ರೊಫೆಸರ್‌ ಒಬ್ಬರು ಹಣ ನೀಡಿ, ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೂ ಯಾಕೆ ತನಿಖೆ ನಡೆದಿಲ್ಲ ಎಂದು ಪ್ರಶ್ನಿಸಿದರು.

ಯಾರೂ ಅಭ್ಯರ್ಥಿ ಘೋಷಣೆ ಮಾಡುವಂತಿಲ್ಲ: ಡಿಕೆಶಿ ಎಚ್ಚರಿಕೆ

ಪದೇ ಪದೆ ದಾಳಿಯಿಂದ ಮನಸ್ಸಿಗೆ ಬಹಳ ನೋವಾಗುತ್ತದೆ. ನನಗಿಂತ ನನ್ನ ಜತೆ ವ್ಯಾಪಾರ, ವ್ಯವಹಾರ ಮಾಡಿದ ಜನರಿಗೆ ತೊಂದರೆ ನೀಡುತ್ತಿರುವುದು ನೋವು ತಂದಿದೆ. ಒಬ್ಬ ವಕೀಲರಿಗೆ .5 ಲಕ್ಷ ಶುಲ್ಕ ನೀಡಿದ್ದೆ. ಅವರಿಗೆ ಸಮನ್ಸ್‌ ನೀಡಿದ್ದಾರೆ. ನಾನು ಪ್ರವಾಸಕ್ಕೆ ನನ್ನ ಸ್ನೇಹಿತನನ್ನು ಅಮೆರಿಕಕ್ಕೆ ಕಳುಹಿಸಿದ್ದೆ. ಆ ಟ್ರಾವೆಲ್‌ ಏಜೆಂಟ್‌ಗೆ ನೋಟಿಸ್‌ ನೀಡಿದ್ದಾರೆ. ಇನ್ನೂ ಎಷ್ಟುಜನಕ್ಕೆ ನೋಟಿಸ್‌ ನೀಡಿದ್ದಾರೆ ಎಂಬುವುದರ ಬಗ್ಗೆ ಪಟ್ಟಿನೀಡಲು ಹೋಗುವುದಿಲ್ಲ.
- ಡಿ.ಕೆ.ಶಿವಕುಮಾರ, ಕೆಪಿಸಿಸಿ ಅಧ್ಯಕ್ಷರು

Follow Us:
Download App:
  • android
  • ios