ಸರ್ವಾಧಿಕಾರ ತರಲು ಬಿಜೆಪಿಗೆ ಸಂವಿಧಾನವೇ ಅಡ್ಡಿ: ಖರ್ಗೆ ಕಿಡಿ
ಸಂವಿಧಾನಕ್ಕೆ ತಿದ್ದುಪಡಿ ತರುವುದಕ್ಕೆಂದೇ ಬಿಜೆಪಿಗೆ ದೊಡ್ಡ ಬಹುಮತ ಬೇಕಾಗಿದೆ. ಸಂವಿಧಾನದಲ್ಲಿ ಹೇಳಿರುವ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಗೆ ಬಿಜೆಪಿ ವಿರುದ್ಧವಾಗಿದೆ. ಬಿಜೆಪಿಗರು ಸಂವಿಧಾನವನ್ನು ಯಾವತ್ತೂ ಒಪ್ಪಿಕೊಂಡೇ ಇರಲಿಲ್ಲ. ಅನಂತಕುಮಾರ್ ಆಡಿದ ಮಾತನ್ನು ನಮ್ಮ ಪಕ್ಷದಲ್ಲಿ ಯಾರಾದರೂ ಆಡಿದ್ದರೆ ತಕ್ಷಣ ಅವರನ್ನು ಕಿತ್ತುಹಾಕುತ್ತಿದ್ದೆ. ಬಿಜೆಪಿಗೆ ಧೈರ್ಯವಿದ್ದರೆ ಅದನ್ನೇ ಮಾಡಬೇಕು ಎಂದು ಕಿಡಿಕಾರಿದ ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು(ಮಾ.12): ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಸಂವಿಧಾನ ತಿದ್ದುಪಡಿಗೆ ಅನುಕೂಲವಾಗಲಿದೆ ಎಂಬ ಸಂಸದ ಅನಂತ್ ಕುಮಾರ್ ಹೇಳಿಕೆ ವಿರುದ್ಧ ಕಾಂಗ್ರೆಸ್ನಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೇಶದಲ್ಲಿ ಸರ್ವಾಧಿಕಾರ ತರಲು ಬಿಜೆಪಿಗೆ ಸಂವಿಧಾನ ಅಡ್ಡಿಯಾಗಿದೆ, ಸಂವಿಧಾನದ ಹಕ್ಕುಗಳಿಗೆ ಚ್ಯುತಿ ಬಂದರೆ ದೇಶದಲ್ಲಿ ಕ್ರಾಂತಿಯಾಗಲಿದೆ ಎಂದು ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ. ಜತೆಗೆ, ಸಂವಿಧಾನ ಕುರಿತು ಹೇಳಿಕೆ ನೀಡಿರುವ ಅನಂತ ಕುಮಾರ್ ಹೆಗಡೆ ಅವರನ್ನು ಆದಷ್ಟು ಬೇಗ ಹುಚ್ಚಾಸ್ಪತ್ರೆಗೆ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಸಚಿವರಾದ ಶಿವರಾಜ ತಂಗಡಿ, ಕೆ.ಎನ್.ರಾಜಣ್ಣ, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ, ರಾಮಲಿಂಗಾರೆಡ್ಡಿ ಸೇರಿ ಹಲವು ಮುಖಂಡರು ಅನಂತ್ ಕುಮಾರ್ ಹೇಳಿಕೆ ಕುರಿತು ಆಕ್ರೋಶ ಹೊರಹಾಕಿದ್ದಾರೆ.
ಸಂವಿಧಾನಕ್ಕೆ ತಿದ್ದುಪಡಿ ತರುವುದಕ್ಕೆಂದೇ ಬಿಜೆಪಿಗೆ ದೊಡ್ಡ ಬಹುಮತ ಬೇಕಾಗಿದೆ. ಸಂವಿಧಾನದಲ್ಲಿ ಹೇಳಿರುವ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಗೆ ಬಿಜೆಪಿ ವಿರುದ್ಧವಾಗಿದೆ. ಬಿಜೆಪಿಗರು ಸಂವಿಧಾನವನ್ನು ಯಾವತ್ತೂ ಒಪ್ಪಿಕೊಂಡೇ ಇರಲಿಲ್ಲ. ಅನಂತಕುಮಾರ್ ಆಡಿದ ಮಾತನ್ನು ನಮ್ಮ ಪಕ್ಷದಲ್ಲಿ ಯಾರಾದರೂ ಆಡಿದ್ದರೆ ತಕ್ಷಣ ಅವರನ್ನು ಕಿತ್ತುಹಾಕುತ್ತಿದ್ದೆ. ಬಿಜೆಪಿಗೆ ಧೈರ್ಯವಿದ್ದರೆ ಅದನ್ನೇ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರೆ, ದೇಶದಲ್ಲಿ ಸರ್ವಾಧಿಕಾರ ತರಲು ಹೊರಟಿರುವ ಬಿಜೆಪಿಗೆ ಸಂವಿಧಾನವೇ ಅಡ್ಡಿ. ಅನಂತಕುಮಾರ್ ಹೇಳಿರುವುದು ಬಿಜೆಪಿಯ ಮನ್ ಕಿ ಬಾತ್ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆರೋಪಿಸಿದ್ದಾರೆ.
ಇನ್ನು ಅನಂತ್ ಕುಮಾರ್ ಮನುಷ್ಯನೇ ಅಲ್ಲ. ಸಂವಿಧಾನದ ಹಕ್ಕುಗಳಿಗೆ ಚ್ಯುತಿ ಬಂದರೆ ದೇಶದಲ್ಲಿ ಕ್ರಾಂತಿ ಉಂಟಾಗಲಿದೆ ಎಂದು ಕೆ.ಎನ್.ರಾಜಣ್ಣ ಕಿಡಿಕಾರಿದರೆ, ಅನಂತ್ ಕುಮಾರ್ ಅವರನ್ನು ಆದಷ್ಟು ಬೇಗ ಹುಚ್ಚಾಸ್ಪತ್ರೆಗೆ ಸೇರಿಸಬೇಕೆಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಅನಂತ್ ಕುಮಾರ್ ಹೆಗಡೆ ಪದೇಪದೆ ಸಂವಿಧಾನ ಬದಲಾವಣೆ ಕುರಿತು ಮಾತನಾಡುತ್ತಿದ್ದರೂ ಪ್ರತಿಪಕ್ಷ ನಾಯತ ಆರ್.ಅಶೋಕ್ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಬಿಜೆಪಿ ರಾಜ್ಯ ನಾಯಕರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದನ್ನು ನೋಡಿದರೆ ಬಿಜೆಪಿ ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತದೆಯೇ ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.