Asianet Suvarna News Asianet Suvarna News

Karnataka Assembly Elections 2023: ಪಕ್ಷ ಬಿಟ್ಟ ಮುಖಂಡರಿಗೆ ಮತ್ತೆ ಕಾಂಗ್ರೆಸ್‌ ಗಾಳ?

ಕಳೆದ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್‌ ತೊರೆದು ವಿವಿಧ ಪಕ್ಷ ಸೇರಿದ್ದ ಹಿರಿತಲೆ ಮುಖಂಡರಿಗೆ ಮತ್ತೆ ಮೂಲ ಪಕ್ಷಕ್ಕೆ ವಾಪಸ್‌ ಕರೆತರಲು ‘ಕೈ’ ಪಡೆ ಗಂಭೀರ ಚಿಂತನ-ಮಂಥನ ನಡೆಸಿದೆ. 

Congress Communicate Who Left Congress Party in Yadgir grg
Author
First Published Dec 10, 2022, 11:00 PM IST

ಆನಂದ್‌ ಎಂ. ಸೌದಿ

ಯಾದಗಿರಿ(ಡಿ.10):  ಕಳೆದ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್‌ ತೊರೆದು ವಿವಿಧ ಪಕ್ಷ ಸೇರಿದ್ದ ಹಿರಿತಲೆ ಮುಖಂಡರಿಗೆ ಮತ್ತೆ ಮೂಲ ಪಕ್ಷಕ್ಕೆ ವಾಪಸ್‌ ಕರೆತರಲು ‘ಕೈ’ ಪಡೆ ಗಂಭೀರ ಚಿಂತನ-ಮಂಥನ ನಡೆಸಿದೆ. ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಈ ಬೆಳವಣಿಗೆಗಳು ಕಾಂಗ್ರೆಸ್ಸಿಗೆ ವರದಾನವಾಗಲಿದೆ ಎಂಬ ಅಂಶಗಳನ್ನು ಆಂತರಿಕ ಸರ್ವೆಯಲ್ಲಿ ಕಂಡುಕೊಳ್ಳಲಾಗಿದೆ ಎನ್ನಲಾಗಿದೆ.

ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷರಾದ ಮೇಲೆ ಇಂತಹ ಚಟುವಟಿಕೆಗಳಿಗೆ ಮತ್ತಷ್ಟು ಜೀವ ಬಂದಿದೆ. ಇದಕ್ಕೆ ಅವರೂ ಸಹ ತಲೆಯಾಡಿಸಿದ್ದಾರೆನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ‘ಘರ್‌ ವಾಪ್ಸಿ’ ಕಾರ್ಯಕ್ರಮಗಳು ನಡೆದರೆ ಅಚ್ಚರಿ ಪಡೆಬೇಕಿಲ್ಲ.

