Mekedatu Padayatra: ಮೇಕೆದಾಟು ಯಾತ್ರೆ ಸಮಾರೋಪ... ಎರಡು ಬಿಂದಿಗೆ ನೀರಿನ ಕತೆ!
* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಸಮಾರೋಪ
* ಮೇಕೆದಾಟುವಿನಿಂದ ನೀರು ಹೊತ್ತು ತಂದ ಕಾಂಗ್ರೆಸ್ ಮುಖಂಡರು
* ರಾಜ್ಯ ಸರ್ಕಾರದ ಮೇಲೆ ಕಾಂಗ್ರೆಸ್ ನಾಯಕರ ವಾಗ್ದಾಳಿ
ಬೆಂಗಳೂರು(ಮೇ. 03) ಕಾಂಗ್ರೆಸ್ (Congress) ಮೇಕೆದಾಟು ( Mekedatu padayatra) ಪಾದಯಾತ್ರೆ ಸಮಾರೋಪದ ಹಂತಕ್ಕೆ ಬಂದಿದ್ದು ಒಂದಷ್ಟು ಹೈಲೈಟ್ಸ್ ಗಳಿಗೆ ಸಾಕ್ಷಿಯಾಯಿತು. ಮೇಕೆದಾಟುವಿನಿಂದ ಎರಡು ಬಿಂದಿಗೆಗಳಲ್ಲಿ ಕಾವೇರಿ ನೀರು (Water) ಹೊತ್ತು ತಂದ ಕಾಂಗ್ರೆಸ್ ಮುಖಂಡ ಎಸ್ ಎ ಹುಸೇನ್ ಗಮನ ಸೆಳೆದರು. ಪಾದಯಾತ್ರೆ 140 ಕಿ.ಮೀ ವರೆಗೂ ನಡೆದುಕೊಂಡೇ ನೀರು ಹೊತ್ತು ತಂದ ಎಸ್ ಎ ಹುಸೇನ್ ಕಾರ್ಯಕ್ರಮದ ವೇದಿಕೆ ಮುಂಭಾಗ ಬಿಂದಿಗೆ ನೀರಿಟ್ಟು ಪ್ರದರ್ಶನ ಮಾಡಿದರು. ಪ್ರಧಾನಿ ಮೋದಿಗೊಂದು ಬಿಂದಿಗೆ ನೀರು, ಸಿಎಂ ಬೊಮ್ಮಾಯಿಗೊಂದು ಬಿಂದಿಗೆ ನೀರು ಕಳಿಸುವ ಬಗ್ಗೆ ಘೋಷಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ, ಬೆಂಗಳೂರಿಗೆ ಕಾವೇರಿ ನೀರು ತಂದಿದ್ದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ. ಕಾವೇರಿ ಮೊದಲನೇ ಹಂತದಿಂದ 5 ನೇ ಹಂತದ ವರೆಗು ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಬಿಜೆಪಿ (BJP) ಸರ್ಕಾರ ಕೆಲಸ ಮಾಡಿಲ್ಲ.. ಕೆಲಸ ಮಾಡಿರುವ ಕಾಂಗ್ರೆಸ್ ಟೀಕೆ ಮಾಡುತ್ತಾರೆ.
ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದ ಒಂದು ಪರಿಸರ ಕ್ಲಿಯರೆನ್ಸ್ ಪಡೆಯಲು ಈಗಿನ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಡಬಲ್ ಇಂಜಿನ್ ಸರ್ಕಾರ ಅಂತಾರೆ. ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ.. ಡಬ್ಬಾ ಇಂಜಿನ್ ಸರ್ಕಾರ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗಾರೆಡ್ಡಿ (Ramalinga Reddy)ವಾಗ್ದಾಳಿ ಮಾಡಿದರು.
Mekedatu Padayatra: ಜೀವಂತ ಇದ್ದೇವೆಂದು ತೋರಿಸಲು ಕಾಂಗ್ರೆಸ್ ಪಾದಯಾತ್ರೆ: ಸವದಿ ಕಿಡಿ
ನಗಾರಿ ಬಾರಿಸಿದ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಮಾತನಾಡಿದರು. ಪಾದಯಾತ್ರೆ ಯಶಸ್ವಿಯಾಗಿ ನಡೆದಿದೆ. ಈ ಯಶಸ್ಸು ಡಿ.ಕೆ ಶಿವಕುಮಾರ್ ಯಶಸ್ಸಲ್ಲ. ಇದು ಜನರ ಯಶಸ್ಸು. ನೀರಿಗಾಗಿ ನಮಗೆ ಬೆಂಬಲಿಸಿ ಹಲವರು ನಮ್ಮ ಜೊತೆ ನಡೆದಿದ್ದಾರೆ. ಸಂಗಮ, ಮೇಕೆದಾಟುನಿಂದ ಬೆಂಗಳೂರು ವರೆಗೆ ಪಾದಯಾತ್ರೆ ಮಾಡಿದ್ದೇವೆ.
