Asianet Suvarna News Asianet Suvarna News

ಕಾಂಗ್ರೆಸ್‌ ಮುಕ್ತ ಭಾರತ ನಿಶ್ಚಿತ: ನಳಿನ್‌ ಕುಮಾರ್‌ ಕಟೀಲ್‌

ಮುಂಬರುವ ಚುನಾವಣೆಗೂ ಮೊದಲೇ ರಾಜ್ಯದಲ್ಲಿ ಕಾಂಗ್ರೆಸ್‌ 2 ಹೋಳಾಗಲಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷ ಅಂತ ಆಗಲಿದೆ: ಕಟೀಲ್‌

Congress Free India is Certain Says Nalin Kumar Kateel grg
Author
First Published Oct 12, 2022, 9:00 AM IST

ಹಾವೇರಿ(ಅ.12):  ಭ್ರಷ್ಟಾಚಾರ, ಪರಿವಾರ ವಾದ ಮತ್ತು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತ ಬಂದಿರುವುದೇ ದೇಶಕ್ಕೆ ಕಾಂಗ್ರೆಸ್‌ ನೀಡಿದ ಕೊಡುಗೆ. ಮುಂದೆ ಕಾಂಗ್ರೆಸ್‌ ಮುಕ್ತ ಭಾರತ, ಕಾಂಗ್ರೆಸ್‌ ಮುಕ್ತ ಕರ್ನಾಟಕ ಆಗುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. 

ಮಂಗಳವಾರ ಇಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪೇಜ್‌ ಪ್ರಮುಖರು ಮತ್ತು ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿ, ಈಗಿರುವವರು ನಕಲಿ ಕಾಂಗ್ರೆಸ್ಸಿಗರು. ಇವರ ಆಡಳಿತದಲ್ಲಿ ಭಾರತವನ್ನು ಭಿಕ್ಷುಕರ ರಾಷ್ಟ್ರ, ಹಾವಾಡಿಗರ ದೇಶ ಎಂದು ಕರೆಯುವಂತೆ ಮಾಡಿದರು. ಭ್ರಷ್ಟಾಚಾರಕ್ಕೆ ಕಾಂಗ್ರೆಸ್‌ ಅದ್ಭುತ ಕೊಡುಗೆ ನೀಡಿದೆ. ಅದಕ್ಕಾಗಿಯೇ ಇಂದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರು, ಉಪಾಧ್ಯಕ್ಷ ರಾಹುಲ್‌ ಗಾಂಧಿ, ಅವರ ಭಾವ ವಾದ್ರಾ, ರಾಜ್ಯಾಧ್ಯಕ್ಷರು, ಯುವ ಕಾಂಗ್ರೆಸ್‌ ಅಧ್ಯಕ್ಷರು ಬೇಲ್‌ ಮೇಲಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಭ್ರಷ್ಟಾಚಾರಿಗಳ ಪಾರ್ಟಿ ಎಂದು ವಾಗ್ದಾಳಿ ನಡೆಸಿದರು.

ಯಾರು ಭಾರತ್ ಜೋಡೋ ಮಾಡಿದ್ದಾರೆ, ತೋಡೋ ಮಾಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ: ಸಿಎಂ ಬೊಮ್ಮಾಯಿ

ದೇಶದಲ್ಲಿ ಭಯೋತ್ಪಾದನೆ ಆರಂಭವಾಗಿದ್ದು ಕಾಂಗ್ರೆಸ್‌ ಕಾಲಘಟ್ಟದಲ್ಲಿ. ಹಳ್ಳಿಹಳ್ಳಿಗಳಲ್ಲಿ ಬಾಂಬ್‌ ಸ್ಫೋಟಗೊಳ್ಳುತ್ತಿತ್ತು. ಆದರೆ, 2014ರಿಂದ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಎಲ್ಲೂ ಬಾಂಬ್‌ ಸ್ಫೋಟಗೊಳ್ಳಲಿಲ್ಲ. ನಕ್ಸಲ್‌ ಚಟುವಟಿಕೆಯೂ ಈಗ ಬಂದ್‌ ಆಗಿದೆ. ಭಯೋತ್ಪಾದನೆ ಶಕ್ತಿಗಳಿಗೆ ಆಂತರಿಕ ಪ್ರೇರಣೆ ನೀಡಿದ್ದು ಕಾಂಗ್ರೆಸ್‌. ಗಾಂಧಿ ಹೆಸರಿನಲ್ಲಿ ತಂದೆಯಿಂದ ಮಗಳು, ಮಗ, ಮೊಮ್ಮಗ ಎಲ್ಲರೂ ಪರಿವಾರದ ಹೆಸರಿನಲ್ಲಿ ಅಧಿಕಾರ ನಡೆಸಿಕೊಂಡು ಬಂದರು.

2 ಹೋಳಾಗಲಿರುವ ಕಾಂಗ್ರೆಸ್‌: 

ಮುಂಬರುವ ಚುನಾವಣೆಗೂ ಮೊದಲೇ ರಾಜ್ಯದಲ್ಲಿ ಕಾಂಗ್ರೆಸ್‌ 2 ಹೋಳಾಗಲಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷ ಅಂತ ಆಗಲಿದೆ. ಮೂರನೇ ಶಕ್ತಿ ಕೇಂದ್ರವೂ ನಿರ್ಮಾಣವಾಗುತ್ತಿದೆ. ಅದು ಖರ್ಗೆ ಗ್ಯಾಂಗ್‌. ಖರ್ಗೆ ಅಧ್ಯಕ್ಷರಾದ ಮೇಲೆ ಸಿದ್ದರಾಮಯ್ಯಗೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ. ಖರ್ಗೆ ಮುಖ್ಯಮಂತ್ರಿ ಮಾಡಲು ಅಡ್ಡಗಾಲು ಹಾಕಿದ್ದಕ್ಕೆ ಸಿದ್ದರಾಮಯ್ಯರನ್ನು ಖರ್ಗೆ ಸೋಲಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್‌ ಮುಕ್ತ ಭಾರತ, ಕರ್ನಾಟಕ ಆಗಲಿದೆ ಎಂದರು.
 

Follow Us:
Download App:
  • android
  • ios