ಗುಜರಾತ್‌ನಲ್ಲಿ ನಮ್ಮ ನಿರೀಕ್ಷೆಗಿಂತ ಕಡಿಮೆ ಸ್ಥಾನ ಬಂದಿವೆ. ಈ ಕುರಿತು ಪರಾಮರ್ಶೆ ಮಾಡಲಾಗುವುದು ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಕಲಬುರಗಿ (ಡಿ.09): ಗುಜರಾತ್‌ನಲ್ಲಿ ನಮ್ಮ ನಿರೀಕ್ಷೆಗಿಂತ ಕಡಿಮೆ ಸ್ಥಾನ ಬಂದಿವೆ. ಈ ಕುರಿತು ಪರಾಮರ್ಶೆ ಮಾಡಲಾಗುವುದು ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಗುಜರಾತ್‌ನಲ್ಲಿ 80ರಿಂದ 95 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆಯಂತೆ ಗೆಲ್ಲಲು ಆಗಲಿಲ್ಲ. ಅಲ್ಲಿ ‘ಮೂರು ಎಂ’ಗಳು ಅಂದರೆ ಮೋದಿ, ಮನಿ ಹಾಗೂ ಮಸಲ್‌ ಪವರ್‌ಗಳು ಚೆನ್ನಾಗಿ ಕೆಲಸ ಮಾಡಿವೆ. ಅವುಗಳಿಂದಲೇ ಬಿಜೆಪಿ ಗೆಲುವು ಸಾಧಿಸಿದೆ. ಗುಜರಾತ್‌ನಲ್ಲಿ ನಮ್ಮ ಹಲವು ಮುಖಂಡರ ಮೇಲೆ ಹಲ್ಲೆ ಸಹ ನಡೆಸಲಾಗಿದೆ ಎಂದು ಆರೋಪಿಸಿದ ಖರ್ಗೆ, ಬಿಜೆಪಿ ಸಿಬಿಐ, ಐಟಿ ಹಾಗೂ ಇಡಿಗಳ ಬೆಂಬಲ ಪಡೆದುಕೊಂಡಿದೆ ಎಂದರು.

ಗುಜರಾತ್‌ನಲ್ಲಿ ಮೋದಿ ಪ್ರಭಾವವಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡ ಪ್ರಿಯಾಂಕ್‌, ಮೋದಿ ಈ ಸಲದ ಚುನಾವಣೆ ಪ್ರಚಾರವನ್ನು ಕಾರ್ಪೋರೇಷನ್‌ ಚುನಾವಣೆಗಳ ರೀತಿ ನಡೆಸಿದ್ದಾರೆ ಎಂದರು. ಪಕ್ಷದ ಸೋಲಿನ ಕುರಿತಂತೆ ನೂನ್ಯತೆಗಳ ಬಗ್ಗೆ ಚರ್ಚೆ ನಡೆಸಿ ಸರಿಪಡಿಸಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು. ರಾಜ್ಯದಲ್ಲಿ ಮೋದಿ ಪ್ರಭಾವ ಕುರಿತು ಮಾತನಾಡಿದ ಅವರು, ಕರ್ನಾಟಕ ಪ್ರಗತಿಪರ ಚಿಂತನೆಯ ರಾಜ್ಯ ಇಲ್ಲಿ ಅವರ ಆಟ ನಡೆಯುವುದಿಲ್ಲ. ಅದನ್ನು ಅರಿತುಕೊಂಡಿದ್ದರಿಂದಲೇ ಯಡಿಯೂರಪ್ಪನವರನ್ನ ಪಾರ್ಲಿಮೆಂಟರಿ ಬೋರ್ಡ್‌ಗೆ ತರಲಾಗಿದೆ. ಬಿಜೆಪಿಗರ ಜಟ್ಕಾಕಟ್‌ ಹಾಗೂ ಹಲಾಲ್‌ ಕಟ್‌ಗಳಿಗೆ ರಾಜ್ಯದಲ್ಲಿ ಸ್ಪಂದನೆ ಸಿಕ್ಕಿಲ್ಲ ಎಂದರು.