ಈ ಪಾದಯಾತ್ರೆಯನ್ನ ಬುದ್ಧ, ಬಸವ ಹುಟ್ಟಿದ ಘಳಿಗೆಯಲ್ಲಿ ಆರಂಭಿಸಿದ್ದವು.. ಅಂಬೇಡ್ಕರ್ ಸಂವಿಧಾನ ಬರೆದ ಘಳಿಗೆಯಲ್ಲಿ ಆರಂಭಿಸಿದ್ದೇವೆ. ನಮ್ಮ ತಾಯಂದಿಯರು ಕಳಸ ಹೊತ್ತು ನಡೆದಿದ್ದಾರೆ, ಪಾದಯಾತ್ರೆ ಬರುವ ದಾರಿಯಲ್ಲಿ ರಂಗೋಲಿ ಹಾಕಿದ್ದಾರೆ. ಪಾದಯಾತ್ರೆ ಯಶಸ್ಸಿನ ಹಿಂದೆ ಪ್ರತಿಯೊಬ್ಬರ ಶ್ರಮವಿದೆ.. ನಮ್ಮ ನೀರು ನಮ್ಮ ಹಕ್ಕು.. ಈ ಹೋರಾಟ ರಾಜ್ಯಕ್ಕೋಸ್ಕರ ನಡೆಸಿದ್ದು. ರಾಜಕಾರಣ ಮಾಡುವ ಸಂದರ್ಭದಲ್ಲಿ ರಾಜಕಾರಣ ಮಾಡ್ತೇವೆ. ಗಾಂಧಿಜೀ ಅವರು ನಮಗೆ ಅಹಿಂಸಾತ್ಮಕ ಹೋರಾಟ ದಾರಿಯನ್ನ ಹಾಕಿಕೊಟ್ಟಿದ್ದಾರೆ.. ಪಾದಯಾತ್ರೆಗೆ ಅವರೇ ನಮಗೆ ಸ್ಪೂರ್ತಿ. ರಾಜ್ಯದಲ್ಲಿ 26 ಆಣೆಕಟ್ಟುಗಳನ್ನ ಕಾಂಗ್ರೆಸ್ ಸರ್ಕಾರಗಳು ಕಟ್ಟಿವೆ. ಇದು ಪ್ರಾರಂಭ ಅಷ್ಟೇ.. ಇನ್ನೂ ಅಂತ್ಯವಾಗಿಲ್ಲ ಎಂದು ಗುಡುಗಿದರು.
ಉತ್ತರ ಕರ್ನಾಟಕದಲ್ಲಿ, ಕಿತ್ತೂರು, ಕಲ್ಯಾಣ ಕರ್ನಾಟಕದಲ್ಲಿ.. ಮಲೆನಾಡು, ಕರಾವಳಿ ಕರ್ನಾಟಕದಲ್ಲಿ ಇದೇ ರೀತಿಯ ಹೋರಾಟವನ್ನ ಜನರಿಗೋಸ್ಕರ ನಾವು ನಡೆಸ್ತೇವೆ. ಮುಖ್ಯಮಂತ್ರಿಗಳೇ 25 ಬಿಜೆಪಿ ಸಂಸದರಿದ್ದೀರಾ.. ಒಮ್ಮೆ ಪ್ರಧಾನಿ ಅವರ ಬಳಿ ಕರೆದುಕೊಂಡು ಒಂದು ಪರಿಸರ ಇಲಾಖೆ ಕ್ಲಿಯರೆನ್ಸ್ ತೆಗೆದುಕೊಳ್ಳಲು ನಿಮಗೆ ಆಗಲಿಲ್ಲ. ನಮ್ಮ ಪಾದಯಾತ್ರೆಯಲ್ಲಿ ಚಿತ್ರನಟರು ಪಾಲ್ಗೊಂಡಿದ್ದಾರೆ. ಕೆಲವು ಚಿತ್ರನಟರು ಬರ್ತಾರೆ ಅಂದಾಕ್ಷಣ ಸಿಎಂ ಕಚೇರಿಯಿಂದ ಆ ಚಿತ್ರ ನಟರಿಗೆ ಫೋನ್ ಹೋಗುತ್ತೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಡಿ ಅಂತಾ ಸಿಎಂ ಕಚೇರಿಯಿಂದ ಒತ್ತಡ ಹಾಕಿದ್ದಾರೆ. ಮುಖ್ಯಮಂತ್ರಿಗಳೇ.. ನಮಗೆ ಸಮನ್ಸ್ ಕಳಿಸ್ತಿದ್ದೀರಾ. ಎಂದು ಸವಾಲು ಹಾಕಿದರು.