TICKET FIGHT: ಕುತೂಹಲ ಮೂಡಿಸಿರುವ ಯಾದಗಿರಿ ಜಿಲ್ಲೆಯ ರಾಜಕೀಯ ಜಿದ್ದಾಜಿದ್ದಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಈಗಾಗಲೇ ಅನೇಕರನ್ನು ಸಂಪರ್ಕಿಸಿದ್ದು, ಮತ್ತೇ ಎಲ್ಲರೂ ಒಂದಾಗೋಣ ಎಂಬ ಸಂದೇಶ ಆಪ್ತ ವಲಯದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್‌ ಪಕ್ಷ ತ್ಯಜಿಸಿ ವಿವಿಧ ಪಕ್ಷಗಳಿಗೆ ಪಕ್ಷಾಂತರಗೊಂಡವರನ್ನು ಮನ ಓಲೈಸಲಾಗುತ್ತಿದೆ. ಸಮಾನಮನಸ್ಕರು ಒಂದಾದರೆ ಮತ್ತೇ ಹಿಂದಿನ ವೈಭವ ಮರುಕಳಿಸಬಹುದು ಎಂಬ ಮಾತುಗಳಿಂದ ಪಕ್ಷಾಂತರಿಗಳಲ್ಲಿಯೂ ಹೊಸ ಆಶಾಭಾವ ಮೂಡಿ, ಮತ್ತೆ ಮೂಲನೆಲೆಗೆ ವಾಪಸ್ಸಾಗಲು ಸಿದ್ಧತೆ ನಡೆಸಿದಂತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಚಿವ ಡಾ. ಎ.ಬಿ. ಮಾಲಕರೆಡ್ಡಿ ಅವರನ್ನು ಸಂಪರ್ಕಿಸಿರುವ ಡಿಕೆಶಿ, ಕಾಂಗ್ರೆಸ್‌ ರಾಜಕೀಯಕ್ಕೆ ಮರಳುವಂತೆ ಕೋರಿದ್ದಾರೆ ಎಂಬ ದಟ್ಟವಾದ ಮಾತುಗಳಿವೆ. ಡಾ. ರೆಡ್ಡಿ ಅವರ ಪುತ್ರಿ ಡಾ. ಅನುರಾಗಾ ಮೂಲಕ ಇಲ್ಲಿ ಮತ್ತೆ ಕೈಪಡೆ ನೆಲೆಯೂರಲು ಪ್ರಯತ್ನ ಸಾಗಿದೆ.

Assembly Election: ಯಾದಗಿರಿ ಕಾಂಗ್ರೆಸ್ ಟಿಕೆಟ್‌ಗೆ 17 ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ..!

ಯಾದಗಿರಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಅನೇಕರು ಅರ್ಜಿ ಸಲ್ಲಿಸಿದ್ದಾರಾದರೂ, ‘ಕೈ’ ಕಮಾಂಡ್‌ ಡಾ. ರೆಡ್ಡಿ ಅವರ ಪುತ್ರಿಯ ಚುನಾವಣೆ ಸ್ಪರ್ಧಿಸುವ ಅರ್ಜಿಯನ್ನು ಕರೆದು ಪಡೆದಿದ್ದು ವಿಶೇಷ. ಹಿಂದಿನ ಮರೆತು ಖರ್ಗೆಯವರು ಇದಕ್ಕೆ ಹಸಿರು ನಿಶಾನೆ ತೋರುವರೇ ಎಂಬ ಕುತೂಹಲ ಮೂಡಿದೆ. ಹಿರಿತನ ಕಡೆಗೆಣಿಸಿದ್ದಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್‌ ಬಿಟ್ಟಿದ್ದೆ ಎಂದಿರುವ ಡಾ. ಮಾಲಕರೆಡ್ಡಿ, ಖರ್ಗೆಯವರ ವಿಚಾರದಲ್ಲಿ ನನಾಗವ ವೈಯಕ್ತಿಕ ದ್ವೇಷವೇ ಇಲ್ಲ ಎಂದಿದ್ದಾರೆ.

ಇನ್ನು, ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಅವರನ್ನು ಮಾಜಿ ಸಿಎಂ ವೀರಪ್ಪ ಮೊಯ್ಲಿ ಪಕ್ಷ ವಾಪ್ಸಿಗೆ ಕರೆದಿದ್ದಾದರೂ, ಇದಕ್ಕೆ ನಿರಾಕರಿಸಿದ್ದೇನೆಂದು ಚಿಂಚನಸೂರು ಎರಡು ದಿನಗಳ ಹಿಂದಷ್ಟೇ ಹೇಳಿದ್ದಾರೆ. ಪ್ರಿಯಾಂಕ ಖರ್ಗೆ ವಿರುದ್ಧ ಚಿಂಚನಸೂರು ದೊಡ್ಡ ಅಸ್ತ್ರ ಎನ್ನುವ ಕಾರಣಕ್ಕೆ ಬಿಜೆಪಿ ಅವರನ್ನು ಹಿಡಿದಿಟ್ಟುಕೊಂಡಿದೆಯಾದರೂ, ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರ.
 

Follow Us:
Download App:
  • android
  • ios