ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಬಾಕಿ ಉಳಿಸಿಕೊಂಡಿದ್ದ 5 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಟಿಕೆಟ್‌ನ್ನು ಮಧ್ಯರಾತ್ರಿ 2 ಗಂಟೆ ವೇಳೆಗೆ ಘೋಷಣೆ ಮಾಡಲಾಗಿದೆ.

ಬೆಂಗಳೂರು (ಏ.20): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಬಾಕಿ ಉಳಿಸಿಕೊಂಡಿದ್ದ 5 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಟಿಕೆಟ್‌ನ್ನು ಮಧ್ಯರಾತ್ರಿ 2 ಗಂಟೆ ವೇಳೆಗೆ ಘೋಷಣೆ ಮಾಡಲಾಗಿದೆ. ಈ ಮೂಲಕ 223 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದು, ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ರೈತ ಸಂಘದ ಅರ್ಭಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಬಾಹ್ಯ ಬೆಂಬಲವನ್ನು ಘೋಷಣೆ ಮಾಡಿದೆ.

ಕಾಂಗ್ರೆಸ್ ಆರನೇ ಪಟ್ಟಿಯಲ್ಲಿರುವ 5 ಅಭ್ಯರ್ಥಿಗಳು: 

  1. ರಾಯಚೂರು - ಮೊಹಮ್ಮದ್ ಶಾಲಮ್
  2. ಶಿಡ್ಲಘಟ್ಟ - ಬಿ ವಿ ರಾಜೀವ್ ಗೌಡ
  3. ಸಿ.ವಿ. ರಾಮನ್ ನಗರ - ಎಸ್ ಆನಂದ್ ಕುಮಾರ್
  4. ಅರಕಲಗೂಡು - ಎಚ್.ಪಿ. ಶ್ರೀಪಾದ್ ಗೌಡ
  5. ಮಂಗಳೂರು ಉತ್ತರ - ಇನಾಯತ್ ಅಲಿ

ಕಾಂಗ್ರೆಸ್‌ 4ನೇ ಪಟ್ಟಿ ಬಿಡುಗಡೆ: ಶೆಟ್ಟರ್‌ಗೆ ಟಿಕೆಟ್‌- ಪುಲಿಕೇಶಿನಗರ ಸೇರಿ 8 ಕ್ಷೇತ್ರ ಬಾಕಿ

ಕಾಂಗ್ರೆಸ್‌ ವಿರುದ್ಧ ಮೊಹಿಯುದ್ದೀನ್ ಬಾವ ಬಂಡಾಯ: ಮತ್ತೊಂದೆಡೆ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ವಿರುದ್ದ ಬಂಡಾಯವೇಳುವ ಸಾಧ್ಯತೆಯಿದೆ. ಈ ಬಗ್ಗೆ ಸ್ವತಃ ಬಾವ ಅವರು ವೀಡಿಯೊ ಮೂಲಕ ಸಂದೇಶವನ್ನು ಕಳುಹಿಸಿದ್ದಾರೆ. ಜೊತೆಗೆ, ಕಾಂಗ್ರೆಸ್‌ ನನ್ನನ್ನು ಉಪಯೋಗಿಸಿಕೊಂಡು ಹಣದ ಆಸೆಗಾಗಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ. ನನ್ನ ಹೆಸರಿಗಾಗಿದ್ದ ಬಿ-ಫಾರಂ ಅನ್ನು ಎರಡು ಬಾರಿ ತಪ್ಪಿಸಲಾಗಿದೆ. ಇಂದು ಮಧ್ಯಾಹ್ನ 11 ಗಂಟೆಗೆ ಚೊಕ್ಕಬೆಟ್ಟಿನ ನನ್ನ ಮನೆಯಲ್ಲಿ ಬೆಂಬಲಿಗರ ಸಭೆ ಕರೆದಿದ್ದೇನೆ‌. ನಂತರ, ಕಾಂಗ್ರೆಸ್‌ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸಲಿದ್ದೇನೆ ಎಂದು ತಿಳಿಸಿದ್ದಾರೆ.