ಪಾದಯಾತ್ರೆ ಮಾಡಿದ್ದಕ್ಕೆ ನಮ್ಮ ಕೇಸ್ ಹಾಕಿದ್ದೀರಾ.. ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿಸಿದ್ದೀರಾ. ಹೋರಾಟ ಮಾಡಿದ್ದೇವೆ.. ನಾವು ಜೈಲಿಗೆ ಹೋಗಲು ಸಿದ್ಧರಿದ್ಧೇವೆ. ನೀರಿಗಾಗಿ ನಮ್ಮ ಹೋರಾಟ ನಡೆದಿದೆ ಎಂದು ಕೆಪಿಸಿ ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಇದು ರಾಜ್ಯಕ್ಕಾಗಿ ಹೋರಾಟ. ರಾಜಕಾರಣಕ್ಕಾಗಿ ಮಾಡಿದ ಹೋರಾಟ ಅಲ್ಲ. ರಾಜಕಾರಣ ಮಾಡಲು ಬೇರೆ ಸಂದರ್ಭ ಬರುತ್ತೆ. ರಾಜಕಾರಣ ಮಾಡುವಾಗ ಮಾಡೋಣ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಎಂಬಿ ಪಾಟೀಲ್ ಸಚಿವರಾಗಿದ್ದಾಗ ಮೇಕೆದಾಟು ಡಿಪಿಆರ್ ಮಾಡಿದ್ವಿ. ಬಳಿಕ ನಾನು ಸಚಿವನಾಗಿದ್ದಾಗ ಡಿಪಿಆರ್ ಪರಿಷ್ಕರಣೆ. ತಮಿಳುನಾಡಿನ ಜಮೀನು ಮುಳುಗಲ್ಲ. ಯೋಜನೆಯಿಂದ ಕನಕಪುರ, ಮಳವಳ್ಳಿ ಜಮೀನು ಮುಳುಗಡೆ ಆಗುತ್ತೆ ಅದು ಅವರಿಗೆ ಗೊತ್ತಿಲ್ಲವೇ ಎಂದರು.
ಕಾರ್ಯಕ್ರಮದಲ್ಲಿ ನಂಜಾವದೂತ ಸ್ವಾಮೀಜಿ ಮಾತನಾಡಿ, ಮೋದಿ ಅವರ ಮೇಲೆ ಅಭಿಮಾನವಿಟ್ಟು ಈ ನಾಡಿನ ಜನ 26 ಸಂಸದರನ್ನ ಗೆಲ್ಲಿಸಿ ಕಳಿಸಿಕೊಟಿದ್ದಾರೆ. ಈ ನಾಡಿನ ನೆಲ ಜಲ, ನೀರಾವರಿ ಯೋಜನೆಗಳ ವಿಚಾರವಾಗಿ ಪ್ರಧಾನಿ ಮೋದಿ ಅವರು ಹೆಚ್ಚಿನ ಗಮನ ಹರಿಸಬೇಕು. ಮೇಕೆದಾಟು, ಕಳಾಸಬಂಡೂರಿ ರಾಜ್ಯದ ಯಾವುದೇ ಯೋಜನೆ ವಿಚಾರದಲ್ಲಿ ನಾಡಿನ ನಾಯಕರು ಒಂದಾಗಬೇಕು. ಒಂದಾಗದಿದ್ರೆ ನಮಗೆ ಸಿಗಬೇಕಾಗಿರುವುದು ಸಿಗಲ್ಲ ಯೋಜನೆ ಬೇಗ ಆಗಲು ಕೇಂದ್ರ ಸಹಕರಿಸಬೇಕು. ಅಂದು ಸಿದ್ದರಾಮಯ್ಯ ಅವ್ರು ಪ್ರತಿಷ್ಠೆ ಮರೆತು ದೇವೇಗೌಡರ ಜತೆ ಸೇರಿ ಕಾವೇರಿ ಸಮಸ್ಯೆ ಬಗೆಹರಿಸಿದರು. ಅದೇ ಬದ್ಧತೆ ಬೊಮ್ಮಾಯಿ ತೋರಿಸಬೇಕಿದೆ. ಸಿದ್ದರಾಮಯ್ಯ, ಎಚ್ಡಿಕೆ, ಡಿಕೆಶಿ ಬೆಂಬಲದಿಂದ ನೀರು ಪಡೆಯುವ ಕೆಲಸ ಮಾಡಬೇಕಿದೆ ಬೊಮ್ಮಾಯಿ. ಡಿ.ಕೆ.ಶಿ ಅವರು ಎಲ್ಲ ಸವಾಲು ಎದುರಿಸಿ ಜೀವಂತವಾಗಿ ಇಲ್ಲಿ ಕೂತಿದ್ರೆ ಅದಕ್ಕೆ ಅವರ ತಂದೆತಾಯಿಗಳ ಆಶೀರ್ವಾದ, ಜನರ ಆಶೀರ್ವಾದ ಕಾರಣ ಎಂದರು.