ಬೆಂಗಳೂರು, ಕಲಬುರಗಿಯಲ್ಲಿ ಆಯೋಜನೆ, ಅಭಿನಂದನೆ ಸಮಾವೇಶದ ದಿನ ಶೀಘ್ರ ನಿಗದಿ

ಬೆಂಗಳೂರು(ಅ.26): ಎಐಸಿಸಿ ನೂತನ ಅಧ್ಯಕ್ಷರಾಗಿ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಎರಡು ಕಡೆ ಬೃಹತ್‌ ಅಭಿನಂದನಾ ಸಮಾವೇಶ ಹಮ್ಮಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ.

ಬೆಂಗಳೂರು ಮತ್ತು ಕಲಬುರಗಿಯ ಎರಡು ಕಡೆ ಸಮಾವೇಶ ನಡೆಸಲು ನಿರ್ಧರಿಸಲಾಗಿದ್ದು, ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ಅಭಿನಂದನಾ ಸಮಾವೇಶ ಹಾಗೂ ಕಲಬುರಗಿಯಲ್ಲಿ ಖರ್ಗೆ ಅಭಿಮಾನಿಗಳಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಎರಡೂ ಕಾರ್ಯಕ್ರಮಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಯೋಜನೆಯನ್ನು ಕಾಂಗ್ರೆಸ್‌ ನಡೆಸಿದೆ. ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಅವರ ಪದಗ್ರಹಣ ಕಾರ್ಯಕ್ರಮದ ಬಳಿಕ ಶೀಘ್ರದಲ್ಲೇ ಅಭಿನಂದನಾ ಸಮಾವೇಶದ ದಿನಾಂಕ ನಿಗದಿಗೊಳ್ಳುವ ಸಾಧ್ಯತೆ ಇದೆ.

ಇಂದು ಖರ್ಗೆ ಪಟ್ಟಾಭಿಷೇಕ: 24 ವರ್ಷ ಬಳಿಕ ಕಾಂಗ್ರೆಸ್‌ಗೆ ಗಾಂಧಿಯೇತರ ಅಧ್ಯಕ್ಷ

ಖರ್ಗೆ ಅವರು ಕರ್ನಾಟಕದವರಾಗಿರುವುದರಿಂದ ಮುಂದಿನ ವಿಧಾನಸಭೆ ಚುನಾವಣೆ ಗೆಲುವು ಕೂಡ ಬಹುದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಮುಖಂಡರ ನಡುವೆ ಸಮನ್ವಯ ಮೂಡಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ದೊಡ್ಡ ಜವಾಬ್ದಾರಿ ಖರ್ಗೆ ಅವರ ಮೇಲೂ ಇದೆ. ಈ ನಿಟ್ಟಿನಲ್ಲಿ ಅಭಿನಂದನಾ ಸಮಾವೇಶದಲ್ಲಿ ರಾಜ್ಯ ನಾಯಕರ ಒಗ್ಗಟ್ಟು ಪ್ರದರ್ಶನಕ್ಕೂ ಆದ್ಯತೆ ನೀಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.