ಉಚಿತವಾಗಿ ವಿದ್ಯುತ್‌ ನೀಡುವ ಮೊದಲೆ ವಿದ್ಯುತ್‌ ದರ ಹೆಚ್ಚಳ ಮಾಡಿ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೋಲಾರ (ಜೂ.15): ವಿದ್ಯುತ್‌ ಬಿಲ್‌ ಹೆಚ್ಚಳ ಮಾಡಿರುವುದು ಬಿಜೆಪಿ ಸರ್ಕಾರವಲ್ಲ, ಕಾಂಗ್ರೆಸ್‌ ಸರ್ಕಾರದ 5 ಗ್ಯಾರಂಟಿಗಳಲ್ಲಿ ವಿದ್ಯುತ್‌ ಉಚಿತವು ಒಂದು ಗ್ಯಾರಂಟಿ. ಉಚಿತವಾಗಿ ವಿದ್ಯುತ್‌ ನೀಡುವ ಮೊದಲೆ ವಿದ್ಯುತ್‌ ದರ ಹೆಚ್ಚಳ ಮಾಡಿ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಯೂನಿಟ್‌ ವಿದ್ಯುತ್‌ಗೆ 70 ಪೈಸೆ ಹೆಚ್ಚಳ ಮಾಡಿರುವುದು ಕಾಂಗ್ರೆಸ್‌ ಸರ್ಕಾರ, ಇದರ ಜೊತೆಗೆ ಕೈಗಾರಿಕಾ ವಲಯದ ವಿದ್ಯುತ್‌ ದರವನ್ನು ಹೆಚ್ಚಳ ಮಾಡಿ ರಾಜ್ಯ ಕೈಗಾರಿಕಾ ವಲಯದ ಬೆನ್ನು ಮೂಳೆ ಮುರಿದಿದೆ. ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಯುವಕರು ಉದ್ಯೋಗ ಕಳೆದುಕೊಳ್ಳುವ ಸ್ಥಿತಿಗೆ ಕಾಂಗ್ರೆಸ್‌ ಪಕ್ಷ ಇದೀಗ ಅಡಿಪಾಯ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮ​ನ​ಗರದಲ್ಲಿ ಶಕ್ತಿ ಯೋಜ​ನೆ ಲಾಭ ಪಡೆದ 1.35 ಲಕ್ಷ ಮಹಿ​ಳೆ​ಯರು: ನಾರಿ ಶಕ್ತಿಯ ಎದುರು ಖಾಸಗಿ ಬಸ್‌ಗಳು ನಿಶ್ಯ​ಕ್ತಿ

ಕಾಂಗ್ರೆಸ್‌ನಿಂದ ಅಪಪ್ರಚಾರ: ಉಚಿತ ಯೋಜನೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವ ಮೊದಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಯೋಚಿಸಬೇಕಿತ್ತು. ಈಗ ಯೋಜನೆಗಳನ್ನು ಜಾರಿಗೆ ತರಲು ಪರದಾಡುತ್ತಿದ್ದಾರೆ, ಇವರ ಗ್ಯಾರಂಟಿ ಕಾರ್ಡುಗಳನ್ನು ಹಂಚುವಾಗ ಗಮನಕ್ಕೆ ಬಾರಲಿಲ್ಲವೆ, ಪಠ್ಯ ಪುಸ್ತಕಗಳಲ್ಲಿ ಬದಲಾವಣೆ, ಗೋಹತ್ಯೆ ನಿಷೇಧ ಮುಂತಾದ ಕಾಯ್ದೆಗಳನ್ನು ರದ್ದು ಮಾಡುವುದಾಗಿ ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಾಗದೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ ಎಂದು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಏನು ಜನರಿಗೆ ಆಶ್ವಾಸನೆ ನೀಡಿ ಬಂದಿದ್ದೀರೋ ಅದನ್ನು ಈಡೇರಿಸಲು ಅವರಿಂದ ಸಾಧ್ಯವಿಲ್ಲ. ಈ ಸರ್ಕಾರಕ್ಕೆ ಭವಿಷ್ಯವೂ ಇಲ್ಲ, ಐದು ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ರಾಜ್ಯ ಕಾಂಗ್ರೆಸ್‌ ಎಟಿಎಂ ಆಗಿದೆ. ಅದಕ್ಕಾಗಿ ಸುರ್ಜೇವಾಲ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಮಂತ್ರಿಗಳ ಮತ್ತು ಅಧಿಕಾರಿಗಳ ಸಭೆ ನಡೆಸುವ ಮೂಲಕ ಸರ್ಕಾರಿ ಖಜಾನೆಯ ಲೂಟಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವದ ಕಗ್ಗೊಲೆ: ಇವರು ಸಭೆ ಮಾಡುವುದಾದರೆ ಪ್ರತ್ಯೇಕವಾಗಿ ಸಭೆ ಮಾಡಬೆಕಾಗಿತ್ತು, ಪಕ್ಷದ ಸಭೆಗೆ ಅದಿಕಾರಿಗಳನ್ನು ಸೇರಿಸಿಕೊಂಡಿದ್ದು ಯಾಕೆ. ಸುರ್ಜೇವಾಲಾರನ್ನು ಕರೆದು ಬೆಂಗಳೂರಿನಿಂದ ಎಷ್ಟುಹಣ ಕ್ರೋಡೀಕರಿಸಲು ಸಾದ್ಯವಾಗುತ್ತದೆ, ಯಾವ್ಯಾವ ಇಲಾಖೆಯಿಂದ ಎಷ್ಟುಹಣ ಬರಲಿದೆ ಎಂಬ ಲೆಕ್ಕಾಚಾರ ಹಾಕುವ ಕೆಲಸ ಮಾಡಿ ಕಾಂಗ್ರೆಸ್‌ ಪಕ್ಷದವರು ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರಜಾ ಪ್ರಭುತ್ವವನ್ನು ಕಗ್ಗೂಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಕಾಂಗ್ರೆಸ್‌ ನಾಯಕರು ಬೇರೆ ಬೇರೆ ದೇಶಗಳಲ್ಲಿ ಆಸ್ತಿಗಳನ್ನು ಮಾಡಿಕೊಂಡಿರುವುದು ಇದರ ಜೊತೆಯಲ್ಲಿ ವಿಧೇಶಿ ಬ್ಯಾಂಕುಗಳಲ್ಲಿ ಹಣ ಇಟ್ಟಿರುವುದು ಎಲ್ಲರಿಗು ತಿಳಿದಿರು ವಿಷಯ, ಎಲ್ಲವನ್ನು ಈಚೆಗೆ ತರುತ್ತೇವೆ. ಇದೇ ರೀತಿ ಕರ್ನಾಟಕದಲ್ಲಿ ಸಭೆಗಳನ್ನು ನಡೆಸಲು ಮುಂದಾದರೆ ರಾಜ್ಯಪಾಲರಿಗೆ ದೂರು ನೀಡುತ್ತೇವೆ. ಬೀದಿಗೆ ಇಳಿದು ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ಗೆ ಮತ ನೀಡಿರುವುದು ಕೆಲಸಕ್ಕೋ, ಹೈಕಮಾಂಡ್‌ ಗುಲಾಮಗಿರಿಗೋ?: ಎಚ್‌ಡಿಕೆ

ಗ್ಯಾರಂಟಿ ಹೆಸರಲ್ಲಿ ಜನತೆಗೆ ಟೋಪಿ: ಕಾಂಗ್ರೆಸ್‌ ಸರ್ಕಾರ 60 ವರ್ಷದಿಂದ ಜನರನ್ನು ಯಾಮಾರಿಸಿಕೊಂಡು ಟೋಪಿ ಹಾಕುತ್ತಲೆ ಬಂದಿದೆ. ಈ ಬಾರಿಯು ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ನೀಡುವುದಾಗಿ ಭರವಸೆ ನೀಡಿ ಮತ ಹಾಕಿಸಿಕೊಂಡು ಗೆದ್ದ ನಂತರ ಗ್ಯಾರಂಟಿಗಳಿಗೆ ನಿಬಂಧನೆಗಳನ್ನು ಹಾಕಿ ಮತ್ತೆ ಟೋಪಿ ಹಾಕಲು ಮುಂದಾಗಿದೆ. ನಿರುದ್ಯೋಗವು 10-15 ವರ್ಷಗಳಿಂದ ಕೆಲಸಕ್ಕಾಗಿ ಜಾತಕ ಪಕ್ಷಗಳಾಗಿ ಕಾಯುತ್ತಿದ್ದರು, ಇವರು ನಿರುದ್ಯೋಗಿಗಳಿಗೆ ಮೂರು ಸಾವಿರ ರೂ.ಗಳನ್ನು ಕೊಡುವುದಾಗಿ ಘೋಷಣೆ ಮಾಡಿ ಯುವಕರ ಮತ ಪಡೆದು ಈಗ ಷರತ್ತು ವಿಧಿಸುವ ಮೂಲಕ ಟೋಪಿ ಹಾಕುತ್ತಿದ್ದಾರೆ. ಇದಲ್ಲದೆ ಗೃಹಿಣಿಯರಿಗೆ ನೀಡುವ 2 ಸಾವಿರ ರೂ.ಗಳಿಗೂ ನಿಬಂಧನೆಗಳನ್ನು ಹಾಕುವ ಮೂಲಕ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರ ಟೋಪಿ ಕೆಲಸ ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಡಾ.ವೇಣುಗೊಪಾಲ್‌, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಮಮತಮ್ಮ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ ಇದ್ದರು.