ಕಾಂಗ್ರೆಸ್‌ನಲ್ಲಿ ಸೈದ್ಧಾಂತಿಕ ಬದಲಾವಣೆ ಬೇಕು: ಸತೀಶ್‌ ಜಾರಕಿಹೊಳಿ

ಹಿಮಾಚಲ ಪ್ರದೇಶ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ತವರು ರಾಜ್ಯ. ಅಲ್ಲಿ ಕಾಂಗ್ರೆಸ್‌ ಗೆದ್ದಿದೆ. ಹೀಗಾಗಿ ಬಿಜೆಪಿ ಅಧ್ಯಕ್ಷರ ತವರಲ್ಲೇ ಕಮಲ ಹೀನಾಯ ಸೋತಿದೆ. ಗುಜರಾತ್‌ ಉನಾವಣೆಯ ಪ್ರಭಾವ ಕರ್ನಾಟಕದ ಮೇಲಾಗದು, ಅಲ್ಲಿನ ವಾತಾವರಣವೇ ಬೇರೆ, ಇಲ್ಲಿನದ್ದೇ ಬೇರೆ, ಇನ್ನೂ ಮೋದಿ 227 ವರ್ಷ ಆಳಿ ಬಂದರೂ ಇಂದಿಗೂ ಅವರೇ ಎಲ್ಲಾದಕ್ಕೂ ಅಲ್ಲಿ ಹೋಗುವಂತಾಗಿದೆ. ಅನ್ಯರು ಗುಜರಾತನಲ್ಲಿ ನಾಯಕರಂತೆ ಹೊರಹೊಮ್ಮಿಲ್ಲ. ಹೀಗಾಗಿ ಕರುನಾಡು, ಗುಜರಾತ್‌ ಹೋಲಿಸುವ ಹಾಗಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ: ಕಲ್ಯಾಣ ಕರ್ನಾಟಕದ ಎಲ್ಲ 41 ಕ್ಷೇತ್ರಗಳಲ್ಲಿ ಬಿಜೆಪಿ ಧೂಳಿಪಟವಾಗಲಿದ್ದು ರಾಜ್ಯದಲ್ಲಿ ಈ ಸಲ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು. ಕಲಬುರಗಿಯ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರ ಸಂಕಟ ಹೇಳದಾಗಿದೆ. ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ನಮ್ಮ ಅಧಿಕಾರಾವಧಿಯಲ್ಲಿ ಆರ್ಟಿಕಲ್‌ 371 (ಜೆ) ಅಡಿಯಲ್ಲಿ ಹಲವಾರು ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಂಡಿದ್ದೆವು. 

ಆದರೆ ಬಿಜೆಪಿ ಸರ್ಕಾರ ನೇಮಕಾತಿ ಮಾಡಿಕೊಳ್ಳದೆ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವೆಸಗಿದೆ. ಈ ಎಲ್ಲ ಅಂಶಗಳ ಕುರಿತು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲು ಕಲ್ಯಾಣ ಕರ್ನಾಟಕ ಕ್ರಾಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ ಖಂಡ್ರೆ ಅವರು ಹಿಮಾಚಲದಲ್ಲಿ ಜನರು ಕಾಂಗ್ರೆಸ್‌ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಅಲ್ಲಿ ಮೋದಿಯ ಮ್ಯಾಜಿಕ್‌ ಕೆಲಸ ಮಾಡಿಲ್ಲ. ಆದರೆ ಗುಜರಾತ್‌ ನಲ್ಲಿ ಅಭ್ಯರ್ಥಿ ಗಳಿಗೆ ಹೆದರಿಸಿ ಬೆದರಿಸಿ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಸೀಟುಗಳನ್ನು ಬಿಜೆಪಿ ಗೆದ್ದಿದೆ. 

ಹೈಕಮಾಂಡ್‌ ಹೇಳಿದರೆ ವರುಣದಿಂದಲೇ ಸ್ಪರ್ಧೆ: ಸಿದ್ದರಾಮಯ್ಯ

ಆದರೆ ಗುಜರಾತ್‌ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. ಹಿಮಾಚಲದಲ್ಲಿ ನೀವು ಗೆದ್ದಿರುವುದರಿಂದ ಈಗ ಇವಿಎಂ ಮಷೀನ್‌ ಮೇಲೆ ನಂಬಿಕೆ ಬಂದಿದೆಯಾ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಶರಣಪ್ರಕಾಶ್‌ ಪಾಟೀಲ ಉತ್ತರಿಸಿ ಕಾಂಗ್ರೆಸ್‌ ಒಂದು ಪಕ್ಷವಾಗಿ ಇವಿಎಂ ಬಗ್ಗೆ ತಕರಾರು ಎತ್ತಿಲ್ಲ ಆದರೆ ನಾಯಕರುಗಳು ವೈಯಕ್ತಿಕವಾಗಿ ಅಪಸ್ವರ ಎತ್ತಿರಬಹುದು. ಎಂದರು. ಹಿಮಾಚಲದಲ್ಲಿ ಬಿಜೆಪಿ ಸೋತಿರುವುದು ಹೇಗೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೇ ಕೇಳಬೇಕು ಯಾಕೆಂದರೆ ಅದು ಅವರ ತವರು ರಾಜ್ಯ ಎಂದು ಕಿಚಾಯಿಸಿದರು.