Asianet Suvarna News Asianet Suvarna News

ರಾಹುಲ್‌ ಅನರ್ಹತೆ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್‌ ಸತ್ಯಾಗ್ರಹ

ಹಿಮಾಚಲ ಪ್ರದೇಶ, ರಾಜಸ್ಥಾನ, ಕರ್ನಾಟಕ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ಹರ್ಯಾಣ, ಗುಜರಾತ್‌ ಸೇರಿದಂತೆ ಬಹುತೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

Condemning Rahul Gandhi Disqualification Congress Held Protest Across the Country grg
Author
First Published Mar 27, 2023, 12:30 AM IST

ನವದೆಹಲಿ(ಮಾ.27):  ಸಂಸತ್ತಿನಿಂದ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿದ್ದನ್ನು ಖಂಡಿಸಿ ಕಾಂಗ್ರೆಸ್‌ ಪಕ್ಷ ಭಾನುವಾರ ದೇಶಾದ್ಯಂತ ‘ಸಂಕಲ್ಪ ಸತ್ಯಾಗ್ರಹ’ ಹೆಸರಿನಲ್ಲಿ ಭಾರೀ ಪ್ರತಿಭಟನೆ ನಡೆಸಿತು. ರಾಷ್ಟ್ರ ರಾಜಧಾನಿ ದೆಹಲಿ, ಎಲ್ಲಾ ರಾಜ್ಯಗಳ ರಾಜಧಾನಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸಿದರು.

ದೆಹಲಿಯಲ್ಲಿ ಮಹಾತ್ಮ ಗಾಂಧಿ ಸ್ಮಾರಕವಿರುವ ರಾಜಘಾಟ್‌ನಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಸ್ಮಾರಕದ ಹೊರಗೆ ವೇದಿಕೆ ಸಿದ್ಧಪಡಿಸಿಕೊಂಡು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಧರಣಿ ನಡೆಸಲಾಯಿತು. ಗುಜರಾತ್‌ನಲ್ಲಿ ಪ್ರತಿಭಟನೆ ನಡೆಸಿದ ಹಲವು ಕಾಂಗ್ರೆಸಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ರಾಹುಲ್‌ ಗಾಂಧಿ ​ಸಂಸತ್‌ ಸದಸ್ಯತ್ವದಿಂದ ಅನರ್ಹ: ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ'

ವಿವಿಧ ರಾಜ್ಯಗಳಲ್ಲೂ ಪ್ರತಿಭಟನೆ:

ಇದೇ ವೇಳೆ ಹಿಮಾಚಲ ಪ್ರದೇಶ, ರಾಜಸ್ಥಾನ, ಕರ್ನಾಟಕ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ಹರ್ಯಾಣ, ಗುಜರಾತ್‌ ಸೇರಿದಂತೆ ಬಹುತೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಲಾಲ್‌ ದರ್ವಾಜಾ ಬಳಿಗೆ ಪ್ರತಿಭಟನೆ ನಡೆಸಲು ಬಂದ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಜಗದೀಶ್‌ ತಹೋರ್‌, ವಿಧಾನಸಭೆ ವಿಪಕ್ಷ ನಾಯಕ ಅಮಿತ್‌ ಚಾವ್ಡಾ, ಪಕ್ಷದ ಹಿರಿಯ ನಾಯಕ ಭರತ್‌ಸಿನ್ಹ ಸೋಲಂಕಿ ಮುಂತಾದವರನ್ನು ಪೊಲೀಸರು ವಶಕ್ಕೆ ಪಡೆದರು.

