ರಾಜ್ಯದಲ್ಲಿ ಬಿಜೆಪಿಯಿಂದ ಟಿಕೆಟ್‌ ವಂಚಿತರಾದ ಕೆಲವು ನಾಯಕರು ಬಿಜೆಪಿಗೆ ರಾಜಿನಾಮೆ ನೀಡಿ ಕಾಂಗ್ರೆಸ್‌ಗೆ ಬರಲು ಒಪ್ಪಿಕೊಂಡರೆ ಅವರನ್ನು ನಾವು ಧಾರಾಳವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ.

ಬೆಂಗಳೂರು (ಏ.11): ರಾಜ್ಯದಲ್ಲಿ ಬಿಜೆಪಿಯಿಂದ ಟಿಕೆಟ್‌ ವಂಚಿತರಾದ ಕೆಲವು ನಾಯಕರು ಬಿಜೆಪಿಗೆ ರಾಜಿನಾಮೆ ನೀಡಿ ಕಾಂಗ್ರೆಸ್‌ಗೆ ಬರಲು ಒಪ್ಪಿಕೊಂಡರೆ ಅವರನ್ನು ನಾವು ಧಾರಾಳವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ದೆಹಲಿಯಿಂದ ವಾಪಸ್‌ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಬಾಕ್ಸಿಂಗ್ ಕುಸ್ತಿ ಗಲಾಟೆ ಜೋರಾಗಿ ನಡೆಯುತ್ತಿದೆ. ನಾವು ಈಗಾಗಲೇ ಶೇಕಡ 75ರಷ್ಟು ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದ್ದೇವೆ. ಉಳಿದ ಅಭ್ಯರ್ಥಿಗಳ ಪಟ್ಟಿಯನ್ನಯ ಶುಭ ಮುಹೂರ್ತದಲ್ಲಿ ಬಿಡುಗಡೆ ಮಾಡುತ್ತೇವೆ. ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಬಗ್ಗೆ ಯಾವುದೇ ಪ್ರಸ್ತಾಪವನ್ನೂ ಮಾಡಿಲ್ಲ. ಆದರೆ, ಒಂದು ವೇಳೆ ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ಗೆ ಬರುವುದಾದರೆ ಅವರನ್ನು ನಾವು ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ಗೂ ಟಿಕೆಟ್‌ ಮಿಸ್

ಕರ್ನಾಟಕಕ್ಕೆ ಅಮುಲ್ ಕರೆ ತರುವ ವಿಚಾರವಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ಅಮುಲ್‌ ಹಾಲನ್ನು ರಾಜ್ಯದಲ್ಲಿ ಮಾರಾಟ ಮಾಡುವುನ್ನು ತಡೆಗಟ್ಟುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದಾರೆ. ಇನ್ನು ಮುಂದೆ ಜನರೇ ಅವರಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದರು. ‘ನಂದಿನಿ’ ಎನ್ನುವುದು ಈ ನಾಡಿನ ರೈತರ ಬದುಕಿನ ಪ್ರಶ್ನೆ. ಹಾಗಾಗಿ ನಂದಿನಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರನ್ನು ಉಳಿಸಿ ಎಂದು ಕರೆಕೊಟ್ಟಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌, ನಂತರ ತಾವೂ ನಂದಿನಿ ಉತ್ಪನ್ನಗಳನ್ನು ಖರೀದಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿ ಇರುವ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗೆ ಸೋಮವಾರ ಭೇಟಿ ನೀಡಿ ಹಾಲಿನ ಉತ್ಪನ್ನಗಳನ್ನು ಖರೀದಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದ ಸುಮಾರು 70 ಲಕ್ಷ ಮಂದಿ ರೈತರು ಹಾಲು ಉತ್ಪಾದಿಸುತ್ತಿರುವುದು ನಂದಿನಿ(Nandini brand)ಗೆ ಕೊಡಲು. ಗುಜರಾತ್‌ನ ಅಮೂಲ್‌(Amul milk) ಕೂಡ ರೈತರದ್ದು, ಅದಕ್ಕೆ ನಮ್ಮದೇನೂ ತಕರಾರಿಲ್ಲ. ಆದರೆ ಸರ್ಕಾರ ನಮ್ಮನ್ನು ಹಿಂದೆ ತಡೆದು ಅವರನ್ನು ಮುಂದಕ್ಕೆ ಬಿಟ್ಟು ಪ್ರೋತ್ಸಾಹ ಮಾಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

3ನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್‌ ಕಸರತ್ತು: ಬಿಜೆಪಿ ಲಿಸ್ಟ್‌ ರಿಲೀಸ್‌ ಬಳಿಕವೇ ಫೈನಲ್..!

ಇನ್ನೊಂದು ತಿಂಗಳು ಇರ್ತೀರಿ ಆ ನಂತರ ಮುಗಿಯಿತು. ನಮ್ಮ ರೈತರಿಗೆ ಯಾಕ್ರೀ... ಅವಮಾನ ಮಾಡುತ್ತೀರಿ? ನಾನು ಪ್ರತಿಭಟನೆ ಮಾಡ್ತಿಲ್ಲ, ಬೆಳ್ಳಂಬೆಳಗ್ಗೆ ಹಾಲು, ಬಿಸ್ಕೆಟ್‌, ಮೈಸೂರು ಪಾಕ್‌, ಚಾಕೊಲೆಟ್‌ ತೆಗೆದುಕೊಂಡಿದ್ದೇನೆ. ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ರೀತಿ ನಮ್ಮ ಮಕ್ಕಳು, ನಮ್ಮ ಹಾಲು ಕುಡಿಬೇಕು ಎಂದು ನಮ್ಮ ಜನರಿಗೆ ಹೇಳಿದ್ದೇನೆ. ರೇಷ್ಮೆ ನಿಯಂತ್ರಣ ಮಾಡ್ತಿಲ್ವ, ಹೊರಗಡೆಯಿಂದ ಬರುವ ವಸ್ತುಗಳನ್ನು ತಡೀತಿಲ್ವ. ತೀರಾ ನಿಲ್ಲಿಸಿ ಅಂತ ಹೇಳುತ್ತಿಲ್ವಾ?, ಮುಕ್ತ ಮಾರುಕಟ್ಟೆಸರಿ ಅನಿಸುತ್ತದೆ. ಆದರೂ ನಮ್ಮ ರೈತರನ್ನು ಉಳಿಸಿಕೊಳ್ಳಬೇಕು ಎಂದರು.