ದ್ವೇಷಕ್ಕಾಗಿ ಕೋವಿಡ್ ತನಿಖೆ: ಮಾಜಿ ಸಚಿವ ಸುಧಾಕರ್
ಲೋಕಾಯುಕ್ತ ತನಿಖೆ ಬಿಟ್ಟು ಅವರಿಗೆ ಬೇಕಾದಂತಹ ನ್ಯಾಯಾಧೀಶರನ್ನು, ಸಮಿತಿಗಳನ್ನು ರಚನೆ ಮಾಡಿರುವುದು ಮತ್ತೊಂದು ದೊಡ್ಡ ತಪ್ಪು. ಹೀಗೆ ಸರ್ಕಾರವು ಹಲವು ತಾಂತ್ರಿಕ ತಪ್ಪುಗಳನ್ನು ಮಾಡಿದೆ. ಸರ್ಕಾರದ ನಡೆಗಳನ್ನು ಗಮನಿಸಿದರೆ ರಾಜಕೀಯ ದ್ವೇಷ ಸಾಧನೆ ಎಂಬುದು ಸ್ಪಷ್ಟವಾಗುತ್ತದೆ: ಬಿಜೆಪಿ ಮುಖಂಡ ಡಾ.ಕೆ.ಸುಧಾಕರ್
ಬೆಂಗಳೂರು(ಆ.29): ರಾಜಕೀಯ ದ್ವೇಷಕ್ಕಾಗಿ ಕಾಂಗ್ರೆಸ್ ಸರ್ಕಾರವು ಕೋವಿಡ್ ವಿಚಾರವಾಗಿ ತನಿಖೆಗೆ ವಿಚಾರಣಾ ಆಯೋಗವನ್ನು ರಚಿಸಿದೆ ಎಂದು ಮಾಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಹಾಗೂ ಬಿಜೆಪಿ ಮುಖಂಡ ಡಾ.ಕೆ.ಸುಧಾಕರ್ ಕಿಡಿಕಾರಿದ್ದಾರೆ.
ಸೋಮವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಕೋವಿಡ್ ಅಕ್ರಮದ ಬಗ್ಗೆ ಉಲ್ಲೇಖವಾಗಿದೆ ಎಂಬುದು ಸರ್ಕಾರದ ಸಮರ್ಥನೆ. ಸಮಿತಿಯ ವರದಿಯನ್ನಾಧರಿಸಿ ಸಮಿತಿ ರಚಿಸಿ ತನಿಖೆಗೆ ನೀಡಲಾಗಿದೆ ಎಂಬುದಾಗಿ ತಿಳಿಸಿದೆ. ಆದರೆ ಸಮಿತಿಯ ವರದಿಯು ವಿಧಾನಸಭೆಯಲ್ಲಿ ಮಂಡನೆಯಾಗಿದೆಯೇ? ಅಲ್ಲಿ ಚರ್ಚೆ ಆಗಿದೆಯೇ? ನಿರ್ಣಯ ಕೈಗೊಳ್ಳಲಾಗಿದೆಯೇ? ಯಾವುದೂ ಇಲ್ಲ. ಹೀಗಾಗಿ ಇದು ಸರ್ಕಾರದ ಕಡೆಯಿಂದ ದೊಡ್ಡ ತಪ್ಪಾಗಿದೆ ಎಂದು ತೀಕ್ಷ್ಣವಾಗಿ ಹೇಳಿದರು.
ದಕ್ಷಿಣ ಕರ್ನಾಟಕದಲ್ಲಿ ಪಕ್ಷ ಕಟ್ಟುತ್ತೇನೆ: ಮಾಜಿ ಸಚಿವ ಸುಧಾಕರ್
ಇನ್ನು, ಲೋಕಾಯುಕ್ತ ತನಿಖೆ ಬಿಟ್ಟು ಅವರಿಗೆ ಬೇಕಾದಂತಹ ನ್ಯಾಯಾಧೀಶರನ್ನು, ಸಮಿತಿಗಳನ್ನು ರಚನೆ ಮಾಡಿರುವುದು ಮತ್ತೊಂದು ದೊಡ್ಡ ತಪ್ಪು. ಹೀಗೆ ಸರ್ಕಾರವು ಹಲವು ತಾಂತ್ರಿಕ ತಪ್ಪುಗಳನ್ನು ಮಾಡಿದೆ. ಸರ್ಕಾರದ ನಡೆಗಳನ್ನು ಗಮನಿಸಿದರೆ ರಾಜಕೀಯ ದ್ವೇಷ ಸಾಧನೆ ಎಂಬುದು ಸ್ಪಷ್ಟವಾಗುತ್ತದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಬೇಕು ಎಂದು ಅಡ್ಡದಾರಿಯಲ್ಲಿ ಸರ್ಕಾರ ಹೋಗುತ್ತಿದೆ. ಸರ್ಕಾರದ ಜೊತೆ ಸಮರಕ್ಕೆ ಸಿದ್ಧನಿದ್ದು, ಯಾರು ಸಫಲರಾಗುತ್ತಾರೆ ನೋಡೋಣ ಎಂದು ವಾಗ್ದಾಳಿ ನಡೆಸಿದರು.
ಈ ನಡುವೆ, ಡಾ.ಸುಧಾಕರ್ ಅವರು ಕಾಂಗ್ರೆಸ್ಗೆ ಸೇರ್ಪಡೆಯಾಗಲು ಲೋಕಸಭೆ ಚುನಾವಣೆಗೆ ಟಿಕೆಟ್ ಕೇಳುತ್ತಿದ್ದಾರಂತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಅಯೋಗ್ಯರ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್ ಸೇರ್ಪಡೆಗೆ ಯಾವುದೇ ಪ್ರಸ್ತಾವನೆ ಇಲ್ಲ. ಅಂತೆ-ಕಂತೆಗೆ ಉತ್ತರ ನೀಡಲ್ಲ ಎಂದರು.