ದೇಶ ಭ್ರಷ್ಟರ ಟೀಕಿಸಿದರೆ ಬಿಜೆಪಿಗೆ ನೋವು: ಖರ್ಗೆ

ಸತ್ಯಾಗ್ರಹದ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ಮೋದಿಗಳ ವಿರುದ್ಧ ರಾಹುಲ್‌ ಮಾತನಾಡಿದ್ದು ಒಬಿಸಿಗಳಿಗೆ ಅವಮಾನ ಎಂದು ಬಿಜೆಪಿಯವರು ಹೇಳುತ್ತಾರೆ. ನೀರವ್‌ ಮೋದಿ ಒಬಿಸಿಗೆ ಸೇರಿದವನೇ? ಲಲಿತ್‌ ಮೋದಿ, ಮೆಹುಲ್‌ ಚೋಕ್ಸಿ ಒಬಿಸಿಯೇ? ಅವರು ದೇಶದ ಜನರ ಹಣದೊಂದಿಗೆ ಪರಾರಿಯಾಗಿದ್ದಾರೆ. ಅಂತಹ ದೇಶಭ್ರಷ್ಟರನ್ನು ಟೀಕಿಸಿದರೆ ಬಿಜೆಪಿಗೇಕೆ ನೋವಾಗುತ್ತದೆ? ನೀವು ದೇಶ ಉಳಿಸಲು ಕೆಲಸ ಮಾಡಿದವರನ್ನು ಶಿಕ್ಷಿಸುತ್ತೀರಿ, ದೇಶದ ಹಣ ಲೂಟಿ ಮಾಡಿದವರನ್ನು ವಿದೇಶಕ್ಕೆ ಕಳಿಸುತ್ತೀರಿ’ ಎಂದು ವಾಗ್ದಾಳಿ ನಡೆಸಿದರು.

ಅನರ್ಹ ಸಂಸದ ಎಂದು ಟ್ವಿಟ್ಟರ್‌ ಪ್ರೊಫೈಲ್‌ನಲ್ಲಿ ಬರೆದುಕೊಂಡ 'ಕೈ' ನಾಯಕ ರಾಹುಲ್‌ ಗಾಂಧಿ

ಮೀರ್‌ ಜಾಫರ್‌ಗೆ ಹೋಲಿಕೆ ಸರಿಯೇ?: ಪ್ರಿಯಾಂಕಾ

ರಾಹುಲ್‌ ಅನರ್ಹತೆಯ ವಿರುದ್ಧ ತೀಕ್ಷ$್ಣವಾಗಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ‘ನನ್ನ ಕುಟುಂಬದ ರಕ್ತ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪೋಷಿಸಿದೆ. ನಾವು ದೇಶದ ಪ್ರಜಾಪ್ರಭುತ್ವಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ. ಈ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದವರು ಕಾಂಗ್ರೆಸ್‌ನ ಮಹಾನ್‌ ನಾಯಕರು. ಬಿಜೆಪಿಯವರು ನಮ್ಮನ್ನು ಹೆದರಿಸಬಹುದು ಅಂದುಕೊಂಡಿದ್ದರೆ ಅದು ತಪ್ಪು. ನಾವು ಹೆದರುವುದಿಲ್ಲ. ದೇಶದ ಏಕತೆಗಾಗಿ ಸಾವಿರಾರು ಕಿಲೋಮೀಟರ್‌ ನಡೆದ ಹಾಗೂ ಹುತಾತ್ಮ ಪ್ರಧಾನಿಯ ಮಗ ಯಾವತ್ತೂ ಈ ದೇಶಕ್ಕೆ ಅವಮಾನ ಮಾಡುವುದಿಲ್ಲ’ ಎಂದು ಹೇಳಿದರು.

‘ಮಾಜಿ ಪ್ರಧಾನಿಯ ಮಗನನ್ನು ಮೀರ್‌ ಜಾಫರ್‌ಗೆ ಹೋಲಿಸುತ್ತೀರಿ. ರಾಹುಲ್‌ಗೆ ತಾಯಿ ಯಾರೆಂದೇ ಗೊತ್ತಿಲ್ಲ ಎಂದು ಬಿಜೆಪಿ ಮುಖ್ಯಮಂತ್ರಿಯೊಬ್ಬರು ಹೇಳುತ್ತಾರೆ. ಪ್ರತಿದಿನ ರಾಹುಲ್‌ ಅವಮಾನ ಮಾಡುತ್ತೀರಿ. ಆದರೆ ಯಾವುದೇ ಕೇಸು ದಾಖಲಿಸುತ್ತಿಲ್ಲ’ ಎಂದು ಕಿಡಿಕಾರಿದರು. ಅಲ್ಲದೆ, ‘ವಿದೇಶದ 2 ವಿವಿಗಳಿಂದ ರಾಹುಲ್‌ ಪದವಿ ಪಡೆದಿದ್ದರೂ ಅವರನ್ನು ಪಪ್ಪು ಎಂದು ಬಿಜೆಪಿ ಮೂದಲಿಸುತ್ತದೆ’ ಎಂದು ಕಿಡಿಕಾರಿದರು.

Follow Us:
Download App:
  • android
  • ios