Asianet Suvarna News Asianet Suvarna News

ಸಿದ್ದರಾಮಯ್ಯಗೆ ಮುಸ್ಲಿಮ್ ಮತ ಕಳೆದುಕೊಳ್ಳುವ ಭೀತಿ, ಆರ್‌ಎಸ್ಎಸ್ ಬ್ಯಾನ್ ಹೇಳಿಕೆಗೆ ಜೋಶಿ ಗರಂ!

  • ಕಾಂಗ್ರೆಸ್‌ನಿಂದ ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆ
  • ವಿದ್ಯಾರ್ಥಿಗಳು ಮತಾಂಧರ ಕುಮ್ಮಕ್ಕಿಗೆ ಒಳಗಾಗಬೇಡಿ
  • ಸಿದ್ದು-ಡಿಕೆಶಿ ಮಧ್ಯೆ ಅಂತರಯುದ್ಧ
Congress fear of losing Muslim votes Pralhad Joshi slams Siddaramaiah over rss ban statement ckm
Author
Bengaluru, First Published Apr 24, 2022, 5:30 AM IST | Last Updated Apr 24, 2022, 5:30 AM IST

ಹುಬ್ಬಳ್ಳಿ(ಏ.24): ಕೇವಲ ಎಸ್‌ಡಿಪಿಐ ಬ್ಯಾನ್‌ ಆಗಲಿ ಎಂದರೆ ಇನ್ನೊಂದು ಕೋಮಿನವರಿಗೆ ನೋವಾಗುತ್ತದೆ ಎಂದು ಸಿದ್ದರಾಮಯ್ಯ ಆರ್‌ಎಸ್‌ಎಸ್‌ನ್ನೂ ನಿರ್ಬಂಧಿಸಿ ಎನ್ನುತ್ತಿದ್ದಾರೆ. ಇದು ತುಷ್ಟೀಕರಣ ರಾಜಕಾರಣವಾಗಿದ್ದು, ಬೌದ್ಧಿಕ ದಿವಾಳಿಗೆ ಸಾಕ್ಷಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ -ಧಾರವಾಡದಲ್ಲಿ ಶನಿವಾರ ಮಾಧ್ಯಮದ ಜತೆ ಮಾತನಾಡಿದ ಅವರು, ನೆಹರು ಪ್ರಧಾನಮಂತ್ರಿ ಇದ್ದಾಗ ವಲ್ಲಭಭಾಯಿ ಅವರು ಗಣತಂತ್ರ ಪರೇಡ್‌ ವೇಳೆಯಲ್ಲಿಯೇ ದೇಶದಲ್ಲಿ ಅಶಾಂತಿ ಮೂಡಿಸುವ ಸಂಘಟನೆಗಳನ್ನು ಬ್ಯಾನ್‌ ಮಾಡಿದ್ದರು. ಆದರೆ, ಕಾಂಗ್ರೆಸ್‌ ಎರಡು ಬಾರಿ ನಿರ್ಬಂಧ ಹಿಂಪಡೆಯಿತು. ಮತ್ತೊಮ್ಮೆ ಆಯೋಗ ರಚನೆ ಮಾಡಿದಾಗ ಬ್ಯಾನ್‌ ಮಾಡುವುದು ನ್ಯಾಯಸಮ್ಮತ ಅಲ್ಲವೆಂದು ಹಿಂದೆ ಸರಿದರು. ಎಸ್‌ಡಿಪಿಐ ಅಷ್ಟೇ ಬ್ಯಾನ್‌ ಮಾಡಿ ಎಂದರೆ ಮುಸ್ಲಿಮರ ಮತ ಕಳೆದುಕೊಳ್ಳುವ ಭೀತಿಯಲ್ಲಿ ಆರ್‌ಎಸ್‌ಎಸ್‌ನ್ನು ನಿರ್ಬಂಧಿಸಿ ಎಂದು ಸಿದ್ದರಾಮಯ್ಯ ಸೇರಿಸಿದ್ದಾರೆ. ಇದು ತುಷ್ಟೀಕರಣದ ಪರಾಕಾಷ್ಠೆ ಎಂದು ಸಿಡಿಮಿಡಿಗೊಂಡರು.

