ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಸದಾ ಶೋಷಿತರ ಬೆನ್ನಿಗೆ ನಿಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದವತಿಯಿಂದ ನಡೆಯುವ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.  

ಹಿರಿಯೂರು (ಜ.28): ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಸದಾ ಶೋಷಿತರ ಬೆನ್ನಿಗೆ ನಿಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದವತಿಯಿಂದ ನಡೆಯುವ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಎಂದರೆ ಶೋಷಿತರ ಪರವಿರುವ ಪಕ್ಷ. ಯಾವಾಗಲೂ ಶೋಷಿತರ ಬೆನ್ನಿಗೆ ನಿಂತಿದ್ದೇವೆ. ಅಹಿಂದ ವರ್ಗದ ಜನತೆ ಈ ವಿಷಯ ಅರ್ಥ ಮಾಡಿಕೊಳ್ಳಬೇಕು. ಇದು ನಿಮ್ಮ ಇರುವಿಕೆ ತೋರಿಸುವ ಬಹು ದೊಡ್ಡ ಸಮಾರಂಭವಾಗಿದ್ದು, ನಮ್ಮ ತಾಲೂಕಿನಿಂದಲೂ ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. 

Add Asianetnews Kannada as a Preferred SourcegooglePreferred

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಮಾವೇಶದಲ್ಲಿ ಹಾಜರಿರಲಿದ್ದಾರೆ. ಚುನಾವಣೆಗೆ ಮುಂಚೆ ಕೊಟ್ಟ ಮಾತಿನಂತೆ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತ್ತಿದ್ದೇವೆ. ಇನ್ನೆರಡು ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಲೋಕಸಭಾ ಚುನಾವಣೆ ಎಲ್ಲರೂ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ಜನ ನಮ್ಮ ಮೇಲೆ ಅತಿಯಾದ ವಿಶ್ವಾಸವಿಟ್ಟು ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ತಂದಿದ್ದಾರೆ. ಅವರ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡಬೇಕು. 

ಬಿಜೆಪಿಯವರ ದುರಾಡಳಿತಕ್ಕೆ ಬೇಸತ್ತು ಜನ ನಮಗೆ ನೀಡಿರುವ ಈ ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳುವ ಕೆಲಸವಾಗಬೇಕು ಎಂದರು. ಹಳ್ಳಿಗಳ ಮತ್ತು ನಗರ ಭಾಗದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರ ಶ್ರಮಿಸಲಿದೆ. ಹಳ್ಳಿಗಳ ಭಾಗದ ರಸ್ತೆ ಮತ್ತು ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು. ಗ್ಯಾರಂಟಿಗಳ ನಡುವೆಯೂ ನಮ್ಮ ನಾಯಕರು ಹಣ ಹೊಂದಾಣಿಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯ ಮಾಡಲಿದ್ದಾರೆ. ಭಾನುವಾರದ ಸಮಾವೇಶ ಯಶಸ್ವಿಯಾಗಲು ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಅಧಿಕಾರಕ್ಕೆ ಬಂದು 7 ತಿಂಗಳಲ್ಲಿ ಸಿದ್ದರಾಮಯ್ಯನವರು ಏನು ಕಡಿದು ಕಟ್ಟೆಹಾಕಿಲ್ಲ: ಸಂಸದ ಪ್ರತಾಪ್ ಸಿಂಹ

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಖಾದಿ ರಮೇಶ್, ಈರಲಿಂಗೇಗೌಡ, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ನಾಗೇಂದ್ರ ನಾಯ್ಕ, ಗೀತಾ ನಾಗಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಮಾರುತಪ್ಪ, ಫಕೃದ್ದೀನ್, ಕೆಡಿಪಿ ಸದಸ್ಯ ತಿಮಣ್ಣ, ಮುಖಂಡರಾದ ಹರ್ತಿಕೋಟೆ ಮಹಾಂತೇಶ್, ಪಿಎಸ್ ಪಾತಯ್ಯ, ಬಸವರಾಜು, ವೈ ನಾಗರಾಜ್, ಕಾಶಾಮಯ್ಯ, ಮಸ್ಕಲ್ ಶ್ರೀನಿವಾಸ್, ಈರಣ್ಣ, ಸಿದ್ದೇಶ್, ಗುರುಪ್ರಸಾದ್ ಮುಂತಾದವರು ಹಾಜರಿದ್ದರು.