ಸಿದ್ದರಾಮಯ್ಯನವರ ವಿರುದ್ದ ಪ್ರತಿಭಟಿಸೋರು ಅಂಬೇಡ್ಕರ್ ವಾದಿಗಳಲ್ಲ ಅಂಬೇಡ್ಕರ್ ವಾದಿಗಳಾಗಿದ್ದರೆ ಈ ಹಿಂದೆ ಸಂವಿಧಾನ ಬದಲಿಸುತ್ತೇವೆ, ಸುಡುತ್ತೇವೆ ಅಂದಾಗ ಯಾಕೆ ಪ್ರತಿಭಟಿಸಿಲ್ಲ
ಮಂಗಳೂರು(ಮ.06): ಸಿದ್ದರಾಮಯ್ಯನವರ (Siddaramaiah) ವಿರುದ್ದ ಪ್ರತಿಭಟಿಸೋರು ಅಂಬೇಡ್ಕರ್ (Ambedkar) ವಾದಿಗಳಲ್ಲ, ಗೋಡ್ಸೆ ವಾದಿಗಳು ಎಂದು ಮಾಜಿ ಸಚಿವ ಯು.ಟಿ.ಖಾದರ್ (UT Khader) ಹೇಳಿದರು.
ಮಂಗಳೂರಿನಲ್ಲಿಂದು (Mangaluru) ಮಾತನಾಡಿದ ಖಾದರ್ ಅಂಬೇಡ್ಕರ್ ವಾದಿಗಳಾಗಿದ್ದರೆ ಈ ಹಿಂದೆ ಸಂವಿಧಾನ ಬದಲಿಸುತ್ತೇವೆ, ಸುಡುತ್ತೇವೆ ಅಂದಾಗ ಯಾಕೆ ಪ್ರತಿಭಟಿಸಿಲ್ಲ. ಇವತ್ತು ಪ್ರತಿಭಟಿಸೋರು ಅಂಬೇಡ್ಕರ್ ವಾದಿಗಳಾಗಿದ್ದರೆ ಬಿಜೆಪಿ ಕಚೇರಿಗೆ ಹೋಗಿ ಕೇಳಲಿ. ಬಿಜೆಪಿಯವರಿಗೆ (BJP) ಬೇಕಾಗಿ ಪ್ರತಿಭಟಿಸೋ ಇವರು ಗೋಡ್ಸೆ (Goodse) ವಾದಿಗಳು ಎಂದರು.
ಇಡೀ ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಮಾನ ಅನುದಾನ ಕೊಟ್ಟಿದ್ದು ಕರ್ನಾಟಕ (Karnataka). ಧರಣಿ ಕೂತವರು ನೈಜ ಕಾಳಜಿ ಇದ್ದರೆ ಬಿಜೆಪಿ ದಲಿತ ಪರ ಯೋಜನೆಗಳ ಬಗ್ಗೆ ಕೇಳಿ. ಸುಮ್ಮನೆ ರಾಜಕೀಯ (Politics) ಪ್ರೇರಿತವಾಗಿ ಗೋಡ್ಸೆ ವಾದಿಗಳ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದಲ್ಲಿ ನಡೆದ 2 ಉಪಚುನಾವಣೆಯಲ್ಲಿ (By Election) ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ . ಜನರು ಸರಕಾರದ ವಿರುದ್ಧ ಇದ್ದಾರೆ ಎಂಬುದನ್ನು ಹಾನಗಲ್ ಕ್ಷೇತ್ರದ ಫಲಿತಾಂಶ ಸ್ಪಷ್ಟ ಪಡಿಸಿದೆ ಎಂದರು.
ಉಪ ಚುನಾವಣೆ ಯಲ್ಲಿ (By Election) ಆಡಳಿತ ಪಕ್ಷಕ್ಕೆ ಹೆಚ್ಚಿನ ಅವಕಾಶ ಇರುತ್ತದೆ. ಆದರೆ ಉಪ ಚುನಾಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ (Price ) ಯಿಂದ ಜನರು ಬೇಸತ್ತಿದ್ದಾರೆ. ಜನ ಸಾಮಾನ್ಯರು ಬೆಲೆ ಏರಿಕೆಯಿಂದ ಬೇಸತ್ತಿದ್ದಾರೆ. ಹೋಟೆಲ್ ಗಳಲ್ಲೂ ಆಹಾರ ಮತ್ತು ತಿಂಡಿಗಳ ಬೆಲೆ ಏರಿಕೆ ಆಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾದ ಆರ್ಥಿಕ ನೀತಿ ಇಲ್ಲದಿರುವುದೇ ಇದಕ್ಕೆ ಕಾರಣ. ಜನರು ದಂಗೆ ಏಳುವುದು ತಪ್ಪಿಸಲು ಕೇಂದ್ರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಿದೆ. ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಿದೆ ಖಾದರ್ ವಾಗ್ದಾಳಿ ನಡೆಸಿದರು.
ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ಹೆಸರು: ಮಂಗಳೂರಿನ ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ (Savarkar) ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಯು.ಟಿ.ಖಾದರ್ ಪಾಲಿಕೆ ಅಧಿಕಾರದಲ್ಲಿ ಯಾರಿದ್ದಾರೋ ಅದು ಅವರಿಗೆ ಬಿಟ್ಟ ವಿಚಾರ ಎಂದರು.
ಸಾವರ್ಕರ್ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ, ಜೈಲಿಗೆ ಹೋಗಿಲ್ಲ ಅಂತ ಯಾರೂ ಹೇಳಿಲ್ಲ. ಅವರು ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿದ್ದಾರೆ ಅನ್ನೋದು ಗೊತ್ತಿರುವ ವಿಚಾರ. ಆದರೆ ಜೈಲಿಗೆ ಹೋದ ಬಹಳಷ್ಟು ಜನ ನೇಣಿಗೆ ಕೊರಳೊಡ್ಡಿದ್ದರು, ಹುತಾತ್ಮರಾದರು. ಆದರೆ ಸಾವರ್ಕರ್ ಬ್ರಿಟಿಷರಿಗೆ ಕ್ಷಮೆ ಪತ್ರ ಬರೆದು ದೇಶಕ್ಕೆ ಅವಮಾನ ಮಾಡಿದ್ದಾರೆ. ದೇಶಕ್ಕಾಗಿ ಹೋರಾಡಿದವರನ್ನ ಗೌರವಿಸುವ ಕೆಲಸ ಮಾಡಬೇಕು. ಅದು ಬಿಟ್ಟು ಕ್ಷಮೆ ಪತ್ರ ಬರೆದವರನ್ನ ಗೌರವಿಸಬೇಕಾ ಎನ್ನುವುದು ಈಗಿರುವ ಪ್ರಶ್ನೆ ಎಂದರು.
ಪಾಲಿಕೆ ಆಡಳಿತ ಮತ್ತು ಪ್ರತಿಪಕ್ಷ ಈ ಬಗ್ಗೆ ಚರ್ಚೆ ನಡೆಸಲಿ. ನಮ್ಮ ಒಪ್ಪಿಗೆ ಪ್ರಕಾರ ಅವರೂ ಏನನ್ನೂ ಮಾಡಲ್ಲ. ಯಾವುದು ಬೇಕು ಅಂತ ನಾವು ಕೇಳಿದರೆ ಅದನ್ನ ಅವರು ಮಾಡಲ್ಲ. ಹೀಗಾಗಿ ಹೆಸರಿಡೋ ವಿಚಾರದಲ್ಲಿ ನಾವು ಕೇಳಿ ಏನು ಪ್ರಯೋಜನ ಎಂದರು.
ಸಿದ್ದರಾಮಯ್ಯ ಪರ ಬ್ಯಾಟಿಂಗ್
ಚಾಮರಾಜನಗರ : ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ದಲಿತ ವಿರೋಧಿಯಲ್ಲ ಎಂದು ಬಿಜೆಪಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಗಿದೆ. ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದು, ಟೈರ್ ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ.
ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದು, ಸಿದ್ದರಾಮಯ್ಯ ಹಿಂದುಳಿದ ಸಮುದಾಯದ ದೊಡ್ಡ ನಾಯಕ. ಚುನಾವಣಾ ವೇಳೆ ಕೊಟ್ಟ ಭರವಸೆ ಈಡೇರಿಸಿದ ವ್ಯಕ್ತಿ. ಎಸ್ಸಿ,ಎಸ್ಟಿ ಪಂಗಡಗಳ ಅಭಿವೃದ್ಧಿ ಮಾಡಿದ್ದಾರೆ ಎಂದು ಮಾಜಿ ಸಿಎಂ ಪರ ಮಾಜಿ ಶಾಸಕ ಎ ಆರ್ ಕೃಷ್ಣಮೂರ್ತಿ ಪರ ಬ್ಯಾಟಿಂಗ್ ಮಾಡಿದ್ದಾರೆ.
