ಮಾಜಿ ಶಿಷ್ಯನಿಗೆ ಕೈ ನಾಯಕ ಸಿದ್ದರಾಮಯ್ಯ ಫುಲ್ ತರಾಟೆ
ಸಿದ್ದರಾಮಯ್ಯನವರ ಮಾಜಿ ಅಪ್ಪಟ ಶಿಷ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಸಚಿವ ಸುಧಾಕರ್ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು (ಅ.18): ಬಡವರು, ವಲಸೆ ಕಾರ್ಮಿಕರಿಗೆ ಅನುಕೂಲವಾಗಲಿ ಅಂತ ನಾನು ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ನ್ನು ಬಿಜೆಪಿ ಸರ್ಕಾರ ಮುಚ್ಚಲು ಹೊರಟಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಈ ಬಗ್ಗೆ ಶನಿವಾರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ದುಡ್ಡಿಲ್ಲ, ಕೊರೊನಾ ಇದೆ ಎಂದು ಅಸಹಾಯಕತೆ ತೋರುವ ಬದಲು ಅಧಿಕಾರ ಬಿಟ್ಟು ತೊಲಗಲಿ. ಹಸಿದವರಿಗೆ ಅನ್ನ ಹಾಕಲು ಆಗದ ಸರ್ಕಾರ ಇದ್ದರೆಷ್ಟು? ಹೋದರೆಷ್ಟು? 18 ಕೋಟಿ ರು. ಹಣ ಇಲ್ಲ ಎಂದು ಇಂದಿರಾ ಕ್ಯಾಂಟೀನ್ ಮುಚ್ಚುವುದನ್ನು ಯಾರಾದರೂ ಒಪ್ಪುತ್ತಾರಾ ಎಂದು ಪ್ರಶ್ನಿಸಿದರು.
"
'ರಾಜ್ಯದ 25 ಬಿಜೆಪಿ ಸಂಸದರಿಗೆ ಧಮ್ ಇಲ್ಲ, ಕೇಂದ್ರದ ಮುಂದೆ ಕೈಕಟ್ಟಿ ನಿಲ್ತಾರೆ'
ಸುಧಾಕರ್ ಬಿಜೆಪಿ ಸಭೆಗಳನ್ನೂ ನೋಡಲಿ: ಕೊರೋನಾ ನಿಯಮ ಪಾಲಿಸಿಲ್ಲ ಎಂದು ಕಾಂಗ್ರೆಸ್ ಮೇಲೆ ದೂರುವ ಆರೋಗ್ಯ ಸಚಿವ ಸುಧಾಕರ್ ಆಗಾಗ ತಮ್ಮ ಪಕ್ಷದ ಸಭೆ ಹಾಗೂ ಸಮಾರಂಭಗಳನ್ನೂ ಗಮನಿಸಬೇಕು. ಶಿರಾದಲ್ಲಿ ಬಿಜೆಪಿಯವರು ಸಾವಿರಾರು ಜನರನ್ನು ಸೇರಿಸಿ ಮೆರವಣಿಗೆ ಮಾಡಿರುವುದು ಕೊರೋನಾ ನಿಯಮಗಳಿಗೆ ವಿರುದ್ಧವಲ್ಲವೇ? ತಾವು ಜಾರಿಗೆ ತಂದಿರುವ ನಿಯಮಗಳನ್ನು ತಾವೇ ಧಿಕ್ಕರಿಸಿದ್ದಾರೆ. ಇನ್ನು ಬೇರೆಯವರಿಗೆ ಉಪದೇಶ ನೀಡಲು ಯಾವ ನೈತಿಕತೆ ಇದೆ ಎಂದು ತರಾಟೆಗೆ ತೆಗೆದುಕೊಂಡರು.