ಮಹಾಶಿವರಾತ್ರಿ ದಿನದಂದ ಕೆಟ್ಟದ್ದನ್ನು ಶಿವ ಹೋಗಲಾಡಿಸುತ್ತಾನೆ: ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ

ವಿಜಯಪುರ(ಫೆ.19): ಈ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಯಾವುದೇ ಲೆಕ್ಕಕ್ಕಿಲ್ಲ. ಕರ್ನಾಟಕದಲ್ಲಿನ ಭ್ರಷ್ಟಾಸುರ ಕೆಟ್ಟಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯದ ಜನತೆ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪಸಿಂಗ್‌ ಸುರ್ಜೇವಾಲಾ ಅವರು ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕರ್ನಾಟಕ ಜನ ಹಾಗೂ ಕಾಂಗ್ರೆಸ್‌ ಒಂದು ಕಡೆ ಹಾಗೂ ಭ್ರಷ್ಟಾಸುರ ಬಸವರಾಜ ಬೊಮ್ಮಾಯಿ ಸರ್ಕಾರ ಇನ್ನೊಂದು ಕಡೆ ಇದೆ. ಈ ಎರಡರ ಮಧ್ಯೆ 2023ರ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ಹಾಗೂ ಕರ್ನಾಟಕ ಜನತೆ ಮತ್ತು ಕಾಂಗ್ರೆಸ್‌ ಮಧ್ಯೆ ಚುನಾವಣೆ ನಡೆಯುತ್ತಿದೆ ಎಂದು ಹೇಳಿದರು.

ವಿಜಯಪುರ: ಶಿವರಾತ್ರಿಯಂದು ಸಿದ್ದೇಶ್ವರ ಶ್ರೀಗಳ ರೀತಿ ಉಡುಗೆ ತೊಟ್ಟ ಪುಟಾಣಿ, ಕಾಲಿಗೆ ಬಿದ್ದ ಭಕ್ತರು..!

ಮಹಾಶಿವರಾತ್ರಿ ದಿನದಂದ ಕೆಟ್ಟದ್ದನ್ನು ಶಿವ ಹೋಗಲಾಡಿಸುತ್ತಾನೆ. ಅದೇ ರೀತಿ ಕರ್ನಾಟಕದಲ್ಲಿ ಶಿವನು ಕೆಟ್ಟಬೊಮ್ಮಾಯಿ ಸರ್ಕಾರವನ್ನು ಹೋಗಲಾಡಿಸುತ್ತಾನೆ ಎಂದ ಅವರು, ಈ ಬಾರಿ ಜನರು ಕಾಂಗ್ರೆಸ್‌ ಪರವಾಗಿ ಇರುವುದು ನಮಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಹಾಗಾಗಿ ಬರುವ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನನಗೆ ವಿಶೇಷ ಅಧಿಕಾರವಿಲ್ಲ. ಎಲ್ಲ ನಾಯಕರು ಒಗ್ಗಟ್ಟಾಗಿ ನಿರ್ಧಾರ ಮಾಡುತ್ತಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆ ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಒಮ್ಮತದ ನಿರ್ಣಯ ಕೈಗೊಂಡು ಅಭ್ಯರ್ಥಿಗಳ ಪಟ್ಟಿಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿಯೇ ಅಭ್ಯರ್ಥಿಗಳ ಘೋಷಣೆ ನಡೆಯುತ್ತಿದೆ. ಎಲ್ಲ ಆಯಾಮಗಳನ್ನು ಪರಿಗಣಿಸಿ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ಜನರ ಕಿವಿ ಮೇಲೆ ಹೂವಿಡುವ ಬಜೆಟ್‌: ಸುರ್ಜೇವಾಲಾ

ಬಿಜೆಪಿ ಸರ್ಕಾರದ ವಿರುದ್ಧ ಲಡಾಯಿ:

ಮಾಜಿ ಡಿಸಿಎಂ ಜಿ.ಪರಮೇಶ್ವರ ಒಳ್ಳೆಯ ರಾಜಕಾರಣಿ. ಅಧಿಕಾರಕ್ಕಾಗಿ ಆಸೆ, ಇಚ್ಚೆ ಹೊಂದುವುದು ತಪ್ಪಲ್ಲ. ನಮ್ಮಲ್ಲಿ ಈಗ ಅಧಿಕಾರಕ್ಕಾಗಿ ಲಡಾಯಿ ಇಲ್ಲ. ಬಿಜೆಪಿ ಸರ್ಕಾರದ ವಿರುದ್ಧ ನಮ್ಮ ಲಡಾಯಿ ಇದೆ. ಭ್ರಷ್ಟಬಿಜೆಪಿ ಸರ್ಕಾರದ ವಿರುದ್ಧ ಹೋರಾಟವಿದೆ. ವಿಶ್ವದಲ್ಲಿಯೇ ರಾಜ್ಯವನ್ನು ಬ್ರ್ಯಾಂಡ್‌ ಕರ್ನಾಟಕ ಮಾಡುವ ನಿಟ್ಟಿನಲ್ಲಿ ನಮ್ಮ ಗುರಿ ಇದೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಜು ಆಲಗೂರ, ಮುಖಂಡರಾದ ಸೋಮನಾಥ ಕಳ್ಳಿಮನಿ, ಶರಣಪ್ಪ ಸುಣಗಾರ, ಶ್ರೀನಾಥ ಪೂಜಾರಿ ಮತ್ತಿತರರು ಇದ್ದರು.