ರಾಯಚೂರಿನಲ್ಲಿ ಬೋಸರಾಜು ಆಪ್ತನಿಗೆ ಟಿಕೆಟ್: ಕಾಂಗ್ರೆಸ್ ಕೊನೆಯ ಪಟ್ಟಿಯಲ್ಲಿ ರಾಯಚೂರು ನಗರದ ಕೈ ಟಿಕೆಟ್ ಘೋಷಣೆ ಮಾಡಿದ್ದು, ಮಹಮ್ಮದ್ ಶಾಲಂಗೆ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್ ಟಿಕೆಟ್ ಗಾಗಿ ಒಟ್ಟು 17 ಜನರು ಅರ್ಜಿ ಸಲ್ಲಿಕೆ ಮಾಡಿದ್ದರು. ಈ 17 ಜನರಲ್ಲಿ ಅಳೆದು-ತೂಗಿ ಹೈಕಮಾಂಡ್ ಅಲ್ಪಸಂಖ್ಯಾತರಿಗೆ ಮಣೆ ಹಾಕಿತ್ತು. ಮಾಜಿ ನಗರಸಭೆ ಸದಸ್ಯ ಮಹಮ್ಮದ್ ಶಾಲಂಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಎನ್.ಎಸ್.ಬೋಸರಾಜುಗೆ ಟಿಕೆಟ್‌ ನೀಡಬೇಕು ಎನ್ನುವ ಒತ್ತಡವೂ ಕೇಳಿಬಂದಿತ್ತು. ಇವರನ್ನು ಕೈ ಬಿಟ್ಟು ಮಹಮ್ಮದ್ ಶಾಲಂಗೆ ಟಿಕೆಟ್ ಫೈನಲ್ ಮಾಡಿರುವುದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಘಟಾನುಘಟ್ಟಿಗಳ ಹೆಸರು ಕೈ ಬಿಟ್ಟು ಮಹಮ್ಮದ್ ಶಾಲಂಗೆ ಟಿಕೆಟ್ ಘೋಷಣೆ ಮಾಡಿದ್ದರಿಂದ, ಜಿಲ್ಲಾ ಕಾಂಗ್ರೆಸ್ ನಾಯಕರಿಂದ ಅಪಸ್ವರ ಮಾತು ಕೇಳಿಬಂದಿದೆ. ಇನ್ನು ಮಹಮ್ಮದ್ ಶಾಲಂ ಬೋಸರಾಜು ‌ಆಪ್ತರಲ್ಲಿ ಒಬ್ಬರಾಗಿದ್ದಾರೆ. 

ಕಾಂಗ್ರೆಸ್‌ನ ಐದನೇ ಪಟ್ಟಿ ಬಿಡುಗಡೆ, ಅಖಂಡನಿಗೆ ಟಿಕೆಟ್‌ ಮಿಸ್‌

ಶಿಡ್ಲಘಟ್ಟದಲ್ಲಿ ಭುಗಿಲೆದ್ದ ಭಿನ್ನಮತ: ಕಾಂಗ್ರೆಸ್‌ನಿಂದ ಮಧ್ಯ ರಾತ್ರಿ ಅಂತಿಮ ಪಟ್ಟಿ ರಿಲೀಸ್ ಆಗಿದ್ದು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ರಾಜೀವ್ ಗೌಡ ಹೆಸರು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಆಂಜಿನಪ್ಪ ಪುಟ್ಟು ವಿಡಿಯೋ ಬಿಡುಗಡೆ ಮಾಡಿ, ಇಂದು ಪಕ್ಷೇತರ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಸುತ್ತೇನೆ. ಎಲ್ಲರು ಬಂದು ಆಶೀರ್ವಾದ ಮಾಡಿ ಎಂದ ಕೇಳಿಕೊಂಡಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬೆಳೆಸಲು ಶ್ರಮಪಟ್ಟಿದ್ದೆ. ಆದರೆ ಈಗ ಮತ್ತೊಬ್ಬರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ನಾನು ಪಕ್ಣೇತರನಾಗಿ ಸ್ಪರ್ಧೆ ಮಾಡೋದು ಖಚಿತ ಎಂದಿರೋ ಪುಟ್ಟು ಆಂಜಿನಪ್ಪ ಹೇಳಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.