'ಬಕೆಟ್ ಹಿಡಿಯುವ ರಾಜಕಾರಣಿ ನಾನಲ್ಲ, ರಾಜೀನಾಮೆ ಅಂಗೀಕಾರಕ್ಕೆ ಸಿಎಂಗೆ ಮನವಿ ಮಾಡಿರುವೆ ಎಂದು ಸಚಿವ ಸಿಟಿ ರವಿ ತಿಳಿಸಿದ್ದಾರೆ.

ಚಿಕ್ಕಮಗಳೂರು, (ನ.03): ರಾಜೀನಾಮೆ ಅಂಗೀಕರಿಸುವಂತೆ ಇದೇ 2ರಂದು ಮುಖ್ಯಮಂತ್ರಿಯವರಿಗೆ ಮತ್ತೊಮ್ಮೆ ಮನವಿ ಮಾಡಿದ್ದೇನೆ ಎಂದು ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಸಿಕ್ಕಿರುವುದಕ್ಕೆ ಸಿಟಿ ರವಿ ಅವರು ಈಗಾಗಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ರೆ, ಅದನ್ನು ಇನ್ನೂ ಸಿಎಂ ಬಿಎಎಸ್‌ವೈ ಅಂಗೀಕರಿಸಿಲ್ಲ.

ಇನ್ನು ಈ ಬಗ್ಗೆ ಇಂದು (ಮಂಗಳವಾರ) ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ್ದು, 'ಅಧಿಕಾರಕ್ಕೆ ಅಂಟಿಕೊಳ್ಳುವ ಜಾಯಮಾನ ನನ್ನದಲ್ಲ. ಹೊಗಳಿಕೊಂಡು ಬಕೆಟ್‌ ಹಿಡಿಯುವ ರಾಜಕಾರಣಿಯೂ ಅಲ್ಲ. ರಾಜ್ಯೋತ್ಸವದವರೆಗೂ ಸಚಿವರಾಗಿ ಮುಂದುವರಿಯವಂತೆ ಕೆಲವು ಹಿರಿಯರು ಸಲಹೆ ನೀಡಿದ್ದರು. ಸಚಿವ ಸ್ಥಾನ ಅಧಿಕಾರ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಜವಾಬ್ದಾರಿ, ಈ ಪೈಕಿ ಜವಾಬ್ದಾರಿ ಕೆಲಸ ಮಾಡುವುದಕ್ಕೆ ಉತ್ಸುಕನಾಗಿದ್ದೇನೆ ಎಂದು ಹೇಳಿದರು. 

ಶಿರಾದಲ್ಲಿ ಬಿಜೆಪಿ ಗೆಲುವು ಖಚಿತ: ಮತಗಳ ಅಂತರವನ್ನೂ ಸಹ ಹೇಳಿದ ವಿಜಯೇಂದ್ರ..!

'ಕಾಂಗ್ರೆಸ್‌ನವರು ಇವಿಎಂ ಮೇಲೆ ಆರೋಪ ಶುರು ಮಾಡಿದ್ದಾರೆ ಎಂದರೆ ಸೋಲು ಗ್ಯಾರಂಟಿ ಎಂಬುದು ಅವರಿಗೆ ತೀರ್ಮಾನವಾಗಿದೆ ಎಂದರ್ಥ. ಗೆದ್ದರೆ ಜನಾದೇಶ ಎನ್ನುತ್ತಾರೆ, ಸೋತರೆ ಇವಿಎಂ ದೋಷ ಎನ್ನುತ್ತಾರೆ. ಚುನಾವಣೆಯಲ್ಲಿ ಸೋಲಾದಾಗ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುವುದು. ಕೋರ್ಟ್‌ ತೀರ್ಪು ಬಂದಾಗ ನ್ಯಾಯಾಧೀಶರ ಮೇಲೆ ಅನುಮಾನ ಪಡುವುದು ಕಾಂಗ್ರೆಸ್‌ನ ಕಾಯಿಲೆ ಎಂದು ಕಿಡಿಕಾರಿದರು.

ಕರ್ನಾಟಕ ಬಿಜೆಪಿ ಭದ್ರಕೋಟೆ. ಅಲುಗಾಡಿಸಲು ಪ್ರಯತ್ನಿಸಿದವರೇ ಕುಸಿಯುತ್ತಾರೆ. ಪಕ್ಷದ ಆಂತರಿಕ ವರದಿ ಪ್ರಕಾರ ಶಿರಾ, ಆರ್‌.ಆರ್‌. ನಗರ ಎರಡೂ ಕ್ಷೇತ್ರಗಳಲ್ಲೂ ದೊಡ್ಡ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.