ಬಿಜೆಪಿಗೆ ವಿನಯ ಕುಲಕರ್ಣಿ ಈಗ ಮತ್ತಷ್ಟು ಹತ್ತಿರ?
ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಶೀಘ್ರವೇ ಬಿಜೆಪಿ ಸೇರಲಿದ್ದಾರೆ. ಇನ್ನಷ್ಟು ಬಿಜೆಪಿ ಪಾಳಯಕ್ಕೆ ಹತ್ತಿರವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಬೆಂಗಳೂರು (ಅ.08): ಕಾಂಗ್ರೆಸ್ಸಿನ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ತಾವು ಬಿಜೆಪಿಗೆ ಹೋಗುವುದಿಲ್ಲ ಎಂಬುದಾಗಿ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರೂ ತೆರೆಮರೆಯಲ್ಲಿ ಬಿಜೆಪಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.
ಕುಲಕರ್ಣಿ ಅವರನ್ನು ಬಿಜೆಪಿಗೆ ಕರೆತರುವುದರಿಂದ ಧಾರವಾಡ ಜಿಲ್ಲೆಯ ಸ್ಥಳೀಯ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಆ ಮುಖಂಡರನ್ನು ಮನವೊಲಿಸುವ ಪ್ರಕ್ರಿಯೆ ಆರಂಭವಾಗಿದೆ. ಇದರ ಹೊಣೆಯನ್ನು ಸ್ಥಳೀಯ ಸಂಸದರೂ ಆಗಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮತ್ತು ರಾಜ್ಯದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಹಾಗೆ ನೋಡಿದರೆ ಪ್ರಹ್ಲಾದ್ ಜೋಶಿ ಮತ್ತು ಶೆಟ್ಟರ್ಗೆ ವಿನಯ್ ಕುಲಕರ್ಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪೂರ್ಣ ಸಹಮತ ಇಲ್ಲದಿದ್ದರೂ ಪಕ್ಷದ ರಾಷ್ಟ್ರೀಯ ನಾಯಕರ ಸಲಹೆ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರನ್ನು ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಬಿಜೆಪಿ ಸೇರಲು ವಿನಯ್ ಕುಲಕರ್ಣಿ ಸರ್ಕಸ್; ಸಿಪಿ ಯೋಗೇಶ್ವರ್ ಸಾಥ್
ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಜೋಶಿ ಎದುರು ಕುಲಕರ್ಣಿ ಸೋತಿದ್ದು ಇಲ್ಲಿ ಗಮನಾರ್ಹ.
ವಿನಯ ಕುಲಕರ್ಣಿ ಅವರು ಮಂಗಳವಾರವಷ್ಟೇ ‘ನಾನು ಬಿಜೆಪಿ ಸೇರಲ್ಲ. ದಿಲ್ಲಿಗೆ ಹೋಗಿ ಯಾರನ್ನೂ ಭೇಟಿಯಾಗಿ ಲಾಬಿ ನಡೆಸಿಲ. ರಾಜಸ್ಥಾನಕ್ಕೆ ಕುದುರೆ ವ್ಯಾಪಾರಕ್ಕೆ ಬಂದಿದ್ದೇನೆ’ ಎಂದಿದ್ದರು.
ಬಿಜೆಪಿ ಮುಖಂಡ ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆ ತೂಗುಕತ್ತಿ ಕುಲಕರ್ಣಿ ಮೇಲೆ ತೂಗುತ್ತಿದ್ದು, ಈ ಹಂತದಲ್ಲೇ ಅವರು ಬಿಜೆಪಿ ಸೇರುವ ಯತ್ನ ನಡೆದಿದೆ ಎಂಬ ಗುಲ್ಲು ಹರಡಿದ್ದು ಧಾರವಾಡ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು.