ನಾನು EVMನಿಂದ ಗೆದ್ದಿದ್ದು, ಜನತೆಗೆ ಕಾಂಗ್ರೆಸ್ ಬೇಡವಾಗಿದೆ ಎಂದ ಕರ್ನಾಟಕ ಕೈ ಶಾಸಕ
ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದರಿಂದ ಕೆಲವರು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಇದಕ್ಕೆ ಕಾಂಗ್ರೆಸ್ ನಾಯಕ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.
ಕೋಲಾರ, (ನ.17): ಇವಿಎಂ ಯಂತ್ರದ ಮೂಲಕವೇ ನಾನು ಗೆದ್ದಿದ್ದು, ಬಿಹಾರ ಎಲೆಕ್ಷನ್ ಹಾಗೂ ರಾಜ್ಯ ಉಪಚುನಾವಣೆಯಲ್ಲಿ ಜನರು ಕಾಂಗ್ರೆಸ್ ಬೇಡವೆಂದು ತೀರ್ಪು ನೀಡಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕೋಲಾರದಲ್ಲಿ ಇಂದು (ಮಂಗಳವಾರ) ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇವಿಎಂ ಯಂತ್ರದ ಮೂಲಕವೇ ನಾನು ಗೆದ್ದಿರುವೆ. ಚುನಾವಣೆ ಬಗ್ಗೆ ದುಡುಕಿ ಮಾತನಾಡುವುದು, ಆವೇಶದಿಂದ ಮಾತಾಡುವುದು ಸರಿಯಲ್ಲ ಎಂದು ಸ್ವಪಕ್ಷದ ನಾಯಕರಿಗೆ ಕಿವಿಮಾತು ಹೇಳಿದರು.
ಕಾಂಗ್ರೆಸ್ಸಿಗೆ ಮತ್ತೆ ಇವಿಎಂ ಮೇಲೆ ಡೌಟ್!
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಬ್ಬರೂ ಚೆನ್ನಾಗಿಯೇ ಇದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಯಾರೋ ಇದನ್ನ ಹುಟ್ಟು ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಶಿರಾ ಉಪಚುನಾವಣೆ ಫಲಿತಾಂಶಕ್ಕೂ ಮೊದಲೇ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೇ ಬಿಹಾರದಲ್ಲೂ ಸಹ ಇವಿಎಂ ಆರೋಪ ಮಾಡಲಾಗಿತ್ತು.
ಇದೀಗ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ಮುಜುಗರವಾದಂತಾಗಿದೆ. ಒಂದೇ ಪಕ್ಷದಲ್ಲಿದ್ದರೂ ಎದುರಾಳಿಯಾಗಿರುವ ಟಿ.ಬಿ.ಜಯಚಂದ್ರ ಅವರಿಗೆ ಟಾಂಗ್ ಕೊಡಲು ಈ ಮಾತನ್ನ ಹೇಳಿದ್ರಾ ಎನ್ನುವ ಪ್ರಶ್ನೆಗಳಯ ಸಹ ಉದ್ಭವಿಸಿವೆ.