ಎಸ್‌ಡಿಪಿಐ, ಪಿಎಫ್‌ಐ, ಆರ್‌ಎಸ್‌ಎಸ್‌ ಸಂಘಟನೆಗಳನ್ನು ನಿಷೇಧಿಸಿ: ಸಿದ್ದರಾಮಯ್ಯ ಸವಾಲ್

ಸಿದ್ದು-ಡಿಕೆಶಿ ಮಧ್ಯೆ ಅಂತರಯುದ್ಧ:
ಸಿದ್ದರಾಮಯ್ಯ- ಡಿಕೆಶಿ ಮಧ್ಯೆ ಅಂತರಯುದ್ಧ ನಡೆದಿದೆ. ಇಬ್ಬರೂ ಓಲೈಕೆಯಲ್ಲಿ ಸ್ಪರ್ಧೆಗೆ ಬಿದ್ದಿದ್ದಾರೆ. ಯಾರು ಹೆಚ್ಚು ಓಲೈಕೆ ಮಾಡುತ್ತಾರೋ ಅವರೇ ಮುಂದಿನ ಸಿಎಂ ಎಂದುಕೊಂಡಿದ್ದಾರೆ. ದೇಶದಲ್ಲಿ ಇದೇ ರೀತಿ ಮಾಡಿದ್ದಕ್ಕೆ ಡಿಪಾಸಿಟ್‌ ಕಳೆದುಕೊಳ್ಳುವ ಹಂತಕ್ಕೆ ಬಂದಿದೆ. ಪಂಚರಾಜ್ಯ ಚುನಾವಣೆಯಲ್ಲಿ ಸೋತಿರುವ ಅವರಿಗೆ ಕರ್ನಾಟಕದಲ್ಲಾದರೂ ಅಧಿಕಾರಕ್ಕೆ ಬರಬೇಕಿದೆ. ಹೀಗಾಗಿ ತುಷ್ಟೀಕರಣ ಮಾಡಿ ಮುಖ್ಯಮಂತ್ರಿ ಆಗಲು ಮುಂದಾಗಿದ್ದಾರೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಶಾಂತಿಗೆ ಕಾರಣವಾಗುವ ಸಂಘಟನೆಗಳ ವಿರುದ್ಧ ನಿಖರ ಘಟನೆಗಳ ಕುರಿತು ಯಾರಾದರೂ ದಾಖಲೆ ನೀಡಲಿ ಎಂದು ತಿಳಿಸಿದ್ದಾರೆ. ದಾಖಲೆ ದೊರೆತಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳ ಶೇ. 30 ಕಮಿಷನ್‌ ಆರೋಪದ ಕುರಿತು ಮಾತನಾಡಿದ ಜೋಶಿ, ಉಳಿದ ಮಠಾಧೀಶರು ನಾವು ಏನೂ ಕಮಿಷನ್‌ ಕೊಟ್ಟಿಲ್ಲ, ನಮಗೆ ಅನುದಾನ ಸಿಕ್ಕಿದೆ ಎಂದು ಹೇಳಿದ್ದಾರೆ. ಅದರ ಬಗ್ಗೆ ಸಿದ್ದರಾಮಯ್ಯ ಮಾತನಾಡಲಿ ಎಂದು ಸವಾಲು ಹಾಕಿದರು.

ಪಿಎಫ್‌ಐ, ಎಸ್‌ಡಿಪಿಐ ಜೊತೆ RSS, ವಿಹಿಂಪ ಕೂಡಾ ನಿಷೇಧಿಸಿ: ಎಂ. ಬಿ. ಪಾಟೀಲ್ ಆಗ್ರಹ

ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಎಂದು ಪಕ್ಷಗಳನ್ನು ಎಳೆತರುವ ಅಗತ್ಯವಿಲ್ಲ. ಯಾರು ಅಕ್ರಮ ಮಾಡಿದ್ದಾರೆಯೋ ಅವರೆಲ್ಲರನ್ನೂ ಜೈಲಿಗೆ ಹಾಕಬೇಕು. ಯಾವ ಪಕ್ಷದವರು ಇದ್ದಾರೆ ಎಂಬ ವಿಷಯ ಇದಲ್ಲ. ಯಾರು ಅಪರಾಧ ಮಾಡಿದ್ದಾರೆಯೋ ಅವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಹಿಜಾಬ್‌ ಧರಿಸಿ ಪಿಯುಸಿ ಪರೀಕ್ಷೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಕೆಲವು ಮತಾಂಧ ಶಕ್ತಿಗಳು ವಿದ್ಯಾರ್ಥಿಗಳಿಗೆ ಕುಮ್ಮಕ್ಕು ನೀಡಿವೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಾರೆ. ಭವಿಷ್ಯ ಹಾಳು ಮಾಡಿಕೊಳ್ಳಬೇಡಿ, ಇದರಿಂದ ನಿಮಗೆ ಯಾವುದೇ ಲಾಭ ಆಗುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡುತ್ತೇನೆ. ಯಾರು ಈ ರೀತಿಯ ಕುಮ್ಮಕ್ಕು ನೀಡುವವರಿದ್ದಾರೊ ಕಾಶ್ಮೀರದಲ್ಲಿ ಅವರೇ ಕಲ್ಲು ಎಸೆಯಲು ಪ್ರೇರೇಪಿಸುತ್ತಿದ್ದಾರೆ. ಅವರೆಲ್ಲರು ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದುಸುತ್ತಿದ್ದಾರೆ ಎಂಬುದು ವಿದ್ಯಾರ್ಥಿಗಳಿಗೆ ನೆನಪಿರಲಿ ಎಂದರು.

ಇನ್ನು ಹುಬ್ಬಳ್ಳಿ ಗಲಭೆಯಲ್ಲಿ ಬಿಜೆಪಿ ಕೈವಾಡವಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಮಾಸ್ರ್ಟ ಮೈಂಡ್‌ ಹಿಡಿದುಕೊಂಡು ಬರಲಾಗಿದ್ದು, ಅದರ ಹಿಂದೆ ಇನ್ನಷ್ಟು ಮಾಸ್ರ್ಟ ಮೈಂಡ್‌ ಗಳಿವೆ ಎಂದು ಹೇಳಾಗುತ್ತಿದೆ. ಹಾಗಾಗಿ ಘಟನೆ ಹಿಂದೆ ಎಷ್ಟುಮಾಸ್ರ್ಟ ಮೈಂಡ್‌ ಗಳಿದ್ದಾರೆ ಅವರನ್ನು ಹಿಡಿದು ಜೈಲಿಗೆ ಕಳಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಅಲ್ಲದೇ ಅವರ ಲಿಂಕ್‌ ಬಾಂಗ್ಲಾದೇಶದಲ್ಲಿದ್ದರೇ ಅದರ ಬಗ್ಗೆ ಕೂಡ ತನಿಖೆ ಆಗಲಿದೆ ಎಂದರು.

Latest Videos
Follow Us:
Download App:
  • android
  • ios