ಕಾಂಗ್ರೆಸ್ ಶಾಸಕ ಯು.ಟಿ.ಖಾದರ್​ ಅವರು ಪಿಪಿಇ ಕಿಟ್​ ಧರಿಸದೆ ಮೃತ ಕೊವಿಡ್​-19 ಸೋಂಕಿತನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ವಿವಾದ ಸೃಷ್ಟಿಸಿದ್ದಾರೆ. ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಹೀಗೆ ನಿರ್ಲಕ್ಷ್ಯ ಮಾಡುವುದು ತಪ್ಪಲ್ಲವಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರು, (ಜೂನ್.24): ಅಂತ್ಯ ಸಂಸ್ಕಾರದಲ್ಲಿ ಕೆಲಸ ಮಾಡಬೇಕು ಎಂಬ ಭಾವನೆ ಬಂತು. ಹಾಗಾಗಿ ಭಾಗಿಯಾಗಿದ್ದೆ. ಸೋಂಕಿತನ ಮೃತದೇಹದಿಂದ ವೈರಸ್​ ಹರಡೋದಿಲ್ಲ ಎಂದು ಕಾಂಗ್ರೆಸ್ ಶಾಸಕ ಯುಟಿ ಖಾದರ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಪಿಪಿಇ ಕಿಟ್​ ಧರಿಸದೆ ಕಾಂಗ್ರೆಸ್ ಶಾಸಕಯು.ಟಿ.ಖಾದರ್​ ಅವರು ಮೃತ ಕೊವಿಡ್​-19 ಸೋಂಕಿತನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು, ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಅವರು ಇಂದು (ಬುಧವಾರ) ಸುದ್ದಿಗೋಷ್ಠಿ ನಡೆಸಿದ್ದು, ಮೃತದೇಹದಿಂದ ವೈರಸ್ ಹರಡುತ್ತದೆ ಎಂದು ವೈದ್ಯಕೀಯ ಅಧ್ಯಯನ ಹೇಳಿಲ್ಲ. ಹಾಗಾಗಿ ಪಿಪಿಇ ಕಿಟ್​ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರನ್ನು ನಿದ್ರೆ ಮಾಡಿಸಬಹುದು, ಸ್ಮಶಾನ ಮಾಡಿಸಲು ಆಗುವುದಿಲ್ಲ

ಮಕ್ಕಳು ತಂದೆಯ ಶವ ನೋಡೋದಿಕ್ಕೆ ಬರುವುದಿಲ್ಲ. ಜನ ಅಷ್ಟು ಭಯಭೀತರಾಗಿದ್ದಾರೆ. ಧಾರ್ಮಿಕ ವಿಧಿವಿಧಾನ ಮಾಡೋದಕ್ಕೂ ಜನರಿಗೆ ಹೆದರಿಕೆ ಆಗಿದೆ. ಕಾನೂನು ಪ್ರಕಾರ ಪಿಪಿಇ ಕಿಟ್ ಧರಿಸದೆ ಇರುವುದು ತಪ್ಪು. ಆದರೆ ಮೃತದೇಹದಿಂದ ಕರೊನಾ ಹರಡುವುದಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಸಲೆಂದೇ ನಾನು ಪಿಪಿಇ ಕಿಟ್​ ಧರಿಸದೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದೇನೆ ಎಂದರು.