ಜನಾರ್ದನ ರೆಡ್ಡಿ-ಕೈ ಶಾಸಕ ರಹಸ್ಯ ಭೇಟಿ: ಆಪರೇಷನ್ ಮುನ್ನೆಲೆಗೆ
ಅಧಿಕಾರ ಹಿಡಿಯಲು ಬಿಜೆಪಿ ಮತ್ತೊಮ್ಮೆ ಆಪರೇಷನ್ ಕಮಲದ ಮೊರೆ ಹೋಗಿದ್ಯಾ ಎಂಬ ಪ್ರಶ್ನೆಯನ್ನ ಹುಟ್ಟುಹಾಕಿದೆ. ಇದಕ್ಕೆ ಪೂರಕವೆಂಬಂತೆ ಆಡಿಯೋ ಮಾತ್ರವಲ್ಲದೇ ಬಿಜೆಪಿ ಪಾಳೇಯದ ನಾಯಕ ಹಾಗೂ ಕಾಂಗ್ರೆಸ್ ಅತೃಪ್ತ ಶಾಸಕ ರಹಸ್ಯ ಭೇಟಿ ಮಾಡಿದ್ದು, ಇದು ಅಪರೇಷನ್ ಕಮಲದ ಮುನ್ನೆಲೆಗೆ ಬಂದಂತಾಗಿದೆ.
ಬೆಂಗಳೂರು, [ಡಿ.03]: ರಾಜ್ಯದಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಬಿಜೆಪಿ ಭಾರೀ ಕಸರತ್ತು ನಡೆಸಿದೆ ಆರೋಪ ಪದೇ ಪದೆ ಕೇಳಿ ಬರ್ತಾನೇ ಇದೆ.
ಕಳೆದ 6 ತಿಂಗಳಿನಿಂದ ಅದಕ್ಕೆ ಪ್ರಯತ್ನಿಸುತ್ತಿದೆ ಕೂಡ. ಇದೀಗ, ಇದಕ್ಕೆ ಪುಷ್ಟಿ ನೀಡುವಂತೆ ಶ್ರೀರಾಮುಲು ಅವರ ಆಪ್ತ ಸಹಾಯಕ ಎನ್ನಲಾದ ವ್ಯಕ್ತಿಯೊಬ್ಬರು, ದುಬೈ ಮೂಲದ ಉದ್ಯಮಿಯೊಬ್ಬರ ಜೊತೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿರುವ ಆಡಿಯೋ ಬಹಿರಂಗವಾಗಿದೆ.
ರೆಸಾರ್ಟ್ ನೋಡಿ ಬಂದ ಜಾರಕಿಹೊಳಿ, ದೋಸ್ತಿ ಸರ್ಕಾರ ಪತನಕ್ಕೆ ಕೌಂಟ್ಡೌನ್?
ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದರೆ ಮತ್ತೆ ನಾವೇ ಸಂಪೂರ್ಣ ಚುನಾವಣೆ ವೆಚ್ಚವನ್ನು ಭರಿಸಿ ಶಾಸಕರನ್ನಾಗಿ ಮಾಡುತ್ತೇವೆಂದು ಆಮಿಷವೊಡ್ಡಿರುವ ಬಗ್ಗೆ ಆಪ್ತ ಸಹಾಯಕ ಎನ್ನಲಾಗಿರೋ ವ್ಯಕ್ತಿ ಉದ್ಯಮಿ ಜೊತೆ ಮಾತನಾಡಿದ್ದಾನೆ.
ಜನಾರ್ದನ ರೆಡ್ಡಿ-ಸುಧಾಕರ್ ರಹಸ್ಯ ಭೇಟಿ
ಕೇವಲ ಆಡಿಯೋ ಮಾತ್ರವಲ್ಲದೇ ಮಾಜಿ ಬಿಜೆಪಿ ಸಚಿವ ಜನಾರ್ದನ ಅವರನ್ನ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಕೆ. ಸುಧಾಕರ್ ರಹಸ್ಯವಾಗಿ ಭೇಟಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
ಬೆಂಗಳೂರಿನ ಪೀಣ್ಯ ಬಳಿ ಇರುವ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನಾರ್ದನ ರೆಡ್ಡಿ ಅವರನ್ನ ಇಂದು ಸಂಜೆ [ಸೋಮವಾರ] ಕಾಂಗ್ರೆಸ್ ಶಾಸಕ ಡಾ.ಕೆ. ಸುಧಾಕರ್ ಭೇಟಿ ಮಾಡಿದ್ದು